ನೈಸ್ ವಿರುದ್ಧದ ಹೋರಾಟಕ್ಕೆ ದೇವೇಗೌಡ ಮರುಚಾಲನೆ

Update: 2016-09-01 13:58 GMT

ಬೆಂಗಳೂರು, ಸೆ.1: ನೈಸ್ ಸಂಸ್ಥೆಯ ಅಕ್ರಮದ ವಿರುದ್ಧ ಹೋರಾಟ ನಿಲ್ಲಿಸುವುದಾಗಿ ಇತ್ತೀಚೆಗಷ್ಟೇ ಘೋಷಿಸಿದ್ದ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ನನ್ನ ರೈತರ ಎರಡು ಸಾವಿರ ಎಕರೆ ಭೂಮಿ ನೈಸ್ ಪಾಲಾಗಿದೆ. ಅದನ್ನು ವಾಪಸ್ ಕೊಡಿಸುವ ವರೆಗೆ ಹೋರಾಟ ಮುಂದುವರೆಸುತ್ತೇನೆ ಎಂದಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನೈಸ್ ಸಂಸ್ಥೆಯ ವಿರುದ್ಧ ಈಗಾಗಲೆ ಸುಪ್ರೀಂಕೋರ್ಟ್‌ನಲ್ಲಿ ನಾನು ಪ್ರಕರಣ ದಾಖಲಿಸಿದ್ದೇನೆ. ನನ್ನ ಮತ್ತು ಸರಕಾರದ ಎರಡೂ ಪ್ರಕರಣಗಳನ್ನು ಒಂದುಗೂಡಿಸಿ ವಿಚಾರಣೆ ನಡೆಸುವಂತೆ ಮನವಿ ಮಾಡುತ್ತೇನೆ ಎಂದರು.

ಸುಪ್ರೀಂಕೋರ್ಟ್‌ನಲ್ಲಿ ಶುಕ್ರವಾರ(ಸೆ.2) ನೈಸ್ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣ ವಿಚಾರಣೆಗೆ ಬರಲಿದೆ. ಆದರೆ, ಈವರೆಗೆ ನ್ಯಾಯಯುತವಾದ ಒಡಂಬಡಿಕೆಗೆ ಬರಲು ಸರಕಾರ ಹಾಗೂ ನೈಸ್ ಸಂಸ್ಥೆ ಪ್ರಯತ್ನವನ್ನೆ ಮಾಡಿಲ್ಲ. ಇದು ಸಾಧ್ಯವಾಗಿದ್ದರೆ ಸುಲಭವಾಗಿ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ, ಸರಕಾರ ನ್ಯಾಯಾಲಯದಲ್ಲಿ ಹೋರಾಟ ಮಾಡುವ ಬಗ್ಗೆ ಕಿಂಚಿತ್ತೂ ಕಳಕಳಿ ವಹಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ನೈಸ್ ಅಕ್ರಮದ ತನಿಖೆ ಕುರಿತು ಇತ್ತೀಚೆಗೆ ಸದನ ಸಮಿತಿ ಸಭೆ ನಡೆಸಿತು. ಇನ್ನೊಂದು ತಿಂಗಳಲ್ಲಿ ವರದಿ ನೀಡುವುದಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಆ ವರದಿಯಲ್ಲಿ ಏನು ಬರುತ್ತೆ ಅನ್ನೋದು ನನಗೆ ಗೊತ್ತಿದೆ. ವರದಿ ಸಲ್ಲಿಕೆಯಾದ ನಂತರ ಈ ಬಗ್ಗೆ ಮಾತನಾಡುತ್ತೇನೆ ಎಂದು ದೇವೇಗೌಡ ಹೇಳಿದರು.

ರಮೇಶ್ ಕುಮಾರ್ ಶಾಸಕರಾಗಿದ್ದಾಗ ಹಾಗೂ ಕಾಗೋಡು ತಿಮ್ಮಪ್ಪ ಸ್ಪೀಕರ್ ಆಗಿದ್ದಾಗ ನೈಸ್ ಅಕ್ರಮದ ಬಗ್ಗೆ ತನಿಖೆಗೆ ವೀರಾವೇಶದಲ್ಲಿದ್ದರು. ಆದರೆ, ಸಚಿವರಾದ ಮೇಲೆ ಅವರ ವೀರಾವೇಶ ತಗ್ಗಿದೆ ಎಂದು ಅವರು ಟೀಕಿಸಿದರು.

 ಮೂಲ ಒಪ್ಪಂದದ ಪ್ರಕಾರ ನೈಸ್ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಬೇಕಾದರೆ ರಸ್ತೆ ಕಾಮಗಾರಿ ಸಂಪೂರ್ಣ ಮುಗಿದಿರಬೇಕು. ಆದರೆ, ಇನ್ನು ಶೇ.20ರಷ್ಟು ಕಾಮಗಾರಿಯೂ ಮುಗಿದಿಲ್ಲ. ಪರಿಸ್ಥಿತಿ ಹೀಗಿದ್ದರೂ ಯಾವುದೆ ಸಂಕೋಚವಿಲ್ಲದೆ ಪ್ರತಿದಿನ ಸುಮಾರು 1.30 ಕೋಟಿ ರೂ.ಟೋಲ್‌ಸಂಗ್ರಹ ಮಾಡಲಾಗುತ್ತಿದೆ ಎಂದು ದೇವೇಗೌಡ ದೂರಿದರು.

 ಕೆಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳು ನೈಸ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಆದುದರಿಂದಲೆ, 20 ವರ್ಷಗಳಾದರೂ ಶೇ.20ರಷ್ಟು ಕಾಮಗಾರಿಯೂ ನಡೆದಿಲ್ಲ. ನೈಸ್ ಅಕ್ರಮಕ್ಕೆ ಸಂಬಂಧಿಸಿದಂತೆ ನನ್ನ ಸಂಪರ್ಕಕ್ಕೆ ಯಾರು ಸಿಗುತ್ತಿಲ್ಲ. ಈಗಿರುವ ಮುಖ್ಯಕಾರ್ಯದರ್ಶಿ ಅರವಿಂದಜಾಧವ್‌ಗೆ ನನ್ನ ದೂರವಾಣಿ ಕರೆಯನ್ನು ಸ್ವೀಕರಿಸಲು ಸಮಯವಿಲ್ಲ ಎಂದು ಅವರು ಕಿಡಿಗಾರಿದರು. ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಕಾಂಬ್ಳೆ, ಅದಾನಿ ಮತ್ತು ಕುಂಟಿಯಾ ಸರಕಾರದ ಒತ್ತಡಕ್ಕೆ ಅಲುಗಾಡಿಲ್ಲ. ಮುಖ್ಯಕಾರ್ಯ ದರ್ಶಿಗಳಾಗಿದ್ದ ಮಹಿಷಿ, ರಂಗನಾಥ್ ಹಾಗೂ ಸುಧಾಕರ್ ನೈಸ್ ಕಂಪೆನಿಯ ಅಕ್ರಮವನ್ನು ಒಪ್ಪಿದ್ದಾರೆ. ಅವರ ಪ್ರಮಾಣಪತ್ರಗಳು ನ್ಯಾಯಾಲಯದಲ್ಲಿವೆ ಎಂದು ಅವರು ಹೇಳಿದರು.

1996 ರಲ್ಲಿ ನೈಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾಗ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರು. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ನೈಸ್ ಯೋಜನೆ ಹಿಂದೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪ್ರಭಾವವಿದೆ. ಆ ಪ್ರಭಾವವನ್ನು ಎದುರಿಸಲು ಸಿದ್ದರಾಮಯ್ಯಗೆ ಸಾಧ್ಯವಾಗುತ್ತದೊ ಇಲ್ಲವೊ ಗೊತ್ತಿಲ್ಲ ಎಂದು ದೇವೇಗೌಡ ಹೇಳಿದರು. ಮಮತಾ ಬ್ಯಾನರ್ಜಿಗೆ ನಮನ: ಪಶ್ಚಿಮ ಬಂಗಾಳದಲ್ಲಿ ಟಾಟಾ ಕಂಪೆನಿಗೆ ಮಂಜೂರಾಗಿದ್ದ 997 ಎಕರೆ ಭೂಮಿಯನ್ನು ಸತತ ಎಂಟು ವರ್ಷಗಳ ಕಾಲ ಹೋರಾಟ ಮಾಡಿ ರೈತರಿಗೆ ವಾಪಸ್ ಕೊಡಿಸುವ ನಿಟ್ಟಿನಲ್ಲಿ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಶಸ್ವಿಯಾಗಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ಆಗದಿರುವುದನ್ನು ಈ ಹೆಣ್ಣುಮಗಳು ಮಾಡಿದ್ದಾರೆ ಅವರಿಗೆ ತಲೆಬಾಗಿ ನಮಿಸುತ್ತೇನೆ ಎಂದು ದೇವೇಗೌಡ ತಿಳಿಸಿದರು.

ನಮ್ಮ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಇಷ್ಟು ದಿನ ಅಧಿಕಾರ ನಡೆಸಿದೆ. ಆದರೆ, ನೈಸ್ ವಿಷಯದಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಏನು ಮಾಡಿವೆ. ಪಶ್ಚಿಮ ಬಂಗಾಳದಲ್ಲಿ ಒಬ್ಬ ಹೆಣ್ಣು ಮಗಳು ಇದನ್ನು ಮಾಡಲು ಸಾಧ್ಯವಿರುವಾಗ, ಇವರಿಗೇಕೆ ಆಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News