ಬಂಟ್ವಾಳ: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಜನರಲ್ ಸ್ಟೋರ್ ಹಸ್ತಾಂತರ
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ನೆಹರೂ ನಗರದ ಮೂವರು ಅನಾಥ ಹೆಣ್ಣು ಮಕ್ಕಳ ತಾಯಿಯಾಗಿರುವ ಓರ್ವ ಬಡ ವಿಧವೆಗೆ ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ವತಿಯಿಂದ ನೀಡಿದ, ದಿನಬಳಕೆಯ ವಸ್ತುಗಳ ಮಾರಾಟದ "ಶಾಂತಿ ಜನರಲ್ ಸ್ಟೋರ್" ನ್ನು ಬೋಳಂಗಡಿ ಹವ್ವಾ ಜುಮ್ಆ ಮಸ್ಜಿದ್ ಖತೀಬ್ ಮೌಲಾನಾ ಯಹ್ಯಾ ತಂಙಳ್ ಮದನಿಯವರು ಉದ್ಘಾಟಿಸಿದರು.
ದುಡಿಯುವ ಕೈಗಳಿಗೆ ಶಕ್ತಿ ನೀಡುವ ಇಂತಹ ಸೇವೆಗಳು ಅತ್ಯುತ್ತಮವಾದುದೆಂದು ಶ್ಲಾಘಿಸಿ, ಇದಕ್ಕೆ ನೆರವಾದ ಮತ್ತು ಪರಿಶ್ರಮಿಸಿದ ಎಲ್ಲರಿಗೂ ಅಲ್ಲಾಹನು ತಕ್ಕುದಾದ ಪ್ರತಿಫಲ ನೀಡಿ ಅನುಗ್ರಹಿಸಲೆಂದು ಪ್ರಾರ್ಥಿಸಿದರು.
ಊರಿನ ಪ್ರಮುಖರಾದ ಪಿ. ಎಸ್. ಅಬ್ದುಲ್ ಹಮೀದ್, ಉಮರ್ ಕಾಸರಗೋಡು ಸಂದರ್ಭೋಚಿತ ಮಾತಾಡಿ ಶುಭ ಹಾರೈಸಿದರು. ಜಮಾಅತೆ ಇಸ್ಲಾಮೀ ಹಿಂದ್ ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಮುಖ್ತಾರ್ ಅಹ್ಮದ್ ಮಾತಾಡುತ್ತಾ, ದೀನುಲ್ ಇಸ್ಲಾಮ್ನಲ್ಲಿ ಆರಾಧನೆಗಳಂತೆಯೇ, ಇಂತಹ ಸೇವಾ ಚಟುವಟಿಕೆಗಳಿಗೂ ಬಹಳ ಪ್ರಾಧಾನ್ಯತೆ ಇದೆ. ಜಮಾಅತೆ ಇಸ್ಲಾಮೀ ತನ್ನ ಆರಂಭದ ದಿನದಿಂದಲೇ ಸಮಾಜ ಸೇವೆಗೆ ಬಹಳ ಮಹತ್ವ ಕಲ್ಪಿಸಿಕೊಂಡು ಬಂದಿದೆ ಎಂದರು.
ಸಮಾಜ ಸೇವಾ ಘಟಕ, ಮಂಗಳೂರು ಸದಸ್ಯರಾದ ಮುಹಮ್ಮದ್ ಮುಹ್ಸಿನ್ರವರು, "ನಮ್ಮ ಸೇವಾ ಘಟಕ ಕಳೆದ ಹಲವಾರು ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಿವಿಧ ಸೇವೆಗಳನ್ನು ಸಮರ್ಪಿಸುತ್ತಲೇ ಬಂದಿದೆ. ಇದು ಅದರದ್ದೇ ಮುಂದುವರಿದ ಭಾಗವೆನ್ನುತ್ತಾ ಸಮಾರೋಪದ ನುಡಿಗಳೊಂದಿಗೆ ಶುಭ ಹಾರೈಸಿದರು. ಪಾಣೆಮಂಗಳೂರು ಸಮಾಜ ಸೇವಾ ಘಟಕದ ಅಧ್ಯಕ್ಷರಾದ ಕಾಸಿಮ್ ಚೆಂಡಾಡಿ, ಆದಮಾಕ, ಇಬ್ರಾಹಿಂ ಚೆಂಡಾಡಿ, ಸಲೀಮ್ ಬೋಳಂಗಡಿ, ಮುಹಮ್ಮದ್ ಬೋಳಂಗಡಿ, ಶಂಶೀರ್ ಮೆಲ್ಕಾರ್ ಮತ್ತಿತರರು ಉಪಸ್ಥಿತರಿದ್ದರು.