ಗಡಿಯಾರದ ಗದ್ದಲಕ್ಕೆ ಕೊನೆಗೊಂಡ ಕಲಾಪ
ಬೆಂಗಳೂರು, ಮಾ. 1: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ನೇಹಿತರೊಬ್ಬರಿಂದ ಉಡುಗೊರೆಯಾಗಿ ಪಡೆದಿರುವ ದುಬಾರಿ ಮೊತ್ತದ ಕೈಗಡಿಯಾರ ಪ್ರಕರಣ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ, ಆಡಳಿತ ಮತ್ತು ವಿಪಕ್ಷಗಳ ಸದಸ್ಯರುಗಳ ಮಧ್ಯೆ ಪರಸ್ಪರ ಆರೋಪ-ಪ್ರತ್ಯಾರೋಪ, ಗದ್ದಲ-ಕೋಲಾಹಲದಲ್ಲೇ ದಿನದ ಕಲಾಪ ಮುಕ್ತಾಯವಾಯಿತು.
ಮಂಗಳವಾರ ಬೆಳಗ್ಗೆ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಪ್ರಶ್ನೋತ್ತರ ಕಲಾಪವಿತ್ತಾದರೂ, ವಿಪಕ್ಷಗಳು ಅದಕ್ಕೆ ಅವಕಾಶ ಕಲ್ಪಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ದುಬಾರಿ ಮೊತ್ತದ ಕೈಗಡಿಯಾರ ಪ್ರಕರಣವನ್ನು ಪ್ರಸ್ತಾಪಿಸಿದ ವಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ ವಿಷಯ ಚರ್ಚೆಗೆ ಪಟ್ಟುಹಿಡಿದರು.
ಚಿತ್ರ ಪ್ರದರ್ಶನ: ಬಿಜೆಪಿ ಸದಸ್ಯರ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ನಿಮ್ಮ ಪಕ್ಷದ ನಾಯಕರುಗಳೂ ದುಬಾರಿ ಕೈಗಡಿಯಾರಗಳನ್ನು ಧರಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್, ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ಇನ್ನಿತರ ಚಿತ್ರಗಳನ್ನು ಪ್ರದರ್ಶಿಸಿ ಏರಿದ ಧ್ವನಿಯಲ್ಲಿ ಇದಕ್ಕೆ ಉತ್ತರ ನೀಡಿ ಎಂದು ಪ್ರಶ್ನಿಸಿದರು. ಈ ಹಂತದಲ್ಲಿ ಪರಸ್ಪರರ ನಡುವೆ ಒಂದು ರೀತಿಯಲ್ಲಿ ವಾಗ್ಯುದ್ಧವೇ ನಡೆಯಿತು. ಉಭಯ ಸದನಗಳಲ್ಲಿಯೂ ಗದ್ದಲ-ಕೋಲಾಹಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸ್ಪೀಕರ್ ಹಾಗೂ ಸಭಾಪತಿ ಪದೇ ಪದೇ ಮನವಿ ಮಾಡಿದರೂ ಅದು ಯಾವ ಪ್ರಯೋಜನಕ್ಕೂ ಬರಲಿಲ್ಲ.
‘ವಾಚ್ ಅಂದ್ರೆ ಹೆದರಿಕೆ’: ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿಲುವಳಿ ಸೂಚನೆಯಡಿ ಪೂರ್ವಭಾವಿ ಪ್ರಸ್ತಾಪಿಸಿ, ಆಡಳಿತ ಪಕ್ಷದವರಿಗೆ ವಾಚ್ ಅಂದ್ರೆ ಹೆದರಿಕೆ ಆರಂಭವಾಗಿದೆ. ಹೀಗಾಗಿ ವಿಷಯ ಪ್ರಸ್ತಾಪಕ್ಕೆ ಅವಕಾಶ ನೀಡುತ್ತಿಲ್ಲ. ಆದರ್ಶ ವ್ಯಕ್ತಿಯಾಗಬೇಕಿದ್ದ ಸಿದ್ಧರಾಮಯ್ಯರ ದುಬಾರಿ ಮೊತ್ತದ ವಾಚ್ ಸಂಶಯಗಳನ್ನು ಹುಟ್ಟುಹಾಕಿದ್ದು, ಈ ಬಗ್ಗೆ ರಾಜ್ಯ ಸರಕಾರ ಸ್ಪಷ್ಟಣೆ ನೀಡಬೇಕೆಂದು ಕೋರಿದರು.
ಬೆಳ್ಳಿ ಕುರ್ಚಿಯು ಬಂತು: ಈ ವೇಳೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಸಿಎಂಗೆ ನೀಡುವ ಉಡುಗೊರೆಗಳನ್ನು ವೈಯಕ್ತಿಕವಾಗಿ ಬಳಸಿಕೊಳ್ಳದೆ ಸಿಎಂ ಕಚೇರಿಯಲ್ಲಿಡಬೇಕು. ಕುಮಾರಸ್ವಾಮಿಯವರು ಸಿಎಂ ಆಗಿದ್ದ ವೇಳೆ ಅವರಿಗೆ ಬೆಳ್ಳಿ ಕುರ್ಚಿ ನೀಡಿದ್ದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇ, ಅದೀಗ ಎಲ್ಲಿದೆ ಎಂದು ಚುಚ್ಚಿದರು.
ಇದರಿಂದ ವಿವಾದ ಹುಟ್ಟುಹಾಕಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ, ಒಂದು ರೀತಿಯಲ್ಲಿ ಕೆರಳಿದರು. ಈ ಹಂತದಲ್ಲಿ ಮಾತನಾಡಿದ ಅವರು, ಹೌದು ತಾನು ಸಿಎಂ ಆಗಿದ್ದ ವೇಳೆ ನೀಡಿದ ಬೆಳ್ಳಿ ಕುರ್ಚಿಯನ್ನು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗೆ ನೀಡಿದ್ದೇನೆಂದು ಸ್ಪಷ್ಟಣೆ ಕೊಟ್ಟರು. ಆಗ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮುಖ್ಯಮಂತ್ರಿಗೆ ನೀಡಿದ ಉಡುಗೊರೆಯನ್ನು ಮಠಕ್ಕೆ ನೀಡಲು ಕಾನೂನಿನಲ್ಲಿ ಅವಕಾಶವಿದೆಯೇ? ನೀವು ಯಾರನ್ನು ಕೇಳಿ ಬೆಳ್ಳಿ ಕುರ್ಚಿ ಮಠಕ್ಕೆ ನೀಡಿದ್ದೀರಿ..ಈ ಬಗ್ಗೆ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತೇ ಎಂದು ಸ್ಪಷ್ಟಣೆ ಬಯಸಿದರು.
ನಾನೇ ಕುರ್ಚಿ ನೀಡಿದು: ಈ ವೇಳೆ ಮಧ್ಯ ಪ್ರವೇಶಿಸಿದ ಆಡಳಿತ ಪಕ್ಷದ ಸದಸ್ಯ ಎ.ಎಸ್.ಪಾಟೀಲ್ ನಡಹಳ್ಳಿ, ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಅವರಿಗೆ ಬೆಳ್ಳಿ ಕುರ್ಚಿ ನೀಡಿದ್ದು ನಾನೇ. ಆದರೆ, ಅವರು ಆ ಕುರ್ಚಿ ನಾನು ತೆಗೆದುಕೊಳ್ಳುವುದಿಲ್ಲ ಎಂದು ಘೋಷಿಸಿ ಅದನ್ನು ಸಿದ್ಧಗಂಗಾ ಮಠಕ್ಕೆ ನೀಡಿದ್ದಾರೆಂದು ಸ್ಪಷ್ಟಪಡಿಸಿದರು.
ಶಕ್ತಿ ಇದ್ರೆ..ಈಜಿ ಪಾರಾಗ್ತಾರೆ: ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಶಕ್ತಿ ಇದ್ರೆ.. ದುಬಾರಿ ಮೊತ್ತದ ಕೈಗಡಿಯಾರ ಪ್ರಕರಣದಿಂದ ಈಜಿ ಹೊರ ಬರ್ತಾರೆ. ಆದರೆ, ಎಲ್ಲ ಸದಸ್ಯರು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಸಲಹೆ ನೀಡಿದರು.ನಮ್ಮ ಖಾಸಗಿ ಜೀವನ ಯಾವ ರೀತಿಯಲ್ಲಿದೆ ಎಂದು ಆತ್ಮಾವಲೋಕನ ಅಗತ್ಯ. ಶಾಸಕರಾಗಿದ್ದಾಗ ನಮ್ಮ ಆದಾಯ-ಆಸ್ತಿ ಎಷ್ಟಿತ್ತು. ಆ ಬಳಿಕ ಎಷ್ಟಾಯಿತು ಎಂಬುದರ ಪ್ರಶ್ನೆ ಮಾಡಿಕೊಳ್ಳಬೇಕು. ಸದನದ ನಿಯಮಾವಳಿಗಳಿಗೆ ಬದ್ಧರಾಗಿ ಚರ್ಚೆ ನಡೆಸೋಣ ಎಂದು ಸ್ಪಷ್ಟಣೆ ನೀಡಿದರು.
ಸಂಶಯ ಪರಿಹರಿಸಿ: ಬಳಿಕ ಮಾತನಾಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಡಿಯಾರ ಕಳೆದ ಮೊಕದ್ದಮೆ ತನಿಖೆ ಎಲ್ಲಿಗೆ ಬಂತು ಎಂದು ಗೃಹ ಸಚಿವ ಪರಮೇಶ್ವರ್ರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಪರಮೇಶ್ವರ್, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಸಮಜಾಯಿಷಿ ನೀಡಿದರು.
ದುಬಾರಿ ಮೊತ್ತದ ಕೈಗಡಿಯಾರ ಪ್ರಕರಣ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಲು ಕೋರಿ ಬಿಜೆಪಿ ಸದಸ್ಯರು ಉಭಯ ಸದನಗಳಲ್ಲಿ ಪಟ್ಟು ಹಿಡಿದರು. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಸ್ಪೀಕರ್ ಹಾಗೂ ಸಭಾಪತಿ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದ ಹಿನ್ನೆಲೆಯಲ್ಲಿ ದಿನದ ಕಲಾಪ ಆಹುತಿಯಾಯಿತು.