ಬೆಂಗಳೂರು : ಉದ್ದಿಮೆದಾರರಿಗೆ ಹಣಕಾಸು ನೆರವು ದೊರೆಯುವುದು ಅತ್ಯಂತ ದೊಡ್ಡ ಹಾಗೂ ಪ್ರಮುಖ ಸವಾಲಾಗಿದೆ, ಮಜುಂದಾರ್ ಷಾ
ಬೆಂಗಳೂರು : ಮಹಿಳೆಯರು ತಮ್ಮಕಲ್ಪನೆಯ ಉದ್ಯಮಗಳನ್ನು ಆರಂಭಿಸಿ ವಾಣಿಜ್ಯ ಮಾರುಕಟ್ಟೆ ಪ್ರವೇಶಿಸಲು ಮೂಲಧನ ನೆರವು ಪ್ರಮುಖ ಅಗತ್ಯತೆಯಾಗಿದೆ ಎಂದು ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಹೇಳಿದ್ದಾರೆ.
ಉದ್ದಿಮೆದಾರರಿಗೆ ಹಣಕಾಸು ನೆರವು ದೊರೆಯುವುದು ಅತ್ಯಂತ ದೊಡ್ಡ ಹಾಗೂ ಪ್ರಮುಖ ಸವಾಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಇನ್ವೆಸ್ಟ್ ಕರ್ನಾಟಕ 2016 ಜಾಗತಿಕ ಹೂಡಿಕೆದಾರರ ಸಮಾವೇಶದ ಎರಡನೇ ದಿನವಾದ ಇಂದು ಮಹಿಳಾ ಉದ್ದಿಮೆದಾರ ಉತ್ತೇಜನ ಕುರಿತ ಗೋಷ್ಠಿಯಲ್ಲಿ ಉದ್ಯಮ ಆರಂಭಕ್ಕೆ ಹಣಕಾಸು ನೆರವು ಎಷ್ಟು ಮುಖ್ಯ ಎನ್ನುವುದನ್ನು ಅನಾವರಣಗೊಳಿಸಿದರು. ಇನ್ಪೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣ ಮೂರ್ತಿ ಅವರು, 1983 ರಲ್ಲಿ ವಾಣಿಜ್ಯ ಬ್ಯಾಂಕ್ಗಳು ಐಟಿ ಕಂಪೆನಿ ಆರಂಭಿಸಲು 50 ಲಕ್ಷರೂ ಸಾಲ ಸೌಲಭ್ಯ ಒದಗಿಸಿರಲಿಲ್ಲ. ಕೊನೆಗೆ ಸರ್ಕಾರಿ ಸ್ವಾಮ್ಯದ ಕೆ.ಎಸ್.ಎಫ್.ಸಿ ಮತ್ತು ಕೆ.ಎಸ್.ಎಸ್.ಐ.ಐ.ಡಿ.ಸಿ. ಹಣಕಾಸು ಸಂಸ್ಥೆಗಳು ನೆರವು ಒದಗಿಸಿದ್ದನ್ನು ಇನ್ವಸ್ಟ್ಕರ್ನಾಟಕಉದ್ಘಾಟನಾ ಸಮಾರಂಭದಲ್ಲಿ ನಿನ್ನೆ ಸ್ಮರಿಸಿಕೊಂಡಿದ್ದರು. ಇದೇ ರೀತಿಯ ಪರಿಸ್ಥಿತಿ ತಮಗೂ ಎದುರಾದ ಬಗೆಯನ್ನು ಕಿರಣ್ ಮಜುಂದಾರ್ ಷಾ ಗೋಷ್ಠಿಯಲ್ಲಿ ಹೇಳಿಕೊಂಡರು.
ಕಳೆದ 1978ರಲ್ಲಿ ತಮ್ಮ ಸ್ಮರಣೀಯ ಮತ್ತು ಉತ್ಸಾಹದಾಯ ಪಯಣ ಜೈವಿಕ ತಂತ್ರಜ್ಞಾನ ಕಂಪೆನಿ ಆರಂಭಿಸುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಮೊದಲ ಬಾರಿಗೆ ಸಾಲದ ನೆರವು ನೀಡಿತು ಎಂದರು.ಬೆಂಗಳೂರಿನ ಅನುಭವಿ ಮಾನವ ಸಂಪನ್ಮೂಲ, ಉದ್ಯಮಶೀಲ ಉತ್ಸಾಹ ಹಾಗೂ ರಾಜ್ಯ ಸರ್ಕಾರದ ಸಕಾರಾತ್ಮಕ ಧೋರಣೆಯಿಂದಾಗಿ ಬಯೋಕಾನ್ ಲಿಮಿಟೆಡ್ ಏಷ್ಯಾದ ಅತಿದೊಡ್ಡ ಜೈವಿಕ ತಂತ್ರಜ್ಞಾನ ಕಂಪೆನಿಯಾಗಿ ಹೊರಹೊಮ್ಮಿದೆ ಎಂದು ಹೆಮ್ಮೆಯಿಂದ ನುಡಿದರು.
ರಾಜ್ಯದ ಇಬ್ಬರು ಹಿರಿಯ ಮಹಿಳಾ ಐ.ಎ.ಎಸ್. ಅಧಿಕಾರಿಗಳಾದ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೆ.ರತ್ನಪ್ರಭ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಗೋಷ್ಠಿಯ ನಿರೂಪಣೆ ಮಾಡಿದರು. ಮಹಿಳಾ ಉದ್ದಿಮೆದಾರರಿಗೆ ಕೈಗಾರಿಕಾ ವಲಯದಲ್ಲಿ ಲಭ್ಯವಿರುವ ಸೌಕರ್ಯ ಮತ್ತುಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಇತರ ಮಹಿಳಾ ಉದ್ದಿಮೆದಾರು ಪ್ರಸ್ತಾಪಿಸಿ ಗಮನ ಸೆಳೆದರು.
ಹೆಚ್ಚುವರಿ ಮುಖ್ಯಕಾರ್ಯದರ್ಶಿ ರತ್ನ ಪ್ರಭ ಮಾತನಾಡಿ, ಯಶಸ್ವಿ ಮಹಿಳಾ ಉದ್ದಿಮೆದಾರು ಮತ್ತು ಸಕ್ರಿಯ ಪುರುಷ ಉದ್ದಿಮೆದಾರರ ನಡುವೆ ಸಂವಾದ ನಡೆಸಲು ಪ್ರತ್ಯೇಕ ಗೋಷ್ಠಿ ಏರ್ಪಡಿಸುವುದಾಗಿ ಖಾತರಿ ಪಡಿಸಿದರು.ಸರ್ಕಾರ ಮಹಿಳಾ ಉದ್ದಿಮೆದಾರರನ್ನು ಉತ್ತೇಜಿಸಲು ವಿಶೇಷವಾಗಿ ಮಹಿಳಾ ಉದ್ಯಮವಾಣಿ ಘಟಕ ಆರಂಭಿಸಲಾಗಿದೆ. ಸಾಲದ ನೆರವು ನೀಡುವಜತೆಗೆ ಮಹಿಳಾ ಉದ್ದಿಮೆದಾರರನ್ನು ಪ್ರೋತ್ಸಾಹಿಸುವ, ಪ್ರೇರೇಪಿಸುವ ಮತ್ತು ಸಬಲೀಕರಣಗೊಳಿಸುವ ಕೆಲಸವನ್ನು ಈ ಘಟಕ ನಿರ್ವಹಿಸಲಿದೆ ಎಂದರು.
– ರಾಜ್ಯ ಸರ್ಕಾರದ 2014 19ರ ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ದಿಮೆದಾರರಿಗೆ ನಿರ್ದಿಷ್ಟ ನಿಬಂಧನೆಗಳು, ಪ್ರೋತ್ಸಾಹಗಳು ದೊರೆಯಲಿವೆ. ರಾಮನಗರಜಿಲ್ಲೆಯ ಹಾರೋಹಳ್ಳಿ ಮತ್ತು ಧಾರವಾಡಜಿಲ್ಲೆಯ ಹುಬ್ಬಳ್ಳಿಯಲ್ಲಿ ವಿಶೇಷವಾಗಿ ಮಹಿಳೆಯರ ಎರಡುಟೆಕ್ ಪಾರ್ಕ್ಗಳನ್ನು ಆರಂಭಿಸಲಾಗುವುದು. ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಟೆಕ್ ಪಾರ್ಕ್ನ್ನು ಉದ್ಘಾಟಿಸಲಿದ್ದಾರೆ ಎಂದು ರತ್ನಪ್ರಭ ಮಾಹಿತಿ ನೀಡಿದರು.
ಡಾ: ಶಾಲಿನಿ ರಜನೀಶ್ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಮಹಿಳೆಯರು ಶೇ 60 ರಷ್ಟು ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ. ಶೇ 50 ರಷ್ಟು ಆಹಾರ ಉತ್ಪಾದನೆ ಮಾಡುತ್ತಿದ್ದು, ಶೇ 10 ರಷ್ಟುಆದಾಯ ಗಳಿಸುತ್ತಿದ್ದಾರೆ. ಇಡೀ ದೇಶದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆ ಆರಂಭಿಸಿರುವ ಸಾಲಿನಲ್ಲಿ ಕರ್ನಾಟಕದ ಮಹಿಳಾ ಉದ್ದಿಮೆದಾರರು 3ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರೇ ಸ್ಥಾಪಿಸಿರುವ ಉದ್ದಿಮೆಗಳಲ್ಲಿ ಐದು ಲಕ್ಷ ಮಂದಿಗೆ ಉದ್ಯೋಗ ದೊರೆತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಮೆರಿಕದ ಸಿಲಿಕಾನ್ ವ್ಯಾಲಿ ಸ್ಯಾನ್ ಪ್ರಾನ್ಸಿಸ್ಕೋ ಮತ್ತುಜ್ಞಾನ ನೆಲೆ ಬೆಂಗಳೂರು ನಗರದ ನಡುವೆ ಉತ್ತಮ ಅಂಶಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವ ಕುರಿತ ಒಪ್ಪಂದದ ಪತ್ರಗಳನ್ನು ರತ್ನ ಪ್ರಭ ಮತ್ತುಡಾ: ನಂದಿನಿ ತಂಡನ್, ಪ್ರಿಯಾ ತಂಡನ್ ನಡುವೆ ವಿನಿಮಯ ಮಾಡಿಕೊಳ್ಳಲಾಯಿತು. ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಸ್ಯಾನ್ ಫ್ರಾನ್ಸಿಸ್ಕೋನಲ್ಲಿರೋಡ್ ಶೋ ನಡೆಸಿದ ಸಂದರ್ಭದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ಮಹಾಪೌರರ ನಡುವೆ ಒಡಂಬಡಿಕೆಯಾಗಿತ್ತು.