×
Ad

ಬೆಂಗಳೂರು,ಜ.20: ಸರ್ಕಾರಿ ಜಾಹೀರಾತುಗಳಷ್ಟೇ ಅಲ್ಲದೇ ಮಾರಾಟ ಸರಕುಗಳ ಮೇಲೂ ರಾಜಕೀಯ ನಾಯಕರ ಭಾವಚಿತ್ರ ಇರಬಾರದು.

Update: 2016-01-20 16:36 IST

ಬೆಂಗಳೂರು,ಜ.20: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ಜಾಹೀರಾತುಗಳಷ್ಟೇ ಅಲ್ಲದೇ ಮಾರಾಟ ಸರಕುಗಳ ಮೇಲೂ ರಾಜಕೀಯ ನಾಯಕರ ಭಾವಚಿತ್ರ ಇರಬಾರದು. ಸರಕುಗಳಲ್ಲಿ ಈಗಾಗಲೇ ಮುದ್ರಿಸಿದ್ದಲ್ಲಿ ಭಾವಚಿತ್ರವನ್ನು ಮರೆಮಾಚಿ ಮಾರಾಟ ಮಾಡುವಂತೆ ರಾಜ್ಯ ಚುನಾವಣಾ ಆಯೋಗ ಸರ್ಕಾರಕ್ಕೆ ಕಟ್ಟೆಚ್ಚರ ನೀಡಿದೆ. ಫೆಬ್ರವರಿ 13 ಹಾಗೂ 20 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾದರಿ ನಡಾವಳಿ ಸಂಹಿತೆ ಫೆಬ್ರವರಿ 24ರವರೆಗೆ ಇರಲಿದ್ದು, ಈ ಸಂಬಂಧ ಆಯೋಗ ಸಮಗ್ರ ಸುತ್ತೋಲೆ ಹೊರಡಿಸಿದೆ. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಸರ್ಕಾರಿ ವಾಹನಗಳ ಮೇಲೂ ರಾಜಕೀಯ ಮುಖಂಡರ ಭಾವಚಿತ್ರ, ಪೋಸ್ಟರ್‌ಗಳನ್ನು ಹಾಕುವಂತಿಲ್ಲ. ಕಟೌಟ್‌ಗಳ ಪ್ರದರ್ಶನ ನಿಷೇಧಿಸಲಾಗಿದೆ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರಿಗೆ ಇಲಾಖೆ ಮತ್ತು ವಾರ್ತಾ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದೆ. ರಾಜಕೀಯ ಮುಖಂಡರ ಭಾವಚಿತ್ರವಿರುವ ಭಿತ್ತಿಪತ್ರ, ಬ್ಯಾನರ್, ಕಟೌಟ್, ಫಲಕಗಳನ್ನು ಸಾರ್ವಜನಿಕವಾಗಿಯೂ ಪ್ರದರ್ಶಿಸುವಂತಿಲ್ಲ. ಇಂತಹ ಸಂಗತಿ ಗಮನಕ್ಕೆ ಬಂದ ಕೂಡಲೇ ಸಂಬಂಧಪಟ್ಟ ಪ್ರಾಧಿಕಾರಗಳು ತೆರವುಗೊಳಿಸಲು ಅಗತ್ಯ ಕ್ರಮ ಜರುಗಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನೀತಿ ಸಂಹಿತೆ ಜಾರಿಗೊಳಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗಿದೆ. ಚುನಾವಣೆ ಮುಗಿಯುವ ತನಕ ಮಂತ್ರಿಗಳು ಇಲ್ಲವೆ ಶಾಸಕರ ಅಧ್ಯಕ್ಷತೆಯಲ್ಲಿ ಕೆ.ಡಿ.ಪಿ ಸಭೆಗಳನ್ನು ನಡೆಸುವಂತಿಲ್ಲ. ಬರ ಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೀರಿನ ಯೋಜನೆಯಡಿ ಕಾಮಗಾರಿಗಳನ್ನು ಪ್ರಾರಂಭಿಸಿ ಅನುಷ್ಠಾನಗೊಳಿಸಲು ಹಾಗೂ ನೆರೆ, ಪ್ರಕೃತಿ ವಿಕೋಪ ಪರಿಹಾರ ವಿತರಣೆಗೆ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಇಂತಹ ಸಮಾರಂಭಕ್ಕೆ ರಾಜಕೀಯ ನಾಯಕರನ್ನು ಕರೆತರುವಂತಿಲ್ಲ ಎಂದು ಆಯೋಗ ಹೇಳಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಸಭೆಗಳನ್ನು ಆಯೋಜಿಸುವ ಮುನ್ನ ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು. ಮತದಾರರ ಮೇಲೆ ಪರಿಣಾಮ ಬೀರುವಂತಹ ಕ್ರಮಗಳು ನಿಷಿದ್ಧ. ತಾತ್ಕಾಲಿಕ ಹುದ್ದೆಗಳ ನೇಮಕಾತಿಗೆ ಅವಕಾಶವಿಲ್ಲ. ತುರ್ತು ಸೇವೆಗೆ ನೇಮಕಾತಿ ಅಗತ್ಯವಿದ್ದಲ್ಲಿ ಮತ್ತು ಸರ್ಕಾರಿ ನೌಕರರ ವರ್ಗಾವಣೆ, ಬಡ್ತಿ, ಖಾಲಿ ಹುದ್ದೆಗಳ ನೇಮಕಾತಿಗೂ ಮುನ್ನ ಆಯೋಗದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ವಿಧಾನಮಂಡಲ ಮತ್ತು ಸಂಸತ್ ಸದಸ್ಯರುಗಳಿಗೆ ಜಿಲ್ಲಾ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಸಾಮಾನ್ಯ ಕರ್ತವ್ಯ ನಿರ್ವಹಣೆಗೆ ಒದಗಿಸಲಾದ ಸರ್ಕಾರಿ ವಾಹನಗಳನ್ನು ಜಿಲ್ಲಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ಅಗತ್ಯವಿಲ್ಲ. ವಾಹನಗಳನ್ನು ಚುನಾವಣಾ ಪ್ರಚಾರ ಮತ್ತು ಚುನಾವಣಾ ಕಾರ್ಯಗಳಿಗೆ ಬಳಕೆಮಾಡಿಕೊಂಡಲ್ಲಿ ತಕ್ಷಣವೇ ಜಿಲ್ಲಾಧಿಕಾರಿಗಳು ವಾಹನಗಳನ್ನು ವಶಕ್ಕೆ ಪಡೆಯುವಂತೆ ಆಯೋಗ ನಿರ್ದೇಶನ ನೀಡಿದೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು ಚುನಾವಣಾ ಪ್ರಾರಂಭದಿಂದ ಮುಕ್ತಾಯಗೊಳ್ಳುವ ತನಕ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ವಶದಲ್ಲಿರಬೇಕೆಂದು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News