ಬರಪೀಡಿತ ತಾಲೂಕುಗಳ ಸಂಖ್ಯೆ103 ಕ್ಕೆ ಏರುವ ಆತಂಕ:ಕಾಗೋಡು
ಬೆಂಗಳೂರು,ಸೆ.29: ರಾಜ್ಯದಲ್ಲಿ ಮುಂಗಾರು ಮಳೆ ವಿಫಲವಾಗಿದ್ದು ಈ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 103ಕ್ಕೇರಬಹುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.
ಕಳೆದ ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಕೇಂದ್ರದ ಮಾರ್ಗಸೂಚಿಯಂತೆ ಶೇಕಡಾ ಇಪ್ಪತ್ತರಷ್ಟು ಮಳೆ ಕಡಿಮೆಯಾಗಿರುವ ಪ್ರದೇಶಗಳ ಸಂಪೂರ್ಣ ದಾಖಲಾತಿಯ ವಿವರವನ್ನು ಮುಂದಿನ ಮಂಗಳವಾರ ನಡೆಯಲಿರುವ ಸಂಪುಟ ಉಪಸಮಿತಿ ಸಭೆಯಲ್ಲಿ ಪರಾಮರ್ಶಿಸಲಾಗುವುದು ಎಂದು ಹೇಳಿದರು.
ತದ ನಂತರ ಬರಪೀಡಿತ ತಾಲೂಕುಗಳ ಸಂಖ್ಯೆಯನ್ನು ನೂರಾ ಮೂರಕ್ಕೇರಿಸುವ ಸಾಧ್ಯತೆಗಳಿವೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.
ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಶೇ. 20ಕ್ಕಿಂತ ಕಡಿಮೆ ಮಳೆ ಆದರೆ ಕೇಂದ್ರದಿಂದ ಈ ಪ್ರದೇಶಗಳಿಗೆ ನೆರವು ನೀಡಲಾಗುತ್ತದೆ. ಪ್ರಾಥಮಿಕ ವರದಿಯಂತೆ ಭೂಮಿಯ ತೇವಾಂಶ,ಮಳೆ,ಹಾಳಾಗಿರುವ ಬೆಳೆಯ ವಿವರಗಳನ್ನು ಕಲೆ ಹಾಕಲಾಗುವುದು.
ಇದರ ಆಧಾರದ ಮೇಲೆ 660 ಕೋಟಿ ರೂ.ಗಳನ್ನು ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.
ಕಳೆದ ಬಾರಿ ಇದೇ ಅವಧಿಯಲ್ಲಿ ಹೈದ್ರಾಬಾದ್-ಮುಂಬೈ ಕರ್ನಾಟಕ ಪ್ರದೇಶದಲ್ಲಿ ಬಹುತೇಕ ತಾಲೂಕುಗಳು ಬರದ ಛಾಯೆ ಅನುಭವಿಸಿದ್ದವು. ಆದರೆ ಈ ಬಾರಿ ದಕ್ಷಿಣ ಕರ್ನಾಟಕ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸಕಾಲಕ್ಕೆ ಮಳೆ ಇಲ್ಲದೆ ಜನರು ಆತಂಕಪಡುವಂತಾಗಿದೆ ಎಂದು ನುಡಿದರು.
ಬರಪೀಡಿತ ತಾಲೂಕುಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಅತ್ಯಗತ್ಯವಾಗಿದೆ. ಕುಡಿಯುವ ನೀರು ಒದಗಿಸುವುದು ಸರಕಾರದ ಮೂಲ ಕರ್ತವ್ಯ.ಈ ನಿಟ್ಟಿನಲ್ಲಿ ಈಗಿರುವ ಕೊಳವೆ ಬಾವಿ ಕೊರೆಯುವ ನಿರ್ಬಂಧವನ್ನು ತೆಗೆದುಹಾಕುವ ನಿರ್ಧಾರವನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈಗಾಗಲೇ ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದ್ದು ಕೃಷಿ ಚಟುವಟಿಕೆಗಳಿಗಾಗಿ ಕೊಳವೆ ಬಾವಿ ಕೊರೆಯುವುದನ್ನು ನಿರ್ಭಂಧಿಸಲಾಗಿದೆ ಎಂದರು.
ಬೇರೆ ಬೇರೆ ಪ್ರದೇಶಗಳಲ್ಲಿರುವ ಜಲಮೂಲಗಳಿಂದ ನೀರು ಒದಗಿಸುವ ಕುರಿತು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದ ಅವರು,ಅಗತ್ಯ ಬಿದ್ದರೆ ಹೊಸತಾಗಿ ಕೊಳವೆ ಬಾವಿ ಕೊರೆಯಲು ಅನುಮತಿ ನೀಡುವಂತೆ ಸೂಚನೆ ನೀಡಲಾಗುತ್ತದೆ ಎಂದರು.
ಉದ್ಯೋಗ ನೀಡುವ ಯೋಜನೆಗಳು ರಾಜ್ಯದಲ್ಲಿ ಸಮರ್ಪಕವಾಗಿಲ್ಲ.ಚುನಾಯಿತ ಪ್ರತಿನಿಧಿಗಳ ನಿರಾಸಕ್ತಿಯಿಂದ ಮಹತ್ವಾಕಾಂಕ್ಷಿ ಉದ್ಯೋಗ ಖಾತ್ರಿ ಯೋಜನೆ ನಿರೀಕ್ಷೆಯ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ ಎಂದು ವಿವರಿಸಿದರು. ಶ್ರಮಿಕ ವರ್ಗದ ಸಂಪತ್ತನ್ನು ಸದ್ಭಳಕೆ ಮಾಡಿಕೊಂಡಲ್ಲಿ ನರೇಗಾ ಯೋಜನೆಯಡಿ ಹತ್ತು ಸಾವಿರ ಕೋಟಿ ರೂಗಳಿಗೂ ಅಧಿಕ ಹಣವನ್ನು ಬಳಕೆ ಮಾಡಿಕೊಳ್ಳಲು ಅವಕಾಶಗಳಿವೆ ಎಂದರು.
ಕೇಂದ್ರ ಸರಕಾರ ಈ ಯೋಜನೆಗೆ ಸಾಕಷ್ಟು ಹಣ ನೀಡದೇ ಇರುವುದರಿಂದ ಯೋಜನೆಯಡಿ ಕೆಲಸ ಮಾಡುವವರಿಗೆ ಹಣ ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ಇದೇ ಸಂಧರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಅವರು,ಯೋಜನೆ ನಿರೀಕ್ಷಿತ ಯಶಸ್ಸು ಕಾಣದಿರಲು ಇದೂ ಒಂದು ಕಾರಣ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮೂಲಕ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರಿಗೆ ಹತ್ತನ್ನೆರಡು ದಿನಗಳಲ್ಲಿ ಹಣ ಪಾವತಿಸಲು ಸಾಧ್ಯವಾಗುತ್ತಿದೆ.
ಮುಂಚೆ ಈ ಹಣ ಪಾವತಿಸಲು ತಿಂಗಳುಗಟ್ಟಲೆ ಕಾಲ ಹಿಡಿಯುತ್ತಿತ್ತು ಎಂದ ಅವರು, ಏನೇ ಆದರೂ ನಮ್ಮ ಸಂಪನ್ಮೂಲವನ್ನು ಹೆಚ್ಚಿಗೆ ಬಳಸಿಯಾದರೂ ಹಣ ನೀಡಲು ಹೇಳಿದ್ದೇವೆ. ಇನ್ನು ಮುಂದೆ ಒಂದು ವಾರದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದವರಿಗೆ ಹಣ ಪಾವತಿ ಮಾಡುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಬರುವ ವಾರ ನಡೆಯಲಿರುವ ಸಂಪುಟ ಉಪಸಮಿತಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಅಂಗೀಕರಿಸಿ ತುರ್ತು ಪರಿಹಾರ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ತಿಳಿಸಿದರು.