ಕ್ಷಯ ರೋಗ ಅಕ್ಷಯವಾಗದಿರಲಿ

Update: 2024-03-24 05:37 GMT

ವಿಶ್ವದಾದ್ಯಂತ ಮಾರ್ಚ್ 24ರಂದು ವಿಶ್ವ ಕ್ಷಯ ರೋಗ ದಿನ ಎಂದು ಆಚರಿಸಲಾಗುತ್ತಿದೆ. ಕ್ಷಯ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಆಚರಣೆಯನ್ನು ವಿಶ್ವ ಸಂಸ್ಥೆ 1982ರಿಂದ ಜಾರಿಗೆ ತಂದಿತು. ಪ್ರತೀ ವರ್ಷ ಯಾವುದಾದರೊಂದು ಧ್ಯೇಯ ಇಟ್ಟುಕೊಂಡು ಈ ಆಚರಣೆ ಮಾಡಲಾಗುತ್ತಿದೆ. ಪ್ರತೀ ವರ್ಷ ವಿಶ್ವದಾದ್ಯಂತ ಸುಮಾರು 9 ಮಿಲಿಯನ್ ಮಂದಿ ಈ ರೋಗಕ್ಕೆ ತುತ್ತಾಗುತ್ತಿದ್ದು, ಮೂರು ಮಿಲಿಯನ್ ರೋಗಿಗಳಿಗೆ ಯಾವುದೇ ರೀತಿಯ ಚಿಕಿತ್ಸಾ ಸೌಲಭ್ಯ ದೊರಕುತ್ತಿಲ್ಲ. ಮಾರಣಾಂತಿಕ ಅಂಟು ರೋಗಗಳಲ್ಲಿ ಏಡ್ಸ್ ಬಳಿಕದ ಸ್ಥಾನ ಕ್ಷಯ ರೋಗಕ್ಕೆ ದಕ್ಕಿದೆ. 1882 ಮಾರ್ಚ್ 24ರಂದು ಡಾ. ರಾಬರ್ಟ್ ಕ್ಷಯ ರೋಗಕ್ಕೆ ಕಾರಣವಾದ ರೋಗಾಣು ಮೈಕೊ ಬ್ಯಾಕ್ಟೀರಿಯಾ ಟ್ಯುಬರ್ ಕ್ಯುಲೋಸಿಸ್ ಎಂಬ ರೋಗಾಣುವನ್ನು ಕಂಡು ಹಿಡಿದರು. ಹಾಗಾಗಿ ಮಾರ್ಚ್ 24ನ್ನೇ ವಿಶ್ವ ಕ್ಷಯರೋಗ ದಿನ ಎಂದು ಆಚರಿಸಲಾಗುತ್ತಿದೆ.

ಕ್ಷಯ ರೋಗದ ಬಗೆಗಿನ ವಾಸ್ತವಗಳು

ಈಗಲೂ ಕ್ಷಯ ರೋಗ ಬಡ ರಾಷ್ಟ್ರಗಳು ಮತ್ತು ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲೂ ಬಹುದೊಡ್ಡ ಮಾರಣಾಂತಿಕ ಕಾಯಿಲೆಯಾಗಿರುವುದು ವಿಷಾದನೀಯ ಸಂಗತಿ. ಕ್ಷಯ ರೋಗದಿಂದ ಸುಮಾರು ಶೇ. 95 ಸಾವು ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಸಂಭವಿಸುತ್ತದೆ. 15ರಿಂದ 45 ವರ್ಷದ ಮಹಿಳೆಯರ ಸಾವಿಗೆ ಮೂರನೇ ಪ್ರಮುಖ ಕಾರಣ ಕ್ಷಯ ರೋಗ. ಕ್ಷಯ ರೋಗ ಸುಲಭವಾಗಿ ಗುಣಪಡಿಸಬಹುದಾದ ರೋಗವಾಗಿದ್ದರೂ ಔಷಧಿಗಳು ಸರಿಯಾಗಿ ದೊರಕದ ಕಾರಣ ಅಥವಾ ಸರಿಯಾಗಿ ಸೇವಿಸದ ಕಾರಣ ರೋಗ ಉಲ್ಬಣವಾಗುತ್ತದೆ. ಅನಕ್ಷರತೆ, ಅಜ್ಞಾನ, ಮೂಢನಂಬಿಕೆ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಈ ರೋಗದ ಪರಿಣಾಮಕಾರಿ ಚಿಕಿತ್ಸೆಗೆ ತೊಡಕಾಗಿರುವುದಂತೂ ಸತ್ಯ. ಭಾರತ ದೇಶವೊಂದರಲ್ಲಿಯೇ ಪ್ರತೀ ವರ್ಷ 5 ಲಕ್ಷ ಮಂದಿ ಈ ರೋಗದಿಂದ ಸಾಯುತ್ತಾರೆ. ಈ ಕಾರಣಕ್ಕಾಗಿಯೇ ವಿಶ್ವ ಸಂಸ್ಥೆ ಕ್ಷಯ ರೋಗವನ್ನು ಜಾಗತಿಕ ತುರ್ತು ಸ್ಥಿತಿ ಎಂದು ಘೋಷಿಸಿದೆ.

ಹೇಗೆ ಹರಡುತ್ತದೆ?

ಕ್ಷಯ ರೋಗ ಸಾಂಕ್ರಾಮಿಕವಾಗಿ ಹರಡುವ ಅಂಟುರೋಗವಾಗಿದ್ದು ರೋಗಾಣುಗಳು ಗಾಳಿಯಿಂದ ಹರಡುತ್ತದೆ. ಪರಿಸರ ಮಾಲಿನ್ಯ, ಬಡತನ, ಅನಕ್ಷರತೆ, ಜನದಟ್ಟಣೆ, ಕೊಳಗೇರಿ ಪ್ರದೇಶ, ಪ್ರಾಥಮಿಕ ಸೌಲಭ್ಯಗಳ ಕೊರತೆ, ರೋಗದ ಬಗೆಗಿನ ಮಾಹಿತಿಯ ಕೊರತೆ ಇತ್ಯಾದಿಗಳು ರೋಗವನ್ನು ಹರಡುವಂತೆ ಮಾಡುತ್ತದೆ. ಜೋರಾಗಿ ಕೆಮ್ಮುವುದು, ಸೀನುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮುಂತಾದವುಗಳಿಂದ ರೋಗಾಣು ಗಾಳಿಯಲ್ಲಿ ಹರಡಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ.

ರೋಗದ ಲಕ್ಷಣಗಳು

ಮೂರು ನಾಲ್ಕು ವಾರಗಳಿಗೂ ಅಧಿಕವಾದ ನಿರಂತರ ಕೆಮ್ಮು, ಎದೆನೋವು, ಉಸಿರಾಟದಲ್ಲಿ ಏರುಪೇರು, ಕಫದೊಡನೆ ರಕ್ತ ಮಿಶ್ರಿತವಾಗುವುದು, ಸಣ್ಣ ಜ್ವರ, ಸಾಯಂಕಾಲ ಸಮಯದಲ್ಲಿ ಜ್ವರ ಮತ್ತು ಮೈ ಬೆವರುವುದು, ಅನಾಸಕ್ತಿ, ಹಸಿವಿಲ್ಲದಿರುವುದು, ರುಚಿ ಇಲ್ಲದಿರುವುದು, ವಾಂತಿ, ಸುಸ್ತು ದೇಹದ ತೂಕ ಕಡಿಮೆಯಾಗುವುದು ಇತ್ಯಾದಿ. ಈ ಮೇಲೆ ತಿಳಿಸಿದ ಯಾವುದಾದರೂ ಲಕ್ಷಣಗಳಿದ್ದಲ್ಲಿ ತಕ್ಷಣ ವೈದ್ಯರಿಗೆ ತೋರಿಸ ಬೇಕು.

ಕ್ಷಯರೋಗದ ಬಗೆಗಿನ ಮಿಥ್ಯೆಗಳು

ಕ್ಷಯ ರೋಗ ಆನುವಂಶಿಕ ಕಾಯಿಲೆ ಎಂದು ಕೆಲವರು ಇನ್ನೂ ನಂಬಿದ್ದಾರೆ. ಕ್ಷಯ ರೋಗ ಆನುವಂಶಿಕ ಕಾಯಿಲೆಯಲ್ಲ. ಕುಟುಂಬದಲ್ಲಿ ಯಾರಿಗಾದರೂ ಕಾಯಿಲೆ ಇದ್ದಲ್ಲಿ ರೋಗಾಣುಗಳು ಗಾಳಿಯ ಮೂಲಕವೇ ಹರಡ ಬಹುದೇ ಹೊರತು ರಕ್ತ ಸಂಬಂಧಿಗಳಲ್ಲಿ ಆನುವಂಶಿಕವಾಗಿ ಹರಡುವುದಿಲ್ಲ. ಆರಂಭಿಕ ಹಂತದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಪರಿಣಾಮಕಾರಿಯಾಗಿ ಗುಣಪಡಿಸಬಹುದು. ನಿರ್ಲಕ್ಷ್ಯ ಮಾಡಿದಲ್ಲಿ ರೋಗ ಉಲ್ಬಣವಾಗಬಹುದು. ಹಿಂದಿನ ಕಾಲದಲ್ಲಿ ಒಂದೆರಡು ಬಗೆಯ ಮಾತ್ರೆಗಳನ್ನು ಮಾತ್ರ ಬಳಸಲಾಗುತ್ತಿತ್ತು. ಆದರೆ ಈಗ ಬಹು ಔಷಧಿ ಪ್ರತಿರೋಧ ಕ್ಷಯ ರೋಗಾಣುಗಳಿಗೆ ಬಂದಿರುವುದಿಂದ ಕನಿಷ್ಠ 4ರಿಂದ 5 ಔಷಧಿಗಳನ್ನು ಬಳಸಬೇಕಾಗುತ್ತದೆ. ಕ್ಷಯ ರೋಗಕ್ಕೆ ಕನಿಷ್ಠ 2ರಿಂದ 3 ವರ್ಷ ಔಷಧಿ ಸೇವಿಸಬೇಕಾಗಬಹುದು. ಯಾರು ನಿಯಮಿತ ಮತ್ತು ಪೂರ್ಣಕಾಲಿಕ ಚಿಕಿತ್ಸೆ ಪಡೆಯುವುದಿಲ್ಲವೋ ಅವರ ಕ್ಷಯ ರೋಗ ಖಂಡಿತವಾಗಿಯೂ ವಾಸಿಯಾಗದು ಮತ್ತು ರೋಗ ಲಕ್ಷಣಗಳು ಮರುಕಳಿಸುತ್ತವೆ. ವೈದ್ಯರ ಸೂಚನೆಯಂತೆ ಅವರು ನೀಡಿದ ಔಷಧಿಯನ್ನು ನಿಗದಿ ಪಡಿಸಿದ ಅವಧಿ ಪೂರ್ತಿ ತೆಗೆದುಕೊಳ್ಳಲೇಬೇಕು.

ಕೊನೆ ಮಾತು

ಕ್ಷಯ ರೋಗ ಮನುಕುಲದ ಬಹುದೊಡ್ಡ ವೈರಿ. ಬಡ ಮತ್ತು ಮಧ್ಯಮ ವರ್ಗದ ನಡು ವಯಸ್ಸಿನ ದುಡಿಯುವ ಮಂದಿಯನ್ನು ಕಾಡುವ ಕ್ಷಯ ರೋಗ ದೇಶದ ಪ್ರಗತಿಗೆ ಬಹಳ ಮಾರಕವಾದ ರೋಗ. ದಿನ ಬೆಳಗಾಗುವುದರೊಳಗೆ ಸಾಯದಿದ್ದರೂ ಕ್ಷಣ ಕ್ಷಣಕ್ಕೂ ವ್ಯಕ್ತಿಯನ್ನು ಕ್ಷೀಣಗೊಳಿಸಿ ದೇಶದ ಆರ್ಥಿಕತೆಗೆ ಹೊಡೆತ ನೀಡುತ್ತದೆ. ದುಡಿಯುವ ಕೈಗಳನ್ನು ರೋಗ ಬಾಧಿಸಿ ಇಡೀ ಕುಟುಂಬವನ್ನು ದುರ್ಗತಿಗೆ ತಳ್ಳುತ್ತದೆ.

ಇತ್ತೀಚಿನ ದಿನಗಳಲ್ಲಿ ಏಡ್ಸ್, ಹೆಪಟೈಟೀಸ್ ಮುಂತಾದ ಮಾರಣಾಂತಿಕ ರೋಗಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದ್ದು ಮನುಷ್ಯನ ರಕ್ಷಣಾ ವ್ಯವಸ್ಥೆ ಹದಗೆಟ್ಟು ಮತ್ತಷ್ಟು ಕ್ಷಯ ರೋಗಿಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಸಾಮಾನ್ಯ ರೋಗಿಗಳಿಗಿಂತ ಏಡ್ಸ್‌ರೋಗಿಗಳು 30 ಪಟ್ಟು ಹೆಚ್ಚು ಕ್ಷಯ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದ್ದು ಮುಂಬರುವ ದಿನಗಳಲ್ಲಿ ನಾವು ಇನ್ನಷ್ಟು ಎಚ್ಚರಿಕೆ ಮತ್ತು ಜಾಗ್ರತೆ ವಹಿಸದಿದ್ದಲ್ಲಿ ಏಡ್ಸ್ ಮತ್ತು ಕ್ಷಯ ರೋಗಗಳು ಮನುಕುಲವನ್ನು ನುಂಗಿ ನೀರು ಕುಡಿಯುವುದರಲ್ಲಿ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿ ವೈದ್ಯರು ಮಾತ್ರವಲ್ಲದೆ ಸಾರ್ವಜನಿಕರು ಮತ್ತು ರೋಗಿಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ನಿಭಾಯಿಸಿದ್ದಲ್ಲಿ ಕ್ಷಯ ರೋಗವನ್ನು ಮತ್ತು ಇನ್ಯಾವುದೇ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.

ಚಿಕಿತ್ಸೆ ಹೇಗೆ?

ಮೇಲೆ ತಿಳಿಸಿದ ರೋಗದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಅಲಕ್ಷ್ಯ ಮಾಡದೇ ತಜ್ಞ ವೈದ್ಯರ ಸಲಹೆ ಪಡೆಯಬೇಕು. ರೋಗದ ಪತ್ತೆಗಾಗಿ ಕೆಲವೊಂದು ನಿಗದಿತ ಪರೀಕ್ಷೆಗಳಿದ್ದು ವೈದ್ಯರು ಈ ಪರೀಕ್ಷೆ ನಡೆಸಿದ ಬಳಿಕವೇ ತೀರ್ಮಾನಕ್ಕೆ ಬರುತ್ತಾರೆ. ಕ್ಷಯ ರೋಗ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಪ್ರತೀ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾದ ಸೌಲಭ್ಯವಿದೆ. ಪ್ರತೀ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಔಷಧಿ ನೀಡಲಾಗುತ್ತದೆ. ಇಂತಹ ರೋಗಿಗಳನ್ನು ಆಸ್ಪತ್ರೆಗಳಲ್ಲಿ ಒಳ ರೋಗಿಗಳಾಗಿಯೂ ದಾಖಲಿಸಿಕೊಂಡು ವೈದ್ಯರು ಮತ್ತು ದಾದಿಯರ ತಜ್ಞ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಆರಂಭಿಸಿದ ವಾರದ ಒಳಗೆ ರೋಗ ಹರಡುವಿಕೆ ನಿಂತುಹೋಗುತ್ತದೆ. ಆದರೆ ಸಂಪೂರ್ಣ ಗುಣಮುಖವಾಗಲು ವೈದ್ಯರ ಸಲಹೆಯಂತೆ ಸಂಪೂರ್ಣವಾದ ಅವಧಿಗೆ ಸರಿಯಾದ ರೀತಿಯಲ್ಲಿ ಔಷಧಿ ಸೇವಿಸಲೇಬೇಕು. ಇಲ್ಲವಾದಲ್ಲಿ ಕ್ಷಯ ರೋಗ ಮರುಕಳಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಮುರಲೀ ಮೋಹನ್, ಚೂಂತಾರು

contributor

Similar News