ಬೆಂಗಳೂರಿನಲ್ಲಿ ‘ಅಡುಗೆ ಸಿಲಿಂಡರ್ ಸ್ಫೋಟ’: ನಾಲ್ವರಿಗೆ ಗಾಯ

Update: 2016-08-14 10:55 GMT

ಬೆಂಗಳೂರು, ಆ.14: ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ನಗರದ ಈಜಿಪುರ ಲೇಔಟ್ ಎಂಬಲ್ಲಿ ಇಂದು ಅಪರಾಹ್ನ 2:30ರ ಸುಮಾರಿಗೆ ನಡೆದಿದೆ.
ಈಜಿಪುರ ಲೇಔಟ್ ಶಾಲಮ್ ಎಂಬ ಎರಡು ಅಂತಸ್ತಿನ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಕೇರಳ ಮೂಲದ ಮ್ಯಾಥ್ಯು ಎಂಬವರ ಮನೆಯಲ್ಲಿ ಈ ಅವಘಡ ನಡೆದಿದೆ. ಮನೆಯ ಮೇಲಿನ ಮಹಡಿಯಲ್ಲಿ ಇಂದು ಅಡುಗೆ ಅನಿಲ ಸಿಲಿಂಡರ್‌ನಲ್ಲಿ ಸೋರಿಕೆ ಉಂಟಾಗಿದೆ. ಇದನ್ನು ಗಮನಿಸದೆ ವಿದ್ಯುತ್ ಬಲ್ಬ್‌ನ ಸ್ವಿಚ್ ಹಾಕಿದ್ದೇ ಸ್ಫೋಟಕ್ಕೆ ಕಾರಣ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ.
ಸ್ಫೋಟ ಸಂಭವಿಸಿದ ಮನೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಇದೊಂದು ಅನಿರೀಕ್ಷಿತ ಘಟನೆಯಾಗಿದ್ದು, ಗ್ಯಾಸ್ ಸೋರಿಕೆಯಿಂದ ಅವಘಡ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಬಹಳ ಹೊತ್ತು ಅಡುಗೆ ಅನಿಲ ಸಿಲಿಂಡರ್‌ನಿಂದ ಸೋರಿಕೆ ಉಂಟಾಗಿತ್ತು. ಇದನ್ನು ಗಮನಿಸದೆ ವಿದ್ಯುತ್ ಸ್ವಿಚ್ ಹಾಕಿದ್ದೇ ಘಟನೆ ಕಾರಣ ಎಂದು ಹೇಳಲಾಗಿದೆ. ಇದರಿಂದ ಮನೆಯ ಕೆಳ ಅಂತಸ್ತಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ವಿಧಿ ವಿಜ್ಞಾನ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News