ಬಿಕರ್ನಕಟ್ಟೆ : ಜ.14-15ರಂದು ಬಾಲ ಯೇಸು ಕ್ಷೇತ್ರದ ವಾರ್ಷಿಕ ಮಹೋತ್ಸವ
ಮಂಗಳೂರು, ಡಿ.31: ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ನ ಬಾಲ ಯೇಸುವಿನ ಪುಣ್ಯಕ್ಷೇತ್ರ ವಾರ್ಷಿಕ ಮಹೋತ್ಸವ ಜನವರಿ 14 ಹಾಗೂ 15 ರಂದು ನಡೆಯಲಿದೆ.
ಪ್ರೆಸ್ಕ್ಲಬ್ನಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರದ ಗುರುಮಠದ ಮುಖ್ಯಸ್ಥ ರೆ.ಫಾ. ಮೆಲ್ವಿನ ಡಿಕುನ್ನಾ, ಜ. 14ರಂದು ಸಂಜೆ 6ಕ್ಕೆ ಮಹೋತ್ಸವದ ಬಲಿಪೂಜೆಯನ್ನು ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರೆ.ಫಾ. ಜೆರಾಲ್ಡ್ ಐಸಾಕ್ ಲೋಬೊ ನಿರ್ವಹಿಸುವರು. ಅದೇ ದಿನ ಬೆಳಿಗ್ಗೆ 10ಕ್ಕೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ರೆ.ಫಾ. ಡಾ.ಅಲೋಶಿಯಸ್ ಪಾವ್ಲ್ ಡಿಸೋಜಾ ವಿಶೇಷ ಬಲಿಪೂಜೆಯನ್ನು ನೆರವೇರಿಸುವರು.
ಜ. 15ರಂದು ಬೆಳಗ್ಗೆ 10ಕ್ಕೆ ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಫಾ. ದುಮಿಂಗ್ ಡಾಯಸ್ ಬಲಿ ಪೂಜೆ ನಿರ್ವಹಿಸಲಿದ್ದು, ಇದು ಮಕ್ಕಳಿಗಾಗಿ ಅರ್ಪಿಸಲಾಗುವ ವಿಶೇಷ ಪೂಜಾವಿಧಿಯಾಗಿದೆ. ಮಹೋತ್ಸವದ ಸಮಾರೋಪ ಪ್ರಾರ್ಥನಾವಿಧಿ ಸಂಜೆ 6ಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಪ್ರಧಾನ ಗುರು ರೆ.ಫಾ. ಮೊನ್ಸಿಂಜರ್ ಮ್ಯಾಕ್ಸಿಂ ನೊರೊನ್ಹಾ ನೆರವೇರಿಸುವರು.
ಈ ಎರಡು ದಿನದ ವಾರ್ಷಿಕ ಮಹೋತ್ಸವದ ಅಂಗವಾಗಿ ನವೇನಾ ಪ್ರಾರ್ಥನೆ ಜ.5 ರಿಂದ ಜ. 13 ರ ವರೆಗೆ ನಡೆಯಲಿರುವುದು.
ಜನವರಿ 5 ರಂದು ಬೆಳಿಗ್ಗೆ 10:30ರ ಪ್ರಾರ್ಥನಾ ವಿಧಿಯನ್ನು ಬರೇಲಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೆ.ಫಾ. ಇಗ್ನೇಶಿಯಸ್ ಡಿಸೋಜಾರವರು ನೆರವೇರಿಸಲಿರುವರು. ಆ ದಿನದಂದು ಅನಿವಾಸಿ ಭಾರತೀಯರಿಗಾಗಿ ಪ್ರಾರ್ಥಿಸಲಾಗುವುದು. ಜ. 10ರಂದು ಬೆಳಿಗ್ಗೆ 10:30ರ ಬಲಿಪೂಜೆಯನ್ನು ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಫಾ. ಹೆನ್ರಿ ಡಿಸೋಜಾಇವರು ನೆರವೇರಿಸಲಿರುವರು. ಈ ದಿನದಂದು ಎಲ್ಲಾ ಮಕ್ಕಳಿಗಾಗಿ ಪ್ರಾರ್ಥಿಸಲಾಗುವುದು. ದಿವ್ಯಬಾಲ ಯೇಸುವಿನ ಮೆರವಣಿಗೆಯನ್ನು ಪ್ರತಿದಿನ ಸಂಜೆಯ ಬಲಿಪೂಜೆಯ ಬಳಿಕ ಸುಮಾರು 7:15 ಕ್ಕೆ ಹಮ್ಮಿಕೊಳ್ಳಲಾಗಿದೆ.
ಮಹೋತ್ಸವದ ಹೊರೆಕಾಣಿಕೆಯು ಜ. 3 ರಂದು ಸಂಜೆ 4.30ಕ್ಕೆ ಹೋಲಿಕ್ರಾಸ್ ಚರ್ಚ್, ಕುಲಶೇಖರದಿಂದ ಆರಂಭಗೊಳ್ಳುವುದು. ಹೊರೆಕಾಣಿಕೆಯ ಕೊನೆಗೆ ಸಹಬಾಳ್ವೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಸಂತ ಅಲೋಶಿಯಸ್ ವಿಶ್ವ ವಿದ್ಯಾಲಯದ ಉಪಕುಲಪತಿ ವಂ. ಡಾ.ಪ್ರವೀಣ್ ಮಾರ್ಟಿಸ್ ಧ್ವಜಾರೋಹಣ ನೆರವೇರಿಸುವರು.
ನವೇನಾ ಹಾಗೂ ಹಬ್ಬದ ದಿನಗಳಲ್ಲಿ (ಜನವರಿ 5 ರಿಂದ 15 ರ ವರೆಗೆ) ಮಧ್ಯಾಹ್ನದ ವೇಳೆ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆಯು ನಡೆಯಲಿದೆ.
ಜನವರಿ 7 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1ರವರೆಗೆ ಕಣ್ಣಿನ ಶಿಬಿರವನ್ನು ಏರ್ಪಡಿಸಲಾಗಿದೆ. ಜನವರಿ 9 ಹಾಗೂ 10 ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1 ವರೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ನವೇನಾ ಹಾಗೂ ಹಬ್ಬದ ದಿನಗಳಲ್ಲಿ ಶಿಲುಬೆಯ ಸಂತ ಯೊವಾನ್ನರ ಜೀವನ ಹಾಗೂ ಬೋದನೆಗಳನ್ನು ಆದರಿಸಿ ಒಂದು ವಿಶೇಸ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವಿಧ ಕಾರ್ಯಕ್ರಮಗಳ ವಿವರ ನೀಡಿದರು.
ಗೋಷ್ಟಿಯಲ್ಲಿ ಕ್ಷೇತ್ರದ ನಿರ್ದೇಶಕ ರೆ.ಫಾ. ಸ್ಟೀಫನ್ ಪಿರೇರಾ, ಕಾರ್ಮೆಲ್ ಸಬೆಯ ರೆ.ಫಾ. ದೀಪ್ ಫೆರ್ನಾಂಡಿಸ್, ಬಾಳೊಖ್ ಜೆಜು ಕುಟಮ್ ಸಂಸ್ಥೆಯ ಉಪಾಧ್ಯಕ್ಷ ವಲೇರಿಯನ್ ಫುರ್ಟಾಡೊ, ಕ್ಷೇತ್ರದ ವ್ಯವಸ್ಥಾಪಕ ವಿಲ್ಫ್ರೆಡ್ ಲಸ್ರಾದೋ ಉಪಸ್ಥಿತರಿದ್ದರು.
ಸಮಾಜಾಭಿವೃದ್ಧಿ ಯೋಜನೆಯ ಅನಾವರಣ
ಕಾರ್ಮೆಲ್ ಸಭೆಯ ಸುಧಾರಕಾರಾದ ಶಿಲುಬೆಯ ಸಂತ ಯೊವಾನ್ನರನ್ನು ಸಂತ ಪದವಿಗೇರಿಸಿ 300 ಸಂವತ್ಸರಗಳು ಹಾಗೂ ಧರ್ಮಸಭೆಯ ಪಂಡಿತ ಎಂದು ನಾಮಕರಣಗೊಳಿಸಿ ಶತಾಬ್ದಿಯನ್ನು ಪೂರೈಸುವ ಜುಬಿಲಿ ವರ್ಷದಲ್ಲಿ ಕಾರ್ಮೆಲ್ ಇಗ್ನೆಟ್ ಎನ್ನುವ ಕಾರ್ಯಕ್ರಮದಡಿ ಬಡ ಹಾಗೂ ಯೋಗ್ಯ 400 ವಿಧ್ಯಾರ್ಥಿಗಳಿಗೆ ವಿಧ್ಯಾರ್ಥಿ ವೇತನವನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.