×
Ad

ರೋಗ ಗುರುತಿಸುವಿಕೆ ಹಾಗೂ ಚಿಕಿತ್ಸೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಅಗತ್ಯ: ಡಾ. ಆಶಾ ಕಿಶೋರ್

ಅಂತರರಾಷ್ಟ್ರೀಯ ನರವಿಜ್ಞಾನ ರೋಗನಿರೋಧಕ ಕಾರ್ಯಾಗಾರ

Update: 2026-03-07 21:44 IST

ಕೊಣಾಜೆ: ಭಾರತದಲ್ಲಿ ಮಲ್ಟಿಪಲ್ ಸ್ಕ್ಲೆರೋಸಿಸ್ ಸೇರಿದಂತೆ ಕೆಲವು ನರವಿಜ್ಞಾನ ರೋಗಗಳು ಇಂದಿನ ದಿನಗಳಲ್ಲಿ ಯುವಕರಲ್ಲಿಯೂ ಕಂಡುಬರುತ್ತಿವೆ. ಎಲ್ಲ ವಯೋಮಾನದವರಲ್ಲೂ ಈ ರೋಗಗಳ ಪರಿಣಾಮ ಕಾಣಿಸುತ್ತಿದ್ದು, ಜನ್ಯ ಕಾರಣಗಳು ಸಹಿತ ಬೇರೆ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ರೋಗದ ಸ್ವರೂಪವನ್ನು ಬದಲಿಸುವ ಚಿಕಿತ್ಸೆಯ ಕುರಿತು ಸಂಶೋಧನೆಗಳು ನಿರಂತರವಾಗಿದೆ ಎಂದು ಕೇರಳದ ಏಸ್ಟರ್‌ ಕ್ಲಸ್ಟರ್‌ ಇದರ ಪಾರ್ಕಿನ್ಸನ್ಸ್‌ ಆಂಡ್‌ ಮೂವ್‌ ಮೆಂಟ್‌ ಡಿಸಾರ್ಡರ್ಸ್‌ ಸೆಂಟರ್‌ ನಿರ್ದೇಶಕಿ ಡಾ. ಆಶಾ ಕಿಶೋರ್ ಅಭಿಪ್ರಾಯಪಟ್ಟರು.

ನಿಟ್ಟೆ (ಪರಿಗಣಿತ ವಿಶ್ವವಿದ್ಯಾಲಯ)ಗೆ ಸೇರಿದ ಕೆ. ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರ ವಿಜ್ಞಾನ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾದ ಅಂತರರಾಷ್ಟ್ರೀಯ ನರವಿಜ್ಞಾನ ರೋಗ ನಿರೋಧಕ ಕಾರ್ಯಾಗಾರವನ್ನು ದೇರಳಕಟ್ಟೆ ಎ.ಬಿ ಶೆಟ್ಟಿ ಮಹಾವಿದ್ಯಾಲಯದ ಆವಿಷ್ಕಾರ್‌ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ನರವಿಜ್ಞಾನ ರೋಗಗಳನ್ನು ಗುರುತಿಸಲು ಈಗ ಕ್ಲಿನಿಕಲ್ ಪರೀಕ್ಷೆಗಳ ಜೊತೆಗೆ ಸಿ.ಟಿ. ಸ್ಕ್ಯಾನ್, ಬಯೋಗ್ರಾಂ ಸೇರಿದಂತೆ ಹಲವು ಆಧುನಿಕ ವಿಧಾನಗಳನ್ನು ಬಳಸಲಾಗುತ್ತಿದೆ. ಕೇವಲ ಸ್ಟಿರಾಯ್ಡ್ ಚಿಕಿತ್ಸೆಗಿಂತ ಮುಂದಾಗಿ ಹಲವು ಹೊಸ ಚಿಕಿತ್ಸೆ ವಿಧಾನಗಳು ಅಭಿವೃದ್ಧಿಯಾಗಿವೆ. ಇಂತಹ ರೋಗಗಳಿಗೆ ದೀರ್ಘಾವಧಿಯ ಚಿಕಿತ್ಸೆ ಮತ್ತು ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯ. ಚಿಕಿತ್ಸೆಯ ವೇಳೆ ಬರುವ ಅಡ್ಡ ಪರಿಣಾಮಗಳನ್ನು ಗಮನದಲ್ಲಿಟ್ಟು ಕೊಂಡು ಚಿಕಿತ್ಸೆ ನೀಡುವುದು ಪ್ರಮುಖ ಸವಾಲಾಗಿದೆ. ನರವಿಜ್ಞಾನ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಸಂಶೋಧನೆ ಗಳು ನಡೆಯುತ್ತಿದ್ದು, ಜಾಗತಿಕ ಮಟ್ಟದಲ್ಲಿ ಅನುವಾದಾತ್ಮಕ ಸಂಶೋಧನೆಗಳ ಮೂಲಕ ಉತ್ತಮ ಚಿಕಿತ್ಸೆ ವಿಧಾನ ಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ನರವಿಜ್ಞಾನ ಸಂಬಂಧಿತ ರೋಗಗಳನ್ನು ಗುರುತಿಸುವುದು ಹಾಗೂ ಚಿಕಿತ್ಸೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹತ್ತರ ಮತ್ತು ರೂಪಾಂತರಕಾರಿ ಬದಲಾವಣೆಗಳು ಕಂಡುಬಂದಿವೆ. ಈ ಕ್ಷೇತ್ರದಲ್ಲಿ ವೈದ್ಯರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಿದ್ಧತೆಯೊಂದಿಗೆ ಮುಂದಿನ ದಿನಗಳಲ್ಲಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿ ಉಪಕುಲಪತಿ ಪ್ರೊ. ಡಾ. ಎಂ. ಎಸ್. ಮೂಡಿತ್ತಾಯ ವಹಿಸಿ ಮಾತನಾಡಿ, ನಿಟ್ಟೆ ವಿ.ವಿಯಲ್ಲಿ ಸಂಶೋಧನಾ ವ್ಯವಸ್ಥೆ ಸಾಮಾನ್ಯ ಶಿಕ್ಷಣ ಪದ್ಧತಿಯಿಂದ ಭಿನ್ನವಾಗಿದ್ದು, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳು ಸಮಾಜದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡುತ್ತವೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳು ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಗಳಿಗೆ ದಾರಿ ಮಾಡಿಕೊಡುತ್ತವೆ. ಶಿಕ್ಷಣದ ಜೊತೆಗೆ ಸಮಾಜಮುಖಿ ಚಟುವಟಿಕೆಗಳನ್ನು ಒಳಗೊಂಡ ವಿಸ್ತರಣಾ ಸೇವೆಗಳೂ ಮಹತ್ವದ ಪಾತ್ರವಹಿಸುತ್ತವೆ. ಮುಂದಿನ ವರ್ಷ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಪರಿಣಾಮಕಾರಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ ಎಂದು ಅವರು ತಿಳಿಸಿದರು. ಇದರಿಂದ ಸಂಶೋಧನೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಗೌರವ ಅತಿಥಿಗಳಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿ.ವಿಯ ಕುಲಸಚಿವರಾದ ಡಾ. ಹರ್ಷ ಹಲಹಳ್ಳಿ, ಕರ್ನಾಟಕ ಮೆಡಿಕಲ್‌ ಕೌನ್ಸಿಲ್‌ ಪರಿವೀಕ್ಷಕ ಇಮ್ಮಾದ್‌ ಮೊಹಮ್ಮದ್‌ ಇಸ್ಮಾಯಿಲ್‌ ಉಪಸ್ಥಿತರಿದ್ದರು.

ಕೆ. ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ ಲೇಖಾ ಪಂಡಿತ್‌ ಸ್ವಾಗತಿಸಿದರು. ಡಾ. ಅಲೆಕ್ಸಾಂಡರ್ ಲೋಬೋ ಮತ್ತು ಡಾ. ಸುಹಾನ್ ಕಾರ್ಯಕ್ರಮ ನಿರೂಪಿಸಿ ದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್‌ ಡಾ. ಸಂದೀಪ್ ರೈ ವಂದಿಸಿದರು.

ʻಅಂತರರಾಷ್ಟ್ರೀಯ ಕ್ಲಿನಿಕಲ್ ನ್ಯೂರೋಇಮ್ಯುನಾಲಜಿ ಕಾರ್ಯಾಗಾರಕ್ಕೆ ಆರಂಭದಲ್ಲಿ ಸುಮಾರು 50 ರಿಂದ 75 ಜನರು ಭಾಗವಹಿಸುವ ನಿರೀಕ್ಷೆ ಇತ್ತು. ಆದರೆ ವೈದ್ಯರು ಮತ್ತು ಸಂಶೋಧಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈಗಾಗಲೇ 175ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.ನರವಿಜ್ಞಾನ ಹಾಗೂ ರೋಗನಿರೋಧಕ ವ್ಯವಸ್ಥೆಗೆ ಸಂಬಂಧಿಸಿದ ಇತ್ತೀಚಿನ ಸಂಶೋಧನೆಗಳು, ರೋಗಗಳ ಗುರುತಿಸುವಿಕೆ ಮತ್ತು ಚಿಕಿತ್ಸೆಯ ಹೊಸ ವಿಧಾನಗಳ ಕುರಿತು ತಜ್ಞರಿಂದ ಉಪನ್ಯಾಸಗಳು ಹಾಗೂ ಚರ್ಚೆಗಳು ನಡೆಯಲಿವೆ. ವೈದ್ಯರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ನರವಿಜ್ಞಾನ ಕ್ಷೇತ್ರದ ಹೊಸ ಜ್ಞಾನವನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಲಿದೆʼ

-ಡಾ ಲೇಖಾ ಪಂಡಿತ್‌. ನಿರ್ದೇಶಕರು, ಕೆ. ಎಸ್. ಹೆಗ್ಡೆ ವೈದ್ಯಕೀಯ ಮಹಾವಿದ್ಯಾಲಯದ
ಉನ್ನತ ನರವಿಜ್ಞಾನ ಸಂಶೋಧನಾ ಕೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News