ಜೂ.21ರಂದು ಸೋಮೇಶ್ವರ ಕಡಲ ಕಿನಾರೆಯಲ್ಲಿ ‘ಯೋಗ ವಿತ್ ಯೋಧ ’ ಕಾರ್ಯಕ್ರಮ
ಮಂಗಳೂರು, ಜೂ.19: ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂ. 21ರಂದು ಅಪರಾಹ್ನ 3 ಗಂಟೆಗೆ ಸೋಮೇಶ್ವರ ಕಡಲ ತೀರದಲ್ಲಿ ‘ಯೋಗ ವಿತ್ ಯೋಧ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ.
‘ಯೋಗ ವಿತ್ ಯೋಧ’ ಕಾರ್ಯಕ್ರಮವನ್ನು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಸಾಹಸ ಜಲಕ್ರೀಡೆಗಳ ತಾಣವಾಗಿರುವ ಸಸಿಹಿತ್ಲುವಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಸೋಮೇಶ್ವರ ಬೀಚ್ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿ ಜಾಗತಿಕವಾಗಿ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವಂತಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಪ್ರವಾಸಿ ತಾಣಗಳನ್ನು ವಿಶ್ವಕ್ಕೆ ಪರಿಚಯಿಸುವ ಸಣ್ಣ ಪ್ರಯತ್ನ ಇದಾಗಿದೆ. ‘ಯೋಗ ವಿತ್ ಯೋಧ ’ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾಧಕರು, ಕ್ರೀಡಾ ಸಿಬ್ಬಂದಿ, ಮಾಜಿ ಸೈನಿಕರು, ಜೀವರಕ್ಷಕರು, ಸಾಮಾಜಿಕ ಕಾರ್ಯಕರ್ತರು ಮತ್ತು ಇತರ ಗಣ್ಯರು ಭಾಗವಹಿಸಿಲಿದ್ದು, ಆಸಕ್ತರು ಪಾಲ್ಗೊಳ್ಳಬಹುದು ಎಂದು ಚೌಟ ತಿಳಿಸಿದ್ದಾರೆ.