ಮಲೇರಿಯಾ ಸೋಲಿಸಿ- ಮನುಕುಲ ಗೆಲ್ಲಿಸಿ

ಇಂದು ವಿಶ್ವ ಮಲೇರಿಯಾ ಜಾಗೃತಿ ದಿನ

Update: 2023-04-25 07:31 GMT

ಪ್ರತೀ ವರ್ಷ ಎಪ್ರಿಲ್ 25ರಂದು ವಿಶ್ವದಾದ್ಯಂತ ‘‘ವಿಶ್ವ ಮಲೇರಿಯಾ’’ ದಿನ ಎಂದು ಆಚರಿಸಲಾಗುತ್ತಿದೆ. ಮಲೇರಿಯಾ ರೋಗದಿಂ ದಾಗುವ ಜಾಗತಿಕ ತೊಂದರೆಗಳು ಮತ್ತು ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತರಲಾಯಿತು. ವಿಶ್ವದಾದ್ಯಂತ ಸರಿಸುಮಾರು 3.3 ಬಿಲಿಯನ್ ಮಂದಿ ಈ ರೋಗಕ್ಕೆ ವರ್ಷವೊಂದರಲ್ಲಿ ತುತ್ತಾಗುತ್ತಿದ್ದು, 2012ರಲ್ಲಿ 6.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 2013ರಲ್ಲಿ 5.8 ಲಕ್ಷ ಮಂದಿ ಜೀವತೆತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ವಿಶ್ವಸಂಸ್ಥೆಯ 60ನೇ ವಾರ್ಷಿಕ ಸಮ್ಮೇಳನ 2007ರ ಮೇನಲ್ಲಿ ಜರುಗಿದಾಗ ಈ ‘‘ವಿಶ್ವ ಮಲೇರಿಯಾ’’ ದಿನ ಆಚರಣೆಯನ್ನು ಪ್ರತೀ  ವರ್ಷ ಎಪ್ರಿಲ್ 25ರಿಂದ ಜಾರಿಗೆ ತರಲಾಯಿತು. ಅದಕ್ಕೂ ಮೊದಲು 2001 ರಿಂದ ಪ್ರತಿವರ್ಷ ಎಪ್ರಿಲ್ 25ರಂದು ‘‘ಆಫ್ರಿಕಾ ಮಲೇರಿಯಾ ದಿನ’’ ಎಂದು ಆಚರಿಸಲಾಗುತ್ತಿತ್ತು. 2013ರಲ್ಲಿ 19.8 ಕೋಟಿ ಮಂದಿ  ಮಲೇರಿಯಾಕ್ಕೆ ತುತಾಗಿದ್ದು, ಅವರಲ್ಲಿ 5,84,000 ಸಾವು  ಸಂಭವಿಸಿತ್ತು. 2014ರಲ್ಲಿ 97 ದೇಶಗಳಲ್ಲಿ ಮಲೇರಿಯಾ ಕಂಡು ಬಂದಿತು.್ತ 2011ರಿಂದ 2014ರವರೆಗೆ ‘‘ಭವಿಷ್ಯದಲ್ಲಿ ಹೂಡಿಕೆ ಮಾಡಿ, ಮಲೇರಿಯಾವನ್ನು ಸೋಲಿಸಿ’’ ಎಂಬ ಘೋಷವಾಕ್ಯದೊಂದಿಗೆ ಮಲೇರಿಯಾ ವಿರುದ್ಧ ವಿಶ್ವ ಸಂಸ್ಥೆ ಆಂದೋಲನ ಆರಂಭಿಸಿತು. ಇದರ ಪರಿಣಾಮವಾಗಿ 2014-15ರಲ್ಲಿ ಮಲೇರಿಯಾ ರೋಗದ ಪ್ರಮಾಣ ಬಹಳಷ್ಟು ಇಳಿಕೆ ಕಂಡಿದೆ.

 2018ರ ಧ್ಯೇಯ ವಾಕ್ಯ ‘‘ಮಲೇರಿಯಾವನ್ನು ಸೋಲಿಸಲು ಸನ್ನದ್ಧರಾಗಿ, ಮನುಕುಲವನ್ನು ಗೆಲ್ಲಿಸಿ’’ ಎಂದಾಗಿತ್ತು. 2019ರಲ್ಲಿ ‘‘ಮಲೇರಿಯಾ ನಿರ್ನಾಮ ನನ್ನಿಂದಲೇ ಆರಂಭ’’ ಎಂಬ ಹೊಸ ಘೋಷವಾಕ್ಯದೊಂದಿಗೆ ಆಚರಿಸಲಾಗಿತ್ತು. 2021ರ ಮಲೇರಿಯಾ ದಿನಾಚರಣೆಯ ಧ್ಯೇಯ ವಾಕ್ಯ ‘‘ಝೀರೊ ಮಲೇರಿಯಾ ನನ್ನಿಂದಲೇ ಆರಂಭ’’ ಎಂದಾಗಿತ್ತು ಲ್ಯಾಟಿನ್ ಅಮೆರಿಕ, ಆಫ್ರಿಕಾ, ಏಶ್ಯ ಖಂಡಗಳ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಮಲೇರಿಯಾ, ಮಾರಣಾಂತಿಕ ಖಾಯಿಲೆ ಅಲ್ಲದಿದ್ದರೂ ಮನುಕುಲದ ಬಹುದೊಡ್ಡ ಶತ್ರು ಎಂದರೂ ತಪ್ಪಲ್ಲ. ಬೆಳೆಯುತ್ತಿರುವ ರಾಷ್ಟ್ರದ ಬಡ ಮತ್ತು ಮಧ್ಯಮ ವರ್ಗದ ಜನರಲ್ಲಿ ಕಾಣಸಿಗುವ ಮಲೇರಿಯಾ, ಮೂಲಭೂತ ಸೌಕರ್ಯದ ಕೊರತೆ, ಬಡತನ, ಅನಕ್ಷರತೆ ಇತ್ಯಾದಿ ಕಾರಣಗಳಿಂದಾಗಿ ಭಾರತದಂತಹ ರಾಷ್ಟ್ರಗಳನ್ನು ಬಹಳವಾಗಿ ಕಾಡುತ್ತಿದೆ. ಮಲೇರಿಯಾ ರೋಗದಿಂದ ಉಂಟಾಗುವ ಆರ್ಥಿಕ, ಸಾಮಾಜಿಕ ಪರಿಣಾಮಗಳು ದೇಶದ ಪ್ರಗತಿಗೆ ಬಹಳ ದೊಡ್ಡಕಂಟಕವಾಗಿ ಮಲೇರಿಯಾ ಬೆಳೆದು ನಿಂತಿದೆ ಎಂದರೂ ತಪ್ಪಲ್ಲ. ಈ ನಿಟ್ಟಿನಲ್ಲಿ ದಿನ ಆಚರಣೆ ಹೆಚ್ಚು ಅರ್ಥಪೂರ್ಣವಾಗಬೇಕಾದರೆ ನಾವೆಲ್ಲರೂ ಮಲೇರಿಯಾ ವಿರುದ್ಧ ಸಮರಸಾರಿ, ರೋಗವನ್ನು ಗೆಲ್ಲಬೇಕಾದ ಅನಿವಾರ್ಯತೆಯೂ ಇದೆ.

ನಿಮಗಿದು ಗೊತ್ತೆ?
1. ಮಲೇರಿಯಾ, ಅನಾಫೆಲಿಸ್ ಎಂಬ ಹೆಣ್ಣು ಸೊಳ್ಳೆಗಳಿಂದ ಹರಡುವ, ಪ್ಲಾಸ್ಟೋಡಿಯಂ ಎಂಬ ಪರಾವಲಂಬಿ ಜೀವ ಪ್ರಭೆೇದಕ್ಕೆ ಸೇರಿದೆ. ಇದು ಸಾಂಕ್ರಾಮಿಕ ರೋಗವಾಗಿದ್ದು ಉಷ್ಣ ವಲಯದ ತೇವ ಬರಿತ ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಹೆಚ್ಚು ಕಾಣಸಿಗುತ್ತದೆ.
2. 2015ರಲ್ಲಿ 21.50 ಕೋಟಿ   ಮಂದಿ ಈ ರೋಗಕ್ಕೆ ತುತ್ತಾಗಿದ್ದು, ಬಳಲಿ, 4,38,000 ಸಾವು ಸಂಭವಿಸಿದೆ. ವಿಶ್ವದ 109 ರಾಷ್ಟ್ರಗಳಲ್ಲಿ ತನ್ನ ಕಬಂದಬಾಹುವನ್ನು ವಿಸ್ತಿರಿಸಿರುವ ಮಲೇರಿಯ, 3.3 ಬಿಲಿಯನ್ ಮಂದಿ (ವಿಶ್ವದ ಜನಸಂಖ್ಯೆಯ ಅರ್ಧದಷ್ಟು) ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ.
3. ‘ಪ್ಲೂ’ ರೀತಿಯ ಲಕ್ಷಣಗಳಿಂದ ಆರಂಭಗೊಂಡು, ಅತಿಯಾದ ಚಳಿ ಮತ್ತು ಜ್ವರ,ವಾಂತಿ, ವಾಕರಿಕೆ, ತಲೆನೋವು, ವಿಪರೀತ ಮೈಕೈ ನೋವು ಮತ್ತು ಸುಸ್ತಿನಿಂದ ಕೂಡಿದ ರೋಗವಾಗಿದೆ. ಚಿಕಿತ್ಸೆಗೆ ಸಂಪೂರ್ಣವಾಗಿ ಸ್ಪಂದಿಸುವ ರೋಗ ಇದಾಗಿದ್ದು ರೋಗಿಯ ವಯಸ್ಸು, ಮಲೇರಿಯಾ ರೋಗದ ಪ್ರಭೇದ ಮತ್ತು ವ್ಯಕ್ತಿಯ ದೇಹಸ್ಥಿತಿಗೆ ಅನುಗುಣವಾಗಿ ಔಷಧಿಯನ್ನು ಆಯ್ಕೆ ಮಾಡಲಾಗುತ್ತದೆ.
4. ಅತೀ ಸುಲಭವಾಗಿ ಗುರುತಿ ಸಬಹುದಾದ ರೋಗ ಇದಾಗಿದ್ದು SಃU ಎಂಬ ಪರೀಕ್ಷೆ ಮುಖಾಂತರ ರಕ್ತದ ಪರೀಕ್ಷೆ ಮಾಡಿ ರೋಗವನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಮಾಡಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ರೋಗ ಪತ್ತೆ ಮಾಡಲು ಸಾಧ್ಯವಿದೆ. ಅತ್ಯಂತ ಅತ್ಯಾಧುನಿಕ ಉಪಕರಣಗಳ ಅಗತ್ಯ ಈ ರೋಗದ ಪತ್ತೆಗೆ ಅಗತ್ಯವಿಲ್ಲ.
5. ಮಲೇರಿಯಾ ರೋಗಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ. ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಲಸಿಕೆ ಕಂಡುಹಿಡಿದಲ್ಲಿ ಮನುಕುಲವನ್ನು ಇನ್ನಿಲ್ಲದಂತೆ ಕಾಡುವ ಈ ರೋಗದಿಂದ ಮುಕ್ತಿ ಸಿಗಲೂಬಹುದು.
6. ಅತೀ ಸುಲಭವಾಗಿ ತಡೆಗಟ್ಟಬಹುದಾದ ರೋಗ ಇದಾಗಿದ್ದು ಸಾಕಷ್ಟು ಸೊಳ್ಳೆ ವಿಕರ್ಷಕ ತಂತ್ರಗಳನ್ನು ಮತ್ತು ಸೊಳ್ಳೆ ನಿಯಂತ್ರಣ ಮಾಡಿದಲ್ಲಿ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
7. ಮಲೇರಿಯಾ ಸಂಬಂಧಿ ಸಾವಿನ ಸಿಂಹಪಾಲು ಆಫ್ರಿಕಾ ದೇಶದಲ್ಲಿ ಆಗುತ್ತಿದ್ದು ಹೆಚ್ಚಿ
ನವರು 5 ವರ್ಷಕ್ಕಿಂತ ಕೆಳಗಿನ ಮಕ್ಕಳು.
8. ಸೊಳ್ಳೆಗಳಿಂದ ಕಡಿಸಿಕೊಂಡ  ಬಳಿಕ ಒಂದು ವಾರದಿಂದ ಒಂದು ತಿಂಗಳವರೆಗೆ ಮಲೇರಿಯಾ ಕಾಣಿಸಿಕೊಳ್ಳಬಹುದು. ಅತಿ ವಿರಳ ಸಂದರ್ಭಗಳಲ್ಲಿ 4 ವರ್ಷಗಳ  ಬಳಿಕ ಕಾಣಿಸಿದ್ದೂ ಇದೆ.
9. ಗರ್ಭಿಣಿಯರು ಮಲೇರಿಯಾಕ್ಕೆ ತುತ್ತಾದಲ್ಲಿ ತಾಯಿಯಿಂದ ಮಗುವಿಗೆ ಮಲೇರಿಯಾ ಬರುವ ಸಾಧ್ಯತೆ ಮತ್ತು ಹುಟ್ಟಿದ ಮಗುವಿನ ತೂಕವನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.
10. ಪ್ಲಾಸ್ಮೋಡಿಯಂ ಫಾಲ್ಸಿಪೆರಮ್ ಅತ್ಯಂತ ಗಂಭೀರ ಮಲೇರಿಯಾ ರೋಗಕ್ಕೆ ಕಾರಣ ವಾಗುತ್ತದೆ. ಮೆದುಳು ಮತ್ತು ನರವ್ಯೆಹಕ್ಕೆ ವ್ಯಾಪಿಸಿ, ಸಾವಿಗೆ ಮುನ್ನುಡಿ ಬರೆಯುತ್ತದೆ. ಶಾಸ್ತೀಯವಾದ ಚಿಕಿತ್ಸೆಗೆ ಇದು ಸುಲಭದಲ್ಲಿ ಬಗ್ಗುವುದಿಲ್ಲ. ಪ್ಲಾಸ್ಮೋಡಿಯಂ ಮಲೇರಿಯ (ಶೇ.1) ಎಂಬ ರೋಗ ಅತಿ ವಿರಳ ಮತ್ತು ದೇಹದ ರಕ್ಷಣಾ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ಪ್ಲಾಸ್ಮೋಡಿಯಂ ಒವಾಲೇ ಕೂಡಾ ಭಾರತದಲ್ಲಿ ಅತಿ ವಿರಳ. ಆದರೆ ಆಫ್ರಿಕಾ ದೇಶದಲ್ಲಿ ಅತಿಯಾಗಿ ಕಾಣಿಸುತ್ತದೆ. ಪ್ಲಾಸ್ಮೋಡಿಯಂ ವೈವಾಕ್ಸ್ ಭಾರತದಲ್ಲಿ ಅತಿ ಹೆಚ್ಚು (ಶೇ.60) ಕಾಣಸಿಗುತ್ತದೆ. ಮಾರಣಾಂತಿಕವಲ್ಲದಿದ್ದರೂ, ಯಕೃತ್ಮತ್ತು ಕಿಡ್ನಿಯ ವೈಫಲ್ಯಕ್ಕೆ ದಾರಿ ಮಾಡಿ ಕಾಡುತ್ತದೆ ಮತ್ತು ಪದೇ ಪದೇ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
11. ಭಾರತದಲ್ಲಿ, ವರ್ಷವೊಂದರಲ್ಲಿ 1 ಮಿಲಿಯನ್ ಮಂದಿ ಈ ರೋಗದಿಂದ ಸಾವನ್ನಪ್ಪುತ್ತಿದ್ದು ಹೆಚ್ಚಿನ ಮಂದಿಯನ್ನು ಕ್ಲೊರೋಕ್ಸಿನ್ ಎಂಬ ಔಷಧಿಯನ್ನು ಬಳಸಿ ನಿಯಂತ್ರಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ಲಾಸ್ಮೋಡಿಯಂ ಫಾಲ್ಸಿಪೆರಮ್ ಎಂಬ ಮಲೇರಿಯಾ ಈ ಔಷಧಿಗೆ ಸ್ಪಂದಿಸುವುದಿಲ್ಲ ಮತ್ತು ಇತ್ತೀಚಿನ ದಿನಗಳಲ್ಲಿ ಮಲ್ಟಿ ಡ್ರಗ್ಸ್ ಥೆರಫಿ ಎಂದರೆ ಎರಡೆರಡು ಔಷಧಿಗಳನ್ನು ಜೊತೆಜೊತೆಯಾಗಿ ಉಪಯೋಗಿಸಿ ರೋಗವನ್ನು ಹತೋಟಿಗೆ ತರಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಟ್ರಿ ಮಿಸಿನಿನ್ ಎಂಬ ಔಷಧಿಯನ್ನು ಹೆಚ್ಚಾಗಿ ಬಳಸುತ್ತಾರೆ. ಹಲವು ಔಷಧಿಗಳನ್ನು ಜೊತೆಜೊತೆಗೆ ಬಳಸುವುದರಿಂದ ರೋಗ ಮರುಕಳಿಸುವ ಸಾಧ್ಯತೆ ಕಡಿಮೆಯಾಗುತ್ತದೆ ಮತ್ತು ವ್ಯಕ್ತಿಯ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ರೋಗ ಗುಣವಾದ ಬಳಿಕ ನಾಲ್ಕರಿಂದ ಐದು ದಿನ ಔಷಧಿ ತೆಗೆದುಕೊಂಡಲ್ಲಿ ರೋಗ ವಾಹಕ ಪರಾವಲಂಬಿ ಜೀವಿಗಳನ್ನು ಸಂಪೂರ್ಣವಾಗಿ ನಾಶ ಮಾಡಿ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಮತ್ತು ಮರುಕಳಿಸದಂತೆ ತಡೆಯಬಹುದು.

Similar News