×
Ad

ಪಿಎಂಜೆಜೆವೈ - ಪಿಎಂಎಸ್‌ಬಿವೈ ನೋಂದಣಿ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಕರೆ

Update: 2025-09-19 17:54 IST

ಮಂಗಳೂರು, ಸೆ.19: ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ (ಪಿಎಂಜೆಜೆಬಿವೈ) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ (ಪಿಎಂಎಸ್‌ಬಿವೈ) ಯೋಜನೆಗಳ ನೋಂದಣಿಯನ್ನು ಹೆಚ್ಚಿಸುವ ಬಗ್ಗೆ ದ.ಕ. ಜಿಲ್ಲೆಯ ಬ್ಯಾಂಕ್‌ಗಳು ಗಮನ ಹರಿಸಬೇಕು ಎಂದು ಜಿ.ಪಂ. ಸಿಇಒ ನರ್ವಾಡೆ ವಿನಾಯಕ್ ಖರ್ಭಾರಿ ಕರೆ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಲೀಡ್ ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ಮತ್ತು ಬ್ಯಾಂಕಿಂಗ್ ಅಭಿವೃದ್ಧಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಗೆ ಪೂರಕವಾದ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪ್ರತಿಯೊಬ್ಬರನ್ನು ಈ ಯೋಜನೆಗಳ ವ್ಯಾಪ್ತಿಗೆ ತರಲು ಬ್ಯಾಂಕುಗಳು ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಜನ ಸುರಕ್ಷಾ ಅಭಿಯಾನ ನಡೆಸುವ ಮೂಲಕ ಗ್ರಾಮೀಣ ಪ್ರದೇಶಗಳತ್ತ ಗಮನಹರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಬ್ಯಾಂಕುಗಳು ಹೆಚ್ಚಿನ ಶಾಖೆಗಳನ್ನು ಹೊಂದಿರುವುದರಿಂದ, ಬ್ಯಾಂಕರ್‌ಗಳು ನಗರ ಪ್ರದೇಶಗಳತ್ತಲೂ ಗಮನಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲೆಯ ಕೆಲವು ಬ್ಯಾಂಕುಗಳು ಈ ಯೋಜನೆಗಳ ಪ್ರಗತಿಯಲ್ಲಿ ಹಿಂದುಳಿದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಾರ್ವಜನಿಕರಿಗೆ ಪೂರಕವಾದ ಇಂತಹ ಯೋಜನೆಗಳ ಬಗ್ಗೆ ಬ್ಯಾಂಕ್‌ಗಳು ಹೆಚ್ಚಿನ ಒತ್ತು ನೀಡಬೇಕು. ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ 15 ದಿನಗಳ ಕಾಲ ಸ್ವಚ್ಛ ಕಾರ್ಮಿಕ ಶಿಬಿರವನ್ನು ನಡೆಸಲಾಗುತ್ತಿದೆ. ಈ ಅವಧಿ ಯಲ್ಲಿ, ಪಂಚಾಯತ್ ಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಬ್ಯಾಂಕರ್‌ಗಳು ಕಾರ್ಮಿಕರನ್ನು ಭೇಟಿ ಮಾಡಿ ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿ ಮಾಡಿಕೊಳ್ಳಬಹುದು ಎಂದರು.

ನಗರದ ಪ್ರತಿ ವಾರ್ಡ್‌ನಲ್ಲಿ ಫಲಾನುಭವಿಗಳ ನೋಂದಣಿಯನ್ನು ನಡೆಸಲು ಬ್ಯಾಂಕ್‌ಗಳಿಗೆ ಸಹಾಯ ಮಾಡುವಂತೆ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಿಗೂ ಈ ಸಂದರ್ಭ ಸಲಹೆ ನೀಡಿದರು.

ಪಿಎಂಜೆಜೆಬಿವೈ ಯೋಜನೆಯಡಿ ಪ್ರಸಕ್ತ ಸಾಲಿನ ತ್ರೈಮಾಸಿಕದಲ್ಲಿ ವಿವಿಧ ಬ್ಯಾಂಕ್‌ಗಳಿಂದ 14575 ಮಂದಿಯನ್ನು ನೋಂದಣಿ ಮಾಡಲಾಗಿದೆ. ಪಿಎಂಎಸ್‌ಬಿಐ ಯೋಜನೆಯಡಿ ಈ ಅವಧಿಯಲ್ಲಿ 31633 ಮಂದಿಯನ್ನು ನೋಂದಣಿ ಮಾಡಲಾಗಿದೆ. ಅಟಲ್ ಪಿಂಚಣಿ (ಎಪಿವೈ) ಯೋಜನೆಯಡಿ 7025 ಮಂದಿಯನ್ನು ನೋಂದಣಿ ಮಾಡಲಾಗಿದೆ. ಪಿಎಂ ಸ್ವ ನಿಧಿ ಯೋಜನೆಯಡಿ ಪ್ರಥಮ ಕಂತಿನಡಿ 840, ದ್ವಿತೀಯ ಕಂತಿನಡಿ 994 ಹಾಗೂ ತೃತೀಯ ಕಂತಿನಡಿ 875 ಮಂಜೂರಾತಿ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ ಸಭೆಗೆ ಮಾಹಿತಿ ನೀಡಿದರು.

ಮುದ್ರಾ ಯೋಜನೆಯಡಿ 16664 ಖಾತೆಗಳಿಗೆ 223.24 ಕೋಟಿ ರೂ. ಸಾಲ ವಿತರಿಸಲಾಗಿದೆ. ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ಕಳೆದ ತ್ರೈಮಾಸಿಕದಲ್ಲಿ 8075 ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ ಎಂದು ಕವಿತಾ ಶೆಟ್ಟಿ ವಿವರ ನೀಡಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕಾಗಿ 1.20 ರೂಆರ್ಥಿಕ ನೆರವು ನೀಡಲಾಗುತ್ತದೆ. ಆದರೆ ಮನೆ ಪೂರ್ಣಗೊಳಿಸಲು ಈ ಮೊತ್ತ ಸಾಕಾಗುವುದಿಲ್ಲ. ಆದ್ದರಿಂದ, ಬ್ಯಾಂಕರ್‌ಗಳು ಫಲಾನುಭವಿಗಳಿಗೆ ಸಾಲ ನೀಡುವತ್ತ ಗಮನಹರಿಸಬೇಕು ಎಂದು ಜಿ.ಪಂ. ಸಿಇಒ ಹೇಳಿದರು.

ಆದ್ಯತಾ ವಲಯದ ಶಿಕ್ಷಣದಡಿಯಲ್ಲಿ 22.08 ಕೋಟಿ ರೂ.ಗಳ ವಿತರಣೆಯಾಗಿದ್ದು, ತ್ರೈಮಾಸಿಕದ 54.74 ಕೋಟಿ ರೂ.ಗಳ ಗುರಿಗೆ ಹೋಲಿಸಿದರೆ ಶೇ. 40.33 ರಷ್ಟು ಸಾಧನೆಯಾಗಿದೆ. ವಸತಿ ಯೋಜನೆಯಡಿಯಲ್ಲಿ 74.22 ಕೋಟಿ ರೂ.ಗಳ ವಿತರಣೆಯಾಗಿದ್ದು, ತ್ರೈಮಾಸಿಕದಲ್ಲಿ 167.78 ಕೋಟಿ ರೂ.ಗಳ ಗುರಿಯ ಶೇ. 44.33ರಷ್ಟು ಸಾಧನೆಯಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ ವಿವರ ನೀಡಿದರು.

ವಸತಿ ಮತ್ತು ಶಿಕ್ಷಣ ಕ್ಷೇತ್ರದ ಅಡಿಯಲ್ಲಿ ಸಾಲಗಳ ವಿತರಣೆಯಲ್ಲಿ ಇಳಿಕೆಯಾಗಿರುವ ಬಗ್ಗೆ ಕೆನರಾ ಬ್ಯಾಂಕ್ ಡಿಜಿಎಂ ಲತಾ ಪಿ ಕುರುಪ್ ಅವರು, ಸಾಮಾನ್ಯವಾಗಿ ಎರಡನೇ ತ್ರೈಮಾಸಿಕದಲ್ಲಿ ಶಿಕ್ಷಣ ಸಾಲ ವಿತರಣೆ ಹೆಚ್ಚಾಗುತ್ತದೆ ಎಂದು ಹೇಳಿದರು.

ಇ-ಖಾತಾ ನೀಡುವಿಕೆಯಲ್ಲಿ ವಿಳಂಬ, ಕೆಂಪು ಕಲ್ಲುಗಳ ಕೊರತೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಬ್ಯಾಂಕ್‌ ಗಳಿಂದ ಗೃಹ ಸಾಲಗಳು ಮಂಜೂರು ಆಗಿದ್ದರೂ ವಿತರಣೆಗೆ ವಿಳಂಬವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.

ಆರ್‌ಬಿಐ ಎಜಿಎಂ ಅರುಣ್ ಕುಮಾರ್ ಗ್ರಾಹಕರ ಮರು ಇ-ಕೆವೈಸಿ ಬಗ್ಗೆ ಗಮನ ಹರಿಸಬೇಕು ಎಂದು ಈ ಸಂದರ್ಭ ಕರೆ ನೀಡಿದರು. ನಬಾರ್ಡ್ ಡಿಡಿಎಂ ಸಂಗೀತಾ ಕರ್ತ ಉಪಸ್ಥಿತರಿದ್ದು ಸಲಹೆ ನೀಡಿದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News