×
Ad

ಬ್ಯಾಂಕ್ ನೌಕರರ ಮುಷ್ಕರ ಯಶಸ್ವಿ : ಬ್ಯಾಂಕ್‌ಗಳ ವಿಲೀನ ಖಂಡಿಸಿ ಬ್ಯಾಂಕ್ ನೌಕರರ ಪ್ರತಿಭಟನೆ

Update: 2017-02-28 19:33 IST

ಬೆಂಗಳೂರು,ಫೆ.28: ಎಸ್‌ಬಿಐನೊಂದಿಗೆ ಸಹವರ್ತಿ ಬ್ಯಾಂಕುಗಳ ವಿಲೀನ, ವಸೂಲಾಗದ ಸಾಲಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುತ್ತಿರುವುದು ವಿರೋಧಿಸಿ ರಾಷ್ಟ್ರೀಯ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ಕೊಟ್ಟಿದ್ದ ಒಂದು ದಿನದ ಬ್ಯಾಂಕ್ ನೌಕರರ ಮುಷ್ಕರ ಬೆಂಬಲಿಸಿ ಇಂದು ನಗರದಲ್ಲಿ ವಿವಿಧ ಬ್ಯಾಂಕ್‌ಗಳ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

    ರಾಷ್ಟ್ರೀಯ ಬಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಮತ್ತು ಇತರೆ ಸಂಘಟನೆಗಳು ಕರೆ ಕೊಟ್ಟಿದ್ದ ಒಂದು ದಿನದ ಬ್ಯಾಂಕ್ ಮುಷ್ಕರಕ್ಕೆ ಎಸ್‌ಬಿಐ, ಎಸ್‌ಬಿಎಂ, ಕೆನರಾ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ನಗರದಲ್ಲಿ ಬಹುತೇಕ ಬ್ಯಾಂಕ್ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.

  ನಗರದಲ್ಲಿನ ಕೆನರಾ ಬ್ಯಾಂಕಿನ ಕೇಂದ್ರ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿವಿಧ ಬ್ಯಾಂಕ್‌ಗಳ ನೂರಾರು ಸಿಬ್ಬಂದಿ, ಅಧಿಕಾರಿಗಳು ಪಾಲ್ಗೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೂಡಲೆ ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಸಬೇಕು ಎಂದು ಆಗ್ರಹಿಸಿದರು.

   ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವೈ.ಸುದರ್ಶನ್ ಮಾತನಾಡಿ, ಸುಧಾರಣೆಗಳ ಹೆಸರಿನಲ್ಲಿ ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನಡೆಯನ್ನು ತಾಳುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಮೂಲಕ ಖಾಸಗಿ ಬಂಡವಾಳದಾರರಿಗೆ ದೇಶದ ಸಂಪತ್ತು ನೀಡಲು ಸರಕಾರ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಯಾವುದೇ ಕಾರಣಕ್ಕೂ ರಾಷ್ಟ್ರೀಕೃತ ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಅವಕಾಶ ಕೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ವಸೂಲಾಗದ ಸಾಲಕ್ಕೆ ಬ್ಯಾಂಕ್ ಅಧಿಕಾರಿಗಳನ್ನು ಹೊಣೆ ಮಾಡುವುದು ಸಮಂಜಸವಲ್ಲ. ಈ ನಿರ್ಧಾರವನ್ನು ಸರಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಾಲ ವಸೂಲಿಗೆ ಸರಕಾರ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಪ್ರಮಾಣ ಏರಿಕೆಯಾಗಿದೆ. 50 ಕೋಟಿಗೂ ವಸೂಲಾಗದ ಸಾಲದಲ್ಲಿ ಶೇ 80ರಷ್ಟು ಮಂದಿ ಉದ್ಯಮಿಗಳಿದ್ದಾರೆ. ಈ ಪ್ರಮಾಣ ಸಾಲವನ್ನು ಉಳಿಸಿಕೊಂಡಿರುವ ಉದ್ಯಮಿಗಳಿಂದ ಸಾಲವನ್ನು ವಸೂಲ ಮಾಡಲು ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 ನೋಟು ಅನಾಣ್ಯೀಕರಣದ ಬಳಿಕ ಬ್ಯಾಂಕ್ ಸಿಬ್ಬಂದಿ ಹೆಚ್ಚುವರಿ ಸಮಯ ದುಡಿದಿದ್ದಾರೆ. ಬ್ಯಾಂಕ್ ಸಿಬ್ಬಂದಿಯ ಹೆಚ್ಚುವರಿ ದುಡಿಮೆಯನ್ನು ಪರಿಗಣಿಸಿ ಹೆಚ್ಚುವರಿ ವೇತನ ನೀಡಿಲ್ಲ. ಅಲ್ಲದೆ ಅನಾಣ್ಯೀಕರಣದಿಂದ ಬ್ಯಾಂಕ್‌ಗಳಿಗೆ 70 ಸಾವಿರ ಕೋಟಿ ರೂಗಳಷ್ಟು ನಷ್ಟವಾಗಿದೆ. ಈ ನಷ್ಟವನ್ನು ಬಜೆಟ್‌ನಲ್ಲಿ ಭರಿಸಲಾಗುವುದು ಎಂದು ಕೇಂದ್ರ ಸರಕಾರ ಭರವಸೆ ನೀಡಿತ್ತು. ಆದರೆ ಬಜೆಟ್‌ನಲ್ಲಿ ಬ್ಯಾಂಕ್‌ಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಕಿಡಿಕಾರಿದರು.

    ಕೇಂದ್ರ ಸರಕಾರಿ ನೌಕರರಿಗೆ ಗ್ರಾಚ್ಯುಟಿ ನೀಡಲಾಗಿದೆ. ಆದರೆ ಆರು ವರ್ಷಗಳಿಂದ ಬ್ಯಾಂಕ್ ಸಿಬ್ಬಂದಿಗಳಿಗೆ ಗ್ರಾಚ್ಯುಟಿ ನೀಡಿಲ್ಲ. ಕೇಂದ್ರ ಸರಕಾರ ಬ್ಯಾಂಕ್ ಸಿಬ್ಬಂದಿಗಳ ಕುರಿತ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಕಿಡಿಕಾರಿದ ಅವರು, ಕೂಡಲೆ ಬ್ಯಾಂಕ್ ನೌಕರರಿಗೂ 2016ರಿಂದ ಪೂರ್ವಾನ್ವಯವಾಗುವಂತೆ ಇದನ್ನು ಜಾರಿಗೆ ತರಬೇಕು. ಬ್ಯಾಂಕ್‌ಗಳ ಆಡಳಿತ ಮಂಡಳಿಯಲ್ಲಿ ಕಾರ್ಮಿಕ ವರ್ಗ ಮತ್ತು ಅಧಿಕಾರಿ ವರ್ಗದವರಿಗೆ ನಿರ್ದೇಶಕ ಸ್ಥಾನಗಳಲ್ಲಿ ಪ್ರಾತಿನಿದ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

 ಪ್ರತಿಭಟನೆಯಲ್ಲಿ ಐಎನ್‌ಬಿಇಎಫ್‌ನ ಪ್ರಧಾನ ಕಾರ್ಯದರ್ಶಿ ಎಂ.ಕೆ.ನರಸಿಂಹಮೂರ್ತಿ,ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News