ಬೀಫ್ ಪ್ರಿಯ ಕೇರಳದ ಖಾದ್ಯಗಳ ರುಚಿ ನೋಡಲು ಬಿಜೆಪಿ ನಾಯಕರಿಗೆ ಆಹ್ವಾನ

Update: 2016-09-26 03:09 GMT

ಕೋಝಿಕ್ಕೋಡ್, ಸೆ.26: ಈ ರಮಣೀಯ ನಗರದಲ್ಲಿ ಪಕ್ಷದ ರಣತಂತ್ರ ರೂಪಿಸುವಲ್ಲಿ ಬಿಜೆಪಿ ನಾಯಕರು ಬ್ಯುಸಿಯಾಗಿದ್ದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೇಸರಿ ಪಕ್ಷದ ನಾಯಕರಿಗೆ ವಿಶೇಷ ಆಹ್ವಾನ ನೀಡುವಂಥ ಪೋಸ್ಟ್‌ಗಳು ಹರಿದಾಡುತ್ತಿದ್ದವು. ಅದೇನು ಗೊತ್ತೇ? ಈ ಭಾಗದ ಅತ್ಯಂತ ಜನಪ್ರಿಯ ಹಾಗೂ ರಫ್ತುಯೋಗ್ಯ ಖಾದ್ಯವಾದ ಗೋಮಾಂಸ ಬಿರಿಯಾನಿಯ ರುಚಿ ನೋಡುವಂತೆ ಆಹ್ವಾನ!

ಶಾಂತೋರಹಮತ್ ಹೆಸರಿನ ಒಂದು ಫೇಸ್‌ಬುಕ್ ಪೇಜ್‌ನಲ್ಲಿ ಬಿಜೆಪಿ ನಾಯಕರನ್ನು ಕಾಂಬೊ ಆಫರ್ ನೀಡುವ ಖ್ಯಾತ ಗೋಮಾಂಸದ ಹೋಟೆಲ್‌ಗೆ ಆಗಮಿಸಿ ಗೋಮಾಂಸ ಬಿರಿಯಾನಿ ಹಾಗೂ ಸುಲೈಮಾನಿ (ನಿಂಬೆಯುಕ್ತ ಕಪ್ಪು ಚಹಾ) ರುಚಿ ನೋಡುವಂತೆ ಆಹ್ವಾನಿಸಲಾಗಿದೆ.

ಮತ್ತೊಂದು ಪೋಸ್ಟ್‌ನಲ್ಲಿ ಪ್ರತಿನಿಧಿಗಳು ವಾಪಸು ಹೋಗುವಾಗ ಮನೆಗೆ ಕೋಝಿಕ್ಕೋಡ್ ಹಲ್ವ ಒಯ್ಯಲು ಮರೆಯಬೇಡಿ ಎಂದು ಮನವಿ ಮಾಡಲಾಗಿದೆ. ಈ ಕರಾವಳಿ ನಗರದ ಆಯ್ದ ಅಂಗಡಿಗಳಲ್ಲಿ ಮಾಂಸಾಹಾರಿ ಹಲ್ವ ಕೂಡಾ ಲಭ್ಯವಿದೆ ಎಂದು ವಿವರಿಸಲಾಗಿದೆ. ವಾಸ್ಕೋಡಗಾಮ 1498ರಲ್ಲಿ ಭಾರತೀಯ ಮಸಾಲೆ ಅರಸುತ್ತಾ ಬಂದಿಳಿದ ಐತಿಹಾಸಿಕ ತಾಣ ಇದು.

ಗೋಮಾಂಸ ನಿಷೇಧಿಸುವ ಕಾರ್ಯಸೂಚಿ ಅನುಷ್ಠಾನಕ್ಕೆ ಹೊರಟಿರುವ, ತನ್ನ ಆಡಳಿತ ಇರುವ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧಿಸಿದ ಕೇಸರಿಪಡೆಗೆ ಚುಚ್ಚುವಂಥ ಹಲವು ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News