ಮಂಗಳೂರು | ಕರಾವಳಿ ಉತ್ಸವದಲ್ಲಿ ಆಕರ್ಷಿಸಿದ ಗ್ರಾಮೀಣ ಉತ್ಪನ್ನಗಳ ಮಳಿಗೆಗಳು
ಮಂಗಳೂರು,ಡಿ.22: ಕರಾವಳಿ ಉತ್ಸವಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ಸವದ ಎರಡನೇ ರವಿವಾರ (ಡಿ.21) ನಾಲ್ಕು ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದಾರೆ.
ಮುಖ್ಯ ಕಾರ್ಯಕ್ರಮ ನಡೆಯುತ್ತಿರುವ ಲಾಲ್ಬಾಗ್ ಕರಾವಳಿ ಉತ್ಸವ ಮೈದಾನದಲ್ಲಿ 4,104 ಟಿಕೆಟ್ ಗಳು ಮಾರಾಟವಾಗಿದೆ. ಈ ಪೈಕಿ 1,222 ಟಿಕೆಟ್ ಗಳು ಆನ್ಲೈನ್ ಮೂಲಕ ಹಾಗೂ 2,882 ಟಿಕೆಟ್ ಗಳು ಟಿಕೆಟ್ ಕೌಂಟರ್ ನಲ್ಲಿ ಖರೀದಿಯಾಗಿದೆ.
ಕರಾವಳಿ ಉತ್ಸವದಲ್ಲಿ ವಿವಿಧ ಮಳಿಗೆಗಳು, ಕರಕುಶಲ ವಸ್ತುಗಳು, ಆಯುರ್ವೇದ ತಿಂಡಿಗಳು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ. ವಿವಿಧ ಮಾರಾಟ ಕೇಂದ್ರಗಳು, ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ನಯಾಗರ ಜಲಪಾತದ ಮಾದರಿಯ ಕೃತಕ ಜಲಪಾತವು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ.
ವಿವಿಧ ಸ್ವಸಹಾಯ ಸಂಘಗಳು, ಸ್ವ ಉದ್ಯೋಗ ಸಂಘ ಸಂಸ್ಥೆಗಳ ತಿಂಡಿ-ತಿನಿಸುಗಳ ಮಾರಾಟ ಮಳಿಗೆಗಳು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದ ಹಿರಿಯ- ಕಿರಿಯ ವಯಸ್ಕರ ಮನಸ್ಸಿನ ಆನಂದವನ್ನು ಹೆಚ್ಚಿಸುತ್ತಿದೆ.
ಔಷಧೀಯ ಅಂಶಗಳನ್ನೊಳಗೊಂಡ ಗಿಡಮೂಲಿಕೆಗಳು, ಆಹಾರ ಪದಾರ್ಥಗಳಿಗೆ ರುಚಿ ಕೊಡುವ ಸಾಂಬಾರ ಪದಾರ್ಥಗಳು, ವಿವಿಧ ರೀತಿಯ ಎಣ್ಣೆ ಮಳಿಗೆ, ಗ್ರಾಮೀಣ ಕುಶಲಕರ್ಮಿಗಳು ತಯಾರಿಸಿದ ಕರಕುಶಲ ವಸ್ತುಗಳು, ಮಣ್ಣಿನಿಂದ ತಯಾರಿಸಲ್ಪಟ್ಟ ವಸ್ತುಗಳು, ಬುಟ್ಟಿ, ಜೇನು ಉತ್ಪನ್ನ, ವಿವಿಧ ಮಸಾಲ ಉತ್ಪನ್ನ, ಶುಚಿ ರುಚಿಯಾದ ಮೀನು ಮತ್ತು ಸ್ಥಳೀಯ ಖಾದ್ಯಗಳ ಮಳಿಗೆ ಹಾಗೂ ಮಕ್ಕಳನ್ನೂ ಆಕರ್ಷಿಸಿಸುವ ಮಕ್ಕಳ ಆಟಿಕೆಗಳ ಮಾರಾಟ ಮಳಿಗೆಗಳು ಇದರಲ್ಲಿ ಪಾಲ್ಗೊಂಡಿರುತ್ತದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಈ ಎಲ್ಲಾ ಮಳಿಗೆಗಳಿಗೆ ಪೂರಕ ವ್ಯವಸ್ಥೆ ಕಲ್ಪಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಮಳಿಗೆಗಳ ವಿವರ :
► ಯಶಸ್ವಿ ನವೋದಯ ಸ್ವ ಸಹಾಯ ಗುಂಪು ಪೆರ್ಮುದೆ- ಉಪ್ಪಿನಕಾಯಿ, ಸಾಂಬಾರ ಪುಡಿ, ಜೇನು ತುಪ್ಪ
► ಯಶಸ್ವಿ ಸಂಜೀವಿನಿ ಅರಳ- ನೆಲ್ಲಿಕಾಯಿ ರಸ, ಬ್ರಾಹ್ಮೀ ರಸ, ಬಾಳೆದಿಂಡು ರಸ, ಗಿಡಮೂಲಿಕೆ ಔಷದಿ
► ಮಾನಸ ಸಂಜೀವಿನಿ ಕರಿಯಂಗಳ - ವಿವಿಧ ರೀತಿಯ ಎಣ್ಣೆಗಳು ( ಕೊಬ್ಬರಿ ಎಣ್ಣೆ, ಕಡಲೆ ಎಣ್ಣೆ, ಇತ್ಯಾದಿ)
► ಸ್ನೇಹ ಸಂಜೀವಿನಿ ವೀರಕಂಭ - ಮಣ್ಣಿನ ವಸ್ತು ಹಾಗೂ ಬುಟ್ಟಿ ಇತ್ಯಾದಿ ಉತ್ಪನ್ನಗಳು
► ಶ್ರೀದೇವಿ ಸ್ವಸಹಾಯ ಗುಂಪು ಅಂಡಿಂಜೆ - ಬ್ಯಾಗ್, ಜೂಟ್ ಬ್ಯಾಗ್ಗಳು
► ವನ್ಯಶ್ರೀ ಸ್ವಸಹಾಯ ಗುಂಪು - ಕಡಬ - ಜೇನು, ಪೊರಕೆ
► ಪ್ರಕೃತಿ ವನ ಧನ ವಿಕಾಸ ಕೇಂದ್ರ ಆರಂತೋಡು - ಬುಟ್ಟಿ, ಬೆಟ್ಟದ ನೆಲ್ಲಿಕಾಯಿ, ಕಾಡು ಜೇನು, ಕಾಚಿಪುಳಿ, ಇತ್ಯಾದಿ 40 ಉತ್ಪನ್ನಗಳು
► ನಿತ್ಯಶ್ರೀ ಸ್ತ್ರೀ ಶಕ್ತಿ ಇಲಂತಿಲ - ಮಣ್ಣಿನ ಮಡಕೆಗಳು, ಮತ್ತು ಮಣ್ಣಿನ ಆಟಿಕೆಗಳು
► ಆಸರೆ ಸಂಜೀವಿನಿ - ಹೊಸಂಗಡಿ - ನುಟ್ರಿಮಿಕ್ಸ್
► ಬಂಟ್ವಾಳ ಮಹಿಳಾ ಕಿಸಾನ್ ಉತ್ಪಾದಕರ ಸಂಸ್ಥೆ - ಪುನರ್ಪುಳಿ, ಈಂದು ಪುಡಿ, ಮಸಾಲಾ ಉತ್ಪನ್ನಗಳು ಇತ್ಯಾದಿ
► ಧರ್ಮಕ್ಷೇತ್ರ ಸಂಜೀವಿನಿ ಬೆಲ್ಮ - ಕ್ಯಾಂಟೀನ್ ಮೀನು ಮತ್ತು ಕೋಳಿ ಸ್ಥಳೀಯ ಶೈಲಿ ಖಾದ್ಯಗಳು