ವಿಶ್ವಾಸ, ಪ್ರೀತಿ, ಗೌರವ ಇದ್ದಲ್ಲಿ ಸಮಸ್ಯೆ ಇಲ್ಲ: ಅಬ್ದುಲ್ ಅಝೀಝ್ ದಾರಿಮಿ
ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸೌಹಾರ್ದ ಇಫ್ತಾರ್ ಕೂಟ
ಮಂಗಳೂರು, ಮಾ.10: ‘ಮನುಷ್ಯನ ನಡೆ, ನುಡಿ, ಗುಣ ಸರಿಯಿದ್ದಲ್ಲಿ ಜೀವನ ಚೆನ್ನಾಗಿರುತ್ತದೆ. ಹೃದಯದಲ್ಲಿ ಮೃದುತ್ವ, ಶಾಂತತ್ವ, ಕರುಣೆ ಹೊಂದಿರಬೇಕು. ಪರಸ್ಪರ ವಿಶ್ವಾಸ, ಪ್ರೀತಿ ಮತ್ತು ಗೌರವ ಇರುವ ಸಮಾದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ, ಸಮಸ್ಯೆ ಇರುವುದಿಲ್ಲ’ ಎಂದು ಚೊಕ್ಕಬೆಟ್ಟುವಿನ ಮೊಹಿಯುದ್ದೀನ್ ಜುಮಾ ಮಸ್ಜಿದ್ನ ಧರ್ಮಗುರುಗಳಾದ ಮೌಲಾನಾ ಯು.ಕೆ. ಅಬ್ದುಲ್ ಅಝೀಝ್ ದಾರಿಮಿ ಹೇಳೀದ್ದಾರೆ.
ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದ ಆವರಣದಲ್ಲಿ ಮಂಗಳವಾರ ಸಂತ ಮದರ್ ತೆರೆಸಾ ವಿಚಾರ ವೇದಿಕೆ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮುಖ್ಯ ಅತಿಥಿಯಾಗಿ ಅವರು ಸಂದೇಶ ನೀಡಿದರು
ದ್ವೇಷ, ಕೋಪ ಬರುವ ಸನ್ನಿವೇಶದಲ್ಲಿ ಪ್ರೀತಿ ಮೂಡುವಂತಾಗಬೇಕು. ನಮ್ಮವರ ಜೊತೆ ನಾವು ಪ್ರೀತಿಯನ್ನು ತೋರಬೇಕು. ಆಗ ಬೇರೆಯವರ ಜೊತೆಯೂ ಪ್ರೀತಿ ತೋರಿಸಲು ಸಾಧ್ಯವೆಂದವರು ಪ್ರತಿಪಾದಿಸಿದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ಎಸ್.ಜೆ. ಮಾತನಾಡಿ, ‘ಮನುಷ್ಯನ ನಡೆ ಮತ್ತು ನುಡಿ ಹೇಗಿದೆಯೆಂಬುದು ಮುಖ್ಯ. ಕೇವಲ ತೋರ್ಪಡಿಕೆಯ ನಡವಳಿಕೆ ವ್ಯರ್ಥ. ಸಮಾಜದಲ್ಲಿ ಬಂಧುತ್ವ, ಶಾಂತಿ ಬೆಳೆಯಲಿ’ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ‘ಕಳೆದ 8 ವರ್ಷಗಳಿಂದ ಜಿಲ್ಲೆಯಲ್ಲಿ ಸೌಹಾರ್ದತೆ, ಸಹಬಾಳ್ವೆಯ ಅಗತ್ಯವನ್ನು ಮನಗಂಡು ಅದಕ್ಕಾಗಿ ವೇದಿಕೆ ನಿರಂತರವಾಗಿ ಶ್ರಮಿಸುತ್ತಾ ಬಂದಿದೆ. ವೈವಿಧ್ಯತೆಗಳನ್ನು ಸಂಭ್ರಮಿಸಬೇಕು. ಎಲ್ಲರೊಡನೆ ಪ್ರೀತಿ ಹಂಚುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ’ ಎಂದು ವೇದಿಕೆಯ ಧ್ಯೇಯೋದ್ದೇಶಗಳ ಬಗ್ಗೆ ಬೆಳಕು ಚೆಲ್ಲಿದರು.
ಖ್ಯಾತ ಸಾಹಿತಿ, ನಿವೃತ್ತ ಶಿಕ್ಷಕಿ ಬಿ.ಎಂ. ರೋಹಿಣಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಬೆಥನಿ ಮುಖ್ಯಸ್ಥೆ ಸಿಸ್ಟರ್ ರೋಸ್ ಮೇರಿ, ಬಾವುಟಗುಡ್ಡ ಝೀನತ್ ಬಕ್ಷ್ ಜುಮಾ ಮಸ್ಜಿದ್ನ ಉಪಾಧ್ಯಕ್ಷ ಕೆ. ಅಶ್ರಫ್ ಮಾತನಾಡಿ ಸೌಹಾರ್ದತೆಯ ಅಗತ್ಯ ಮತ್ತು ಮಹತ್ವವನ್ನು ಸಾರಿದರು.
ವೇದಿಕೆಯ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಸ್ವಾಗತಿಸಿ, ಪ್ರೀತಿಯನ್ನು ಹಂಚುವ ವೇದಿಕೆಯ ಉದ್ದೇಶಗಳನ್ನು ವಿವರಿಸಿದರು. ಸಾಮರಸ್ಯ ಮಂಗಳೂರು ಮುಖ್ಯಸ್ಥೆ ಮಂಜುಳಾ ನಾಯಕ್ ವೇದಿಕೆಯಲ್ಲಿದ್ದರು. ರೆಹಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.