×
Ad

ಮಾನವೀಯ ಮೌಲ್ಯದ ಮಹಾ ಕೊಂಡಿ ಮುಂದಿನ ಪೀಳಿಗೆಗೆ ಪ್ರೇರಣೆ : ಡಾ.ಸದಾನಂದ ಪೆರ್ಲ

ಸಂಜೀವಿ ನಾರಾಯಣ ಅಡ್ಯಂತಾಯ ಶತ ಸಂಸ್ಮರಣೆ, ಸಾಧಕರಿಗೆ ಸನ್ಮಾನ

Update: 2025-08-31 22:47 IST

ಮಂಗಳೂರು , ಆ.31: ಹಿರಿಮೆಯ ಮನೆತನಗಳ ಪರಂಪರೆಯ ಹಿರಿತನದಲ್ಲಿ ಬೆಳೆದು ಸಂಸ್ಕಾರ ನೀಡಿ ಸಮಾಜಕ್ಕೆ ಕೊಡುಗೆಯಾಗಿ ಬಾಳುವುದೇ ನಿಜವಾದ ಕುಟುಂಬದ ಆದರ್ಶ ಅಂತಹ ಮಾನವೀಯ ಮೌಲ್ಯದ ಕೊಂಡಿಯಾಗಿ ಬೆಳೆದವರು ಸಂಜೀವಿ ನಾರಾಯಣ ಅಡ್ಯಂತಾಯ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಹೇಳಿದ್ದಾರೆ.

ಮಂಗಳೂರಿನ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ವತಿಯಿಂದ ಆಗಸ್ಟ್ 30 ರಂದು ನಡೆದ ಸಂಜೀವಿ ನಾರಾಯಣ ಅಡ್ಯಂತಾಯ ಸ್ಮರಣಾರ್ಥ ಸಂಜೀವಿನಿ ಪ್ರಶಸ್ತಿ ಮತ್ತು ಸಂಜೀವಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಸಂಸ್ಮರಣೆ ಭಾಷಣ ಮಾಡಿದರು.

ಆದರ್ಶ ಮತ್ತು ಮಾದರಿ ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಮುಂದಿನ ಪೀಳಿಗೆಗೆ ಇಂತಹ ಸಾರ್ಥಕ ಬದುಕಿನ ಆದರ್ಶದ ಪರಂಪರೆಯನ್ನು ಕಟ್ಟಿಕೊಟ್ಟ ಹಾಗೂ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿದವರ ಬಗ್ಗೆ ಸ್ಮರಣೆ ಮಾಡುವುದರಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ ಮತ್ತು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದರು.

ಬೊಳ್ಯ ಗುತ್ತು ಮತ್ತು ಎಣ್ಮಕಜೆ ಮನೆತನದ ಸಾಂಸ್ಕೃತಿಕ ಗರಿಮೆಯನ್ನು ಮೈಗೂಡಿಸಿ ಮಕ್ಕಳನ್ನು ವಿವಿಧ ರಂಗದಲ್ಲಿ ತೊಡಗಿಸುವಂತೆ ಸಂಸ್ಕಾರ ನೀಡಿರುವ ಸಂಜೀವಿ ಅವರದು ತ್ಯಾಗದ ಬದುಕು.ರಾಜಕೀಯಕ್ಕೆ ಶಕುಂತಳ ಶೆಟ್ಟಿ, ಉದ್ಯಮಿ ಶಶಿಕಲಾ ಶೆಟ್ಟಿ, ಗೋಪಾಲಕೃಷ್ಣ ಅಡ್ಯಂತಾಯ, ತುಳು , ಕನ್ನಡ ಸಾಹಿತಿಯಾಗಿ ರೂಪಕಲಾ ಆಳ್ವ ಹೀಗೆ ಮಕ್ಕಳನ್ನು ಸಂಸ್ಕಾರ ನೀಡಿ ಬೆಳೆಸಿದ ಬಗೆ ಆದರ್ಶಪ್ರಾಯವಾದುದು ಎಂದು ಡಾ.ಪೆರ್ಲ ಹೇಳಿದರು.

ಅಮ್ಮ ತ್ಯಾಗದ ಸಂಕೇತ ಮತ್ತು ಪರಂಪರೆ ಸಂಸ್ಕಾರದ ಮಾದರಿ ಯಾಗಿದ್ದು ಸಂಜೀವಿ ಅಡ್ಯಂತಾಯರು ಅವಿಭಕ್ತ ಕುಟುಂಬ ಜೀವನ ಮಾಡಿ ಶ್ರೀಮತಿಕೆಯಿದ್ದರೂ ಕಷ್ಟದ ಬದುಕಿನ ಶ್ರೇಷ್ಠ ಪಾಠ ಕಲಿತ ದ್ಯೋತಕವಾಗಿ ಆದರ್ಶದ ಬಾಳ್ವೆ ನಡೆಸಿದರು.ಅಂತಹ ಅಮ್ಮಂದಿರು ಹೆಚ್ಚಾಗಿ ಆದರ್ಶ ಸಮಾಜ ನಿರ್ಮಾಣವಾಗಲಿ ಎಂದು ವಿಶ್ರಾಂತ ಕುಲಪತಿ ಡಾ. ಚಿನ್ನಪ್ಪ ಗೌಡ ಹೇಳಿದರು.

ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘಕ್ಕೆ ಈ ಸಂಸ್ಮರಣೆ ಕಾರ್ಯಕ್ರಮ ಹೆಮ್ಮೆ ತಂದಿದೆ ಮತ್ತು ಸಂಜೀವಿನಿ ಪ್ರಶಸ್ತಿ ಪುರಸ್ಕೃತ ಮೂವರು ಸಾಧಕರನ್ನು ಗುರುತಿಸಿರುವುದು ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಶಿಕ್ಷಕಿ ಕೆ ಎ. ರೋಹಿಣಿ ಅಭಿಪ್ರಾಯಪಟ್ಟರು.

ತಾಯಿ ಕೊಟ್ಟ ಮಮತೆ ಮತ್ತು ಸಂಸ್ಕಾರದಿಂದ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಹೊಂದಬಹುದು ಎಂಬುದಕ್ಕೆ ಸಂಜೀವಿ ಅಡ್ಯಂತಾಯ ಕುಟುಂಬ ಸಾಕ್ಷಿಯಾಗಿದೆ ಇಲ್ಲವಾದರೆ ತಾನು ವಿಧಾನ ಸಭೆ ಪ್ರವೇಶಿಸುವ ಅರ್ಹತೆ ಪಡೆಯುತ್ತಿರಲಿಲ್ಲ.ಅಮ್ಮನ ಅನ್ನ ದಾಸೋಹದ ಪುಣ್ಯ ಜೀವನುದ್ಧಕ್ಕೂ ಲಭಿಸಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಭಾವುಕರಾಗಿ ಸ್ಮರಿಸಿದರು.

*ಸಂಜೀವಿನಿ ಪ್ರಶಸ್ತಿ ಪುರಸ್ಕೃತರು: ಖ್ಯಾತ ಯಕ್ಷಗಾನ ಕಲಾವಿದರಾದ ಕೆಎಚ್ ದಾಸಪ್ಪ ರೈ ಉದ್ಯಮಿ ಸುಲೋಚನಾ ಭಟ್ ಬೆದ್ರಡಿ ಸೀತಂಗೋಳಿ ಹಾಗೂ ಕೃಷಿಕರಾದ ಉಮಾವತಿ ವೆಂಕಪ್ಪ ಪೂಜಾರಿ ಬೊಂಡಂತಿಲ ಇವರನ್ನು ಶಾಲು, ಸ್ಮರಣಿಕೆ ಹಾಗೂ ನಗದು ಪುರಸ್ಕಾರಗಳೊಂದಿಗೆ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಕಲಾ ಆರ್ ಶೆಟ್ಟಿ ಚೆನ್ನೈ, ರವಿಕಲಾ, ಚಂದ್ರಕಲಾ, ರೂಪಕಲಾ , ಗೋಪಾಲಕೃಷ್ಣ ಅಡ್ಯಂತಾಯ, ಕೃಷ್ಣ ಪ್ರಸಾದ್ ಅಡ್ಯಂತಾಯ, ಸ್ವಾತಿ , ಬಿಪಿನ್ ಶೆಟ್ಟಿ, ಅಕ್ಷತಾ, ಸಚಿನ್ ಶೆಟ್ಟಿ ಶ್ವೇತಾ, ಅಕ್ಷತ್ ಶೆಟ್ಟಿ, ದಿಪುಲ್, ಪೃಥ್ವಿರಾಜ್ ಭಂಡಾರಿ , ಆಶ್ರಿತಾ ಶೆಟ್ಟಿ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃತರು ಸನ್ಮಾನಕ್ಕೆ ಅಭಿವಂದನೆ ಸಲ್ಲಿಸಿದರು.

ಪ್ರಶಸ್ತಿ ಪ್ರಾಯೋಜಕರಾದ ರೂಪಕಲಾ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮೋಲಿ ಮಿರಾಂಡಾ ವಂದಿಸಿದರು.ಉಪನ್ಯಾಸಕಿ ಕವಿತಾ ಪಕ್ಕಳ ನಿರೂಪಣೆ ಮಾಡಿದರು. ಜರ್ನಿ ಥಿಯೇಟರ್ ಮಂಗಳೂರು ತಂಡ ದ ಕಲಾವಿದರು ರಂಗಗೀತೆ ಪ್ರಸ್ತುತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News