ನಾಯಕತ್ವ, ಸೇವಾಭಾವನೆ, ರಾಷ್ಟ್ರಪ್ರೇಮ ಬೆಳೆಸಿಕೊಳ್ಳಲು ಸ್ಪೀಕರ್ ಯು.ಟಿ ಖಾದರ್ ಕರೆ
ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ನ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಹೊಸದಿಲ್ಲಿ, ಆ.31: ಯುವ ಸಮೂಹವು ನಾಯಕತ್ವ, ಸೇವಾಭಾವನೆ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಪಣತೊಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಕರೆ ನೀಡಿದ್ದಾರೆ.
ಹೊಸದಿಲ್ಲಿಯಲ್ಲಿ ರವಿವಾರ ನಡೆದ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕೊಡಮಾಡುವ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಕೌಟಿಂಗ್ ಮತ್ತು ಗೈಡಿಂಗ್ ಸೇವೆ, ಸಂಸ್ಕಾರ ಮತ್ತು ಸಹಯೋಗ ಎಂಬುದು ಸಂಗಮವಾಗಿದೆ. ಈ ಮೂರು ಸ್ತಂಭಗಳು ಸಮಗ್ರ ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರಬಲ ಚೌಕಟ್ಟಿನಂತೆ ಕಾರ್ಯನಿರ್ವಹಿಸುತ್ತವೆ. ಇದು ಸ್ವಯಂದಿಂದ ಇತರರ ಸೇವೆಗೆ ಇರುವ ಒಂದು ಪರಿವರ್ತನಾಶೀಲ ಪಯಣವಾಗಿದೆ. ವಿದ್ಯಾರ್ಥಿಗಳನ್ನು ಅಧ್ಯಯನ ಕೊಠಡಿ ಯಾಚೆಗೆ ಕರೆದೊಯ್ಯುವ ಅವರನ್ನು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತಿಸುವ ಪಯಣ ವಾಗಿದೆ. ಭಾರತದ ನಾರಿ ಶಕ್ತಿಯನ್ನು ಪ್ರತಿನಿಧಿಸುವ ಹೆಮ್ಮೆಯ ಯುವತಿಯರು ಕೂಡ ನಾಯಕತ್ವದಲ್ಲಿ ಮುನ್ನಡೆ ಯುವುದು, ಅನ್ವೇಷಣೆಗೆ ಮತ್ತು ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ ಎನ್ನುತ್ತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.
ನಿಮ್ಮನ್ನೆಲ್ಲಾ ನೋಡಿ ನನಗೆ ಭಾರತದ ಭವಿಷ್ಯದ ಅಪಾರ ವಿಶ್ವಾಸ ಮೂಡುತ್ತದೆ. ನೀವು ಖಂಡಿತವಾಗಿಯೂ ವಿಶ್ವದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಬಲಿಷ್ಠ ಮತ್ತು ಪ್ರಗತಿಶೀಲ ರಾಷ್ಟ್ರವಾಗಿ ಮಾನ್ಯತೆ ಪಡೆಯಲಿರುವ ಶ್ರೇಷ್ಠ ಭಾರತದ ವಾಸ್ತುಶಿಲ್ಪಿಗಳಾಗಿದ್ದೀರಿ ಎಂದು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಕಾರ್ಮಿಕ, ಉದ್ಯೋಗ ಮತ್ತು ಯುವಜನ ವ್ಯವಹಾರಗಳು, ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಮಾಜಿ ಮುಖ್ಯ ರಾಷ್ಟ್ರೀಯ ಆಯುಕ್ತ ಡಾ.ಕೆ.ಕೆ. ಖಂಡೇಲ್ವಾಲ್, ಛತ್ತೀಸಘಡದ ಮಾಜಿ ಸಚಿವ ಹಾಗೂ ಸಂಸದ ಬ್ರಿಜ್ ಮೋಹನ್ ಅಗರ್ವಾಲ್, ಸಂಸದ ಮನೋಜ್ ತಿವಾರಿ, ಮಾಜಿ ನ್ಯಾಯಧೀಶ ಜಾವೇರಿಯ, ಗೀತಾಂಜಲಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಹೆಚ್ಚುವರಿ ಸಹಾಯಕ ಆಯುಕ್ತ ಎಂ.ಎ. ಖಾಲಿದ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ರಾಷ್ಟೀಯ ಮಹಾ ಕಾರ್ಯಾಧ್ಯಕ್ಷ ಪಿ.ಜಿ. ಆರ್. ಸಿಂಧ್ಯಾ ಮತ್ತಿತರರು ಉಪಸ್ಥಿತರಿದ್ದರು.