ಬುರ್ಹಾನ್ ಹತ್ಯೆಯ ನಂತರ ಕಾರವಾಂ- ಎ- ಅಮನ್ ಬಸ್ಸಂಚಾರ ಸ್ಥಗಿತ
ಶ್ರೀನಗರ,ಜುಲೈ 11: ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಝಫ್ಫರಾಬಾದ್ ನಡುವೆ ಓಡಾಡುತ್ತಿದ್ದ ಸಾಪ್ತಾಹಿಕ ಕಾರಾವಾಂ- ಎ- ಅಮನ್ ಬಸ್ ಸೇವೆಯನ್ನು ನಿರಂತರ ಎರಡನೆ ವಾರವೂ ರದ್ದುಗೊಳಿಸಲಾಗಿದೆ. 1947ರ ಭಾರತ-ಪಾಕ್ ವಿಭಜನೆಯ ಸಂದರ್ಭದಲ್ಲಿ ಪ್ರತ್ಯೇಕಗೊಂಡ ಕುಟುಂಬಗಳನ್ನು ಸಂಪರ್ಕಿಸಲು ಈ ಬಸ್ ಮಹತ್ವಪೂರ್ಣ ಸೇವೆ ಸಲ್ಲಿಸುತ್ತಿತ್ತು. ಇದನ್ನೀಗ ಭದ್ರತಾ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಎರಡು ಕಡೆಯ ಅಧಿಕಾರಿಗಳು ಪ್ರಯಾಣಿಕರ ಸುರಕ್ಷೆಯ ಹಿನ್ನೆಲೆಯಲ್ಲಿ ಬಸ್ ರದ್ದು ಪಡಿಸುವ ನಿರ್ಧಾರ ಮಾಡಿದ್ದಾರೆ. ಕಳೆದ ವಾರ ಈದುಲ್ ಫಿತ್ರ್ ಕಾರಣದಿಂದಬಸ್ ರದ್ದಾಗಿತ್ತು. ಈ ವಾರ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆಯಿಂದಾಗಿ ಕಾಶ್ಮೀರದಲ್ಲಿ ನೆಲೆಯಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬಸ್ ರದ್ದುಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಸ್ ಸೇವೆಯನ್ನು 2005ರಲ್ಲಿ ಪ್ರಾರಂಭಿಸಲಾಗಿತ್ತು.