Yadgiri | ಶಾಂತಿ, ಸೌಹಾರ್ದಯುತವಾಗಿ ಬಕ್ರೀದ್ ಹಬ್ಬ ಆಚರಿಸಿ : ಡಿಸಿ ರಾಹುಲ್ ಪಾಂಡ್ವೆ
ಯಾದಗಿರಿ : ಮೇ 28ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು, ಜಿಲ್ಲೆಯಲ್ಲಿ ಎಲ್ಲಾ ಧರ್ಮದ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುವ ಪರಂಪರೆ ಇದ್ದು, ಬಕ್ರೀದ್ ಹಬ್ಬವನ್ನೂ ಅದೇ ರೀತಿಯಲ್ಲಿ ಆಚರಿಸಬೇಕು ಎಂದು ಕರೆ ನೀಡಿದರು.
“ಸಣ್ಣಪುಟ್ಟ ಘಟನೆಗಳಿಂದ ಯುವಕರ ಮೇಲೆ ಪ್ರಕರಣಗಳು ದಾಖಲಾಗುವುದು ಸರಿಯಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಪಾಲಿಸಿ ಹಬ್ಬವನ್ನು ಸಂತಸದಿಂದ ಆಚರಿಸಬೇಕು” ಎಂದು ತಿಳಿಸಿದರು.
ಬಕ್ರೀದ್ ಸಂದರ್ಭದಲ್ಲಿ ಅಕ್ರಮ ಗೋಹತ್ಯೆ, ಗೋ ಸಾಗಾಣಿಕೆ ಹಾಗೂ ಮಾರಾಟ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಹಬ್ಬದ ವೇಳೆ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು, ಹಿಂದೂ-ಮುಸ್ಲಿಂ ಬಾಂಧವರು ಈ ಹಿಂದೆ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವುದನ್ನು ಸ್ಮರಿಸಿ, ಈ ಬಾರಿಯೂ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.
“ಶಾಂತಿ ಕದಡುವವರ ಬಗ್ಗೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಹಬ್ಬದ ಸಂದರ್ಭದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು” ಎಂದು ಹೇಳಿದರು.
ಇದ್ಗಾ ಹಾಗೂ ಪ್ರಾರ್ಥನಾ ಸ್ಥಳಗಳಲ್ಲಿ ಸೂಕ್ತ ಭದ್ರತೆ ಒದಗಿಸಲಾಗುವುದು. ಪ್ರತಿ ಉಪವಿಭಾಗಕ್ಕೆ ಇಬ್ಬರು ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಲಾಗುವುದು. ಅಕ್ರಮ ಗೋ ಸಾಗಾಣಿಕೆ ತಡೆಯಲು 12 ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.
“ನೈತಿಕ ಪೊಲೀಸ್ಗಿರಿ ಮಾಡದೇ, ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು” ಎಂದು ಅವರು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ ಸ್ವಾಗತಿಸಿದರು. ಸಹಾಯಕ ಆಯುಕ್ತ ಶ್ರೀಧರ ಗೋಟೂರ, ಡಿಎಸ್ಪಿ ಸುರೇಶ್, ಯಾದಗಿರಿ ತಂಜುಮಿನ್ ಮುಸ್ಲಿಂಮಿನ್ ಅಧ್ಯಕ್ಷ ಇರ್ಫಾನ್ ಹುಸೇನ್ ಬಾದಲ್, ಉಪಾಧ್ಯಕ್ಷ ವಹೀದ್ ಮಿಯಾ,ಭಾವೈಕ್ಯತೆ ಸಮಿತಿಯ ವಿಶ್ವನಾಥ ಸಿರವಾಳ,ಡಿ ಎಸ್ ಎಸ್ ಸಂಚಾಲಕ ಭೀಮಣ್ಣ ಹೊಸಮನಿ, ಶರಣಪ್ಪ ಗುಳಿಗಿ,
ಗುಲಾಮ್ ಜಿಲಾನಿ,ಸದ್ದಾಂ ಹುಸೇನ್,ಸಲೀಂ ಪಟೇಲ್, ಇತರರು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆ ನೀಡಿದರು.