ಚೇತನ ವಿಶೇಷ ಶಾಲೆಯಲ್ಲೊಂದು ಹೊಸತನ ಬೋಧನೆಗಾಗಿ ಬಂದ ಜರ್ಮನ್ ಯುವತಿ

Update: 2016-01-05 13:26 GMT

ಕಾರ್ಕಳ : ಭಾರತೀಯ ಶಿಕ್ಷಣ ಪದ್ದತಿ ವಿಭಿನ್ನ. ಇಲ್ಲಿ ಸಂಸ್ಕಾರ, ಸಂಸ್ಕೃತಿ ಹಾಗೂ ಹಿರಿಯರನ್ನು ಗೌರವಿಸುವ ಶಿಕ್ಷಣ ಸಿಗುತ್ತಿರುವುದನ್ನು ನಾನು ಕಂಡೆ. ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಸತ್ಪ್ರಜೆಯಾಗಿ ತೊಡಗಿಸಿಕೊಳ್ಳಲು ಪರಿಪೂರ್ಣವಾದ ಶಿಕ್ಷಣ ಸಿಗುತ್ತಿದೆ. ಜರ್ಮನಿಯ ಶಿಕ್ಷಣವು ನಿರ್ದಿಷ್ಟ ಉದ್ದೇಶವನ್ನು ಈಡೇರಿಸಿಕೊಳ್ಳಲು ಮಾತ್ರ ದೊರಕುವ ಬೋಧನೆ ಹೊರತು, ಬಹುಮುಖ ಪ್ರತಿಭೆಯಾಗಿ ಹಾಗೂ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಶಿಕ್ಷಣವಾಗಿ ಮೂಡಿ ಬರುತ್ತಿಲ್ಲ ಎನ್ನುವುದು ಇಲ್ಲಿಗಾಗಮಿಸಿದ ಬಳಿಕ ತಿಳಿದುಕೊಂಡಿದ್ದೇ ಎನ್ನುವ ಜುಲಿನಾ ಪಾಠದ ಜತೆಗೆ ಆಟ, ಸ್ನೇಹಮಯೀ ಜೀವನ, ಹಿತಕರವಾದ ವಾತಾವರಣ, ರಚಿಕರವಾದ ಆಹಾರ, ಹಿರಿಯರಿಗೆ ಗೌರವ, ಶಿಸ್ತುಬದ್ದ ಸಂಸ್ಕೃತಿ ಇವೆಲ್ಲವುಗಳನ್ನು ಕಂಡದ್ದು ನಾನು ಭಾರತದಲ್ಲಿ. ನನಗೆ ಅತ್ಯಂತ ಖುಷಿ ನೀಡಿದೆ. ಇಲ್ಲೇ ಇದ್ದು ಬಿಡೋಣ ಎಂದನಿಸುತ್ತಿದೆ. ಜರ್ಮನಿಯ ಪೀಟರ್ ಮತ್ತು ಪೆಟ್ರಾ ದಂಪತಿಯ ಪುತ್ರಿಯಾಗಿರುವ 18ರ ಯುವತಿ ಜುಲಿನಾ.

ಈಕೆ ಕಾರ್ಕಳ ಚೇತನಾ ವಿಶೇಷ ಶಾಲೆಯಲ್ಲಿ ಕಳೆದ ಹಲವು ತಿಂಗಳಿಂದ ಚೇತನಾ ವಿಶೇಷ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಹನ್ನೆರಡನೇ ತರಗತಿ ಓದುತ್ತಿರುವ ಆಕೆ ಪ್ರೋಜೆಕ್ಟ್ ವರ್ಕ್‌ನ ಕಾರ್ಯ ನಿಮಿತ್ತ ಭಾರತಕ್ಕಾಗಮಿಸಿದ್ದು. ಈ ಶಾಲೆಯಲ್ಲಿ ವಿಕಲಚೇತನ ಮಕ್ಕಳಿಗೆ ಪಠ್ಯವನ್ನು ಬೋಧಿಸುತ್ತಾ. ಇಂಗ್ಲೀಷ್ ಭಾಷೆಯನ್ನು ವಿಕಲ ಚೇತನ ಮಕ್ಕಳಿಗೆ ಪರಿಚಯಿಸುತ್ತಿದ್ದಾಳೆ. ಜತೆಗೆ ಮಕ್ಕಳನ್ನು ಆಡಿಸುತ್ತಾಳೆ, ಕೈ ಹಿಡಿದು ನಡೆಸುತ್ತಾಳೆ, ಅವರೊಂದಿಗೆ ಬೆರೆತು ಬಾಳುತ್ತಿದ್ದಾಳೆ. ಕನ್ನಡದ ಬಗ್ಗೆ ಒಂದಿಷ್ಟು ತಿಳಿಯದ ಆಕೆ, ಕನ್ನಡ ಮಾತನಾಡುವ ಮಕ್ಕಳ ಜತೆ ಪೂರ್ಣವಾಗಿ ಬೆರೆಯುತ್ತಿದ್ದಾಳೆ.ಕನ್ನಡವನ್ನು ಅರ್ಥೈಸಿಕೊಳ್ಳಲು ಕೂಡಾ ಪ್ರಯತ್ನಿಸುತ್ತಿರುವ ಇವಳು ಅಲ್ಪ ಸಲ್ಪ ಕನ್ನಡ ಬಾಷೆ ಮಾತನಾಡುತ್ತಿರುವುದು ವಿಶೇಷ ವಾಗಿದೆ.

ಇಲ್ಲಿರುವ ವಾತಾವರಣ ನನಗೆ ಅತ್ಯಂತ ಪ್ರಿಯವಾಗಿದೆ. ರುಚಿಕರವಾದ ಊಟೋಪಚಾರ ಕೂಡಾ ನನಗೆ ಖುಷಿಕೊಟ್ಟಿದೆ. ವಿಕಲಚೇತನರಾದ ಈ ಮಕ್ಕಳು ಕೂಡಾ ಇಂತಹ ಸುಂದರ ಪರಿಸರದಲ್ಲಿ ದೈಹಿಕವಾಗಿ ಶಕ್ತರಾಗಿ ಬಾಳಬೇಕೆಂಬ ಆಸೆ ನನಗಿದೆ. ಅದಕ್ಕಾಗಿ ನನ್ನಿಂದಾದ ಸಹಕಾರವನ್ನು ಮಾಡಲಿದ್ದೇನೆ. ಇಲ್ಲಿ ನೀಡಲಾಗುವ ಶಿಕ್ಷಣ ಅದರ ಜತೆ ನೃತ್ಯ, ಯೋಗ, ಆಟೋಟಗಳು ಕೂಡಾ ನನಗೆ ಅತ್ಯಂತ ಪ್ರೀಯ ಎನ್ನುತ್ತಾಳೆ ಆಕೆ

Writer - ಮಹಮ್ಮದ್ ಶರೀಫ್

contributor

Editor - ಮಹಮ್ಮದ್ ಶರೀಫ್

contributor

Similar News