ವಿದ್ಯಾರ್ಥಿಗಳಲ್ಲಿ ಓದುವಿಕೆ ಕಡಿಮೆಯಾಗಿದೆ: ವಿವೇಕ್ ಆಳ್ವ
ಮಂಗಳೂರು, ಮಾ.10: ಜಾಗತೀಕರಣದಿಂದ ಆರಂಭಗೊಂಡು ಪ್ರಸ್ತುತ ಎಐ ವರೆಗೆ ಜಗತ್ತು ಸಾಗಿ ಬಂದರೂ, ತುಳುವರ ನಂಬಿಕೆ, ಆಚರಣೆ, ಸಂಸ್ಕೃತಿಗಳು ಇಂದಿಗೂ ಉಳಿದುಕೊಂಡು ಬಂದಿದೆ. ಇದನ್ನು ಮುಂದಿನ ತಲೆಮಾರುಗಳಿಗೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ತುಳು ಪರಿಷತ್ ವತಿಯಿಂದ 3ನೇ ವಿದ್ಯಾರ್ಥಿ ತುಳು ಸಮ್ಮೇಳನದ ಪೂರ್ವ ಭಾವಿಯಾಗಿ ಆಯೋಜಿಸಲಾದ ‘ವಿದ್ಯಾರ್ಥಿ ಕಲಾ ಸಿರಿ’ ಕಾರ್ಯಕ್ರಮವನ್ನು ಮಂಗಳವಾರ ಉರ್ವಸ್ಟೋರ್ ನ ತುಳು ಸಾಹಿತ್ಯ ಅಕಾಡೆಮಿಯ ತುಳು ಚಾವಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ವಿದ್ಯಾರ್ಥಿಗಳಲ್ಲಿ ಓದುವಿಕೆ ಕಡಿಮೆಯಾಗಿ, ನಮ್ಮ ಸಂಸ್ಕೃತಿ- ಆಚರಣೆಗಳ ವಿಚಾರವಾಗಿ ಮಾಹಿತಿ ಕೊರತೆ ಇರುವುದು ಹಲವಾರು ಸಂದರ್ಭಗಳಲ್ಲಿ ದೃಢಪಟ್ಟಿದೆ. ಮೊಬೈಲ್ ನಲ್ಲಿ ದೊರೆಯುವ ಮಾಹಿತಿಗಳು ಮಾತ್ರ ಅವರ ಬಳಿಯಿದೆ. ಆದ್ದರಿಂದ ಈ ಕಾಲದ ನವ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಂಡು ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತುಳು ಭಾಷೆ- ಸಂಸ್ಕೃತಿ ವಿಚಾರಗಳನ್ನು ಎಲ್ಲೆಡೆ ಪಸರಿಸುವ ಅಗತ್ಯವಿದೆ.ಅಕಾಡೆಮಿಯಿಂದ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಚಲಚಚಿತ್ರ ನಟ ಸ್ವರಾಜ್ ಶೆಟ್ಟಿ ಮಾತನಾಡಿ, ಬೇರೆ ಊರಿಗೆ ಹೋದಾಗ ಅಲ್ಲಿ ತುಳು ಭಾಷೆ ಮಾತನಾಡುವವರು ಸಿಕ್ಕಾಗ ನಮಗೆ ತುಳು ಭಾಷೆಯ ಮಹತ್ವ ತಿಳಿಯುತ್ತದೆ. ನಾವು ಎಂದಿಗೂ ತುಳು ಭಾಷೆಯನ್ನು ಬಿಟ್ಟುಕೊಡ ಬಾರದು. ತುಳು ಪರಂಪರೆ ಅಳಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. 8ನೇ ಪರಿಚ್ಛೇದಕ್ಕೆ ಸೇರಿಸುವ ಕೆಲಸದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವ ಅಗತ್ಯವಿದೆ ಎಂದರು.
ನಿರೂಪಕಿ, ನಟಿ ಸೌಜನ್ಯ ಹೆಗ್ಡೆ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಜಾಣ್ಮೆಯಿಂದ ಕೆಲಸ ಮಾಡುವವರು, ಹಿಂದಿನ ಮಕ್ಕಳಂತೆ ಕಷ್ಟ ಪಟ್ಟು ಕೆಲಸ ಮಾಡುವವರಲ್ಲ. ಹಾಗಾಗಿ ತಮ್ಮ ಜಾಣ್ಮೆಯ ಮೂಲಕ ತುಳು ಭಾಷೆ ಸಂಸ್ಕೃತಿಯನ್ನು ಎಲ್ಲರಿಗೂ ಪರಿಚಯಿಸುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ಅಕಾಡೆಮಿಗೆ ವಿದ್ಯಾರ್ಥಿ ಗಳು ಬರಬೇಕು . ಅಕಾಡೆಮಿಯಿಂದ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ತುಳುವಿನ ವ್ಯಾಪ್ತಿ ವಿಸ್ತಾರವಾಗಿದ್ದು, ವಿದ್ಯಾರ್ಥಿಗಳು ತುಳುವಿನ ಬಗ್ಗೆ ಆಸಕ್ತಿ ಹೊಂದಿ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ನುಡಿದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಮಂಗಳೂರು ವಿವಿ ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಶೇಷಪ್ಪ ಅಮೀನ್, ಮನಪಾ ಮಾಜಿ ಸದಸ್ಯ ಗಣೇಶ್ ಕುಲಾಲ್, ತುಳು ಪರಿಷತ್ ಗೌರವ ಸಲಹೆಗಾರ ಸ್ವರ್ಣ ಸುಂದರ್, ಗೌರವಾಧ್ಯಕ್ಷ ಡಾ. ಪ್ರಭಾಕರ ನೀರುಮಾರ್ಗ, ಕೋಶಾಧಿಕಾರಿ ಸುಮತಿ ಹೆಗ್ಡೆ, ಕಲಾ ಸಿರಿ ಸಂಚಾಲಕ ದುರ್ಗಾ ಪ್ರಸಾದ್, ಸಮ್ಮೇಳನ ಸಂಚಾಲಕಿ ಅಮಿತಾ ಅಶ್ವಿನ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಸಂತೋಷ್ ಶೆಟ್ಟಿ ಹಿರಿಯಡ್ಕ, ಬಾಬು ಕೊರಗ ಉಪಸ್ಥಿತರಿದ್ದರು.
ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ಸ್ವಾಗತಿಸಿ, ಕಲಾ ಸಿರಿ ಸಂಚಾಲಕಿ ಚಂದ್ರ ಕಲಾ ರಾವ್ ವಂದಿಸಿದರು.
ಭಾವಗೀತೆ, ಕಿರುನಾಟಕ, ಜಾನಪದ ನೃತ್ಯ, ಚಿತ್ರ ಕಲಾ ಸ್ಪರ್ಧೆ, ತುಳು ಬದುಕು ವಿಚಾರ ಮಂಥನ, ತುಳು ಬದುಕು ಸಾಕ್ಷ್ಯ ಚಿತ್ರ, ತುಳು ತುತ್ತೈತ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿವಿಧ ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸಿದ್ದರು.