ಮಂಗಳೂರು: ಆಹಾರ ಮೇಳಕ್ಕೆ ಚಾಲನೆ
ಮಂಗಳೂರು, ಜ.30: ಕರಾವಳಿ ಉತ್ಸವದ ಅಂಗವಾಗಿ ನಗರದ ಕದ್ರಿ ಪಾಕ್ ಮುಖ್ಯ ರಸ್ತೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಆಹಾರ ಮೇಳಕ್ಕೆ ಶುಕ್ರವಾರ ಖ್ಯಾತ ಚೆಫ್ ಶ್ರೀಯಾ ಶೆಟ್ಟಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಕರಾವಳಿ ಕರ್ನಾಟಕದ ಜನತೆಯ ಆಹಾರ ಅಭಿರುಚಿಯು ತುಂಬಾ ವಿಶಿಷ್ಟವಾಗಿದೆ. ತಿಂಡಿ ತಿನಿಸುಗಳ ಬಗ್ಗೆ ಇಲ್ಲಿನ ಜನರ ಪ್ರೀತಿಯು ಆಹಾರ ಸಂಸ್ಕೃತಿಯನ್ನು ಎತ್ತರಕ್ಕೆ ಕೊಂಡೊಯ್ದಿದೆ. ವೈವಿಧ್ಯಮಯ ಖಾದ್ಯಗಳಿಗೆ ಕರಾವಳಿಯು ಹೆಸರುವಾಸಿಯಾಗಿದೆ ಎಂದು ಹೇಳಿದರು.
ದ.ಕ.ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ ಈ ವರ್ಷದ ಕರಾವಳಿ ಉತ್ಸವದ ಅಂಗವಾಗಿ ನಡೆದ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ರಾಜೇಂದ್ರ ಕುಮಾರ್, ಡಿಜಿಎಂ ತೇಜಸ್ವಿನಿ, ಮಂಗಳೂರು ಕಂದಾಯ ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ, ಯತೀಶ್ ಬೈಕಂಪಾಡಿ ಮತ್ತಿತರರು ಉಪಸ್ಥಿತರಿದ್ದರು.
*ರವಿವಾರದವರೆಗೆ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯಲಿರುವ ಆಹಾರ ಮೇಳದಲ್ಲಿ ಆಕರ್ಷಕ ತಿಂಡಿ ತಿನಿಸುಗಳು, ಚಾಟ್ಸ್, ಪಾನೀಯಗಳು, ಸಸ್ಯಹಾರ ಮತ್ತು ಮಾಂಸಾಹಾರ ಖಾದ್ಯಗಳ ಸ್ಟಾಲ್ಗಳನ್ನು ಒಳಗೊಂಡಿದೆ. ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.