ನಂಜನಗೂಡು ಉಪ ಚುನಾವಣೆ ಯುವಕರಿಗೆ ಟಿಕೆಟ್ ನೀಡಿ: ಎಚ್.ವಿಶ್ವನಾಥ್
ಬೆಂಗಳೂರು, ಜ. 19: ಮೈಸೂರಿನ ನಂಜನಗೂಡು ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್ನ ಕೇಶವಮೂರ್ತಿ ಬದಲಿಗೆ ಕಾಂಗ್ರೆಸ್ ಪಕ್ಷದಲ್ಲಿನ ಹೊಸಬರಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ನಾಯಕರು ಅಭ್ಯರ್ಥಿಗಳಾಗುವ ಅರ್ಹತೆ ಇರುವ ಯುವಕರನ್ನು ಗುರುತಿಸಬೇಕು. ಇರೋ ಹಕ್ಕಿ ಬಿಟ್ಟು ಇಲ್ಲದೆ ಇರೋ ಹಕ್ಕಿಯನ್ನು ಹುಡುಕುತ್ತಿದ್ದಾರೆ ಎಂದು ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಜಿ.ಪಂ.ಅಧ್ಯಕ್ಷ ಎಂ.ಪಿ.ಸಿದ್ದರಾಜು ಅವರು ಯುವಕರಿದ್ದು, ನಂಜನಗೂಡು ಕ್ಷೇತ್ರದ ಉಪ ಚುನಾವಣೆ ಅಭ್ಯರ್ಥಿಯಾಗುವ ಎಲ್ಲ ಅರ್ಹತೆಗಳಿವೆ. ಅವರನ್ನು ಗುರುತಿಸಿ ಪಕ್ಷ ಅವರಿಗೆ ಟಿಕೆಟ್ ನೀಡಿ, ಯುವಕರಿಗೆ ಆದ್ಯತೆ ನೀಡಬೇಕು. ಅದು ಬಿಟ್ಟು ಅನ್ಯಪಕ್ಷದ ವ್ಯಕ್ತಿಗೆ ಟಿಕೆಟ್ ನೀಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಬಂದ್ರೆ ಸ್ವಾಗ: ಮುನ್ನುಗ್ಗಿ ಪಕ್ಷ ಸಂಘಟಿಸುವ ಛಾತಿಯುಳ್ಳ ಮಾಜಿ ಸಚಿವ ವಿ.ಸೋಮಣ್ಣ ಪಕ್ಷಕ್ಕೆ ಸೇರ್ಪಡೆ ಆಗುವುದಾದರೆ ಸ್ವಾಗತ. ಅವರು ಕಾಂಗ್ರೆಸ್ ಪಕ್ಷದಲ್ಲೆ ಇದಿದ್ದರೆ ಇಷ್ಟೊತ್ತಿಗೆ ಕೆಪಿಸಿಸಿ ಅಧ್ಯಕ್ಷರಾಗಿರುತ್ತಿದ್ದರು. ಅವರ ಬಗ್ಗೆ ತಮಗೆ ಅಭಿಮಾನ ಇದೆ ಎಂದು ವಿಶ್ವನಾಥ್ ಪ್ರತಿಕ್ರಿಯಿಸಿದರು.
ಕೆ.ಎಸ್.ಈಶ್ವರಪ್ಪ ಮತ್ತು ಯಡಿಯೂರಪ್ಪ ಮಧ್ಯೆದ ಗೊಂದಲ ಅವರ ಮನೆ ವಿಚಾರ. ಈ ಬಗ್ಗೆ ನಾವು ಮಾತನಾಡುವುದು ಸರಿಯಲ್ಲ. ಬೇರೆಯವರ ಮನೆ ವಿಷಯ ನಮಗೇಕೆ ಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ನಿರಾಕರಿಸಿದರು.