×
Ad

ವಜಾಗೊಂಡ ಅಂಗನವಾಡಿ ಕಾರ್ಯಕರ್ತೆಯರ ಮರು ನೇಮಕಕ್ಕೆ ಸಚಿವ ಸಂಪುಟ ಅಸ್ತು: ಸಚಿವ ಜಯಚಂದ್ರ

Update: 2017-04-12 18:48 IST

ಬೆಂಗಳೂರು, ಎ. 11: ಗ್ರಾಪಂ ಚುನಾವಣೆಗಳಲ್ಲಿ ಸ್ಪರ್ಧಿಸಿ ಚುನಾಯಿತರಾಗಿ, ಸೇವೆಯಿಂದ ವಜಾಗೊಂಡಿದ್ದ 28 ಮಂದಿ ಅಂಗನವಾಡಿ ಕಾರ್ಯಕತೆರ್ಯರು, 10 ಮಂದಿ ಸಹಾಯಕಿಯರನ್ನು ಮರು ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.

ಬುಧವಾರ ವಿಧಾನಸೌಧದ ಸಂಪುಟ ಸಭಾ ಮಂದಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜಯಚಂದ್ರ, ಚುನಾವಣೆಯಲ್ಲಿ ಸ್ಪರ್ಧಿಸಿ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ವಜಾಗೊಂಡಿದ್ದ ಕಾರ್ಯಕರ್ತೆಯರು ಮತ್ತು ಸಹಾಯಕರ ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಸಂಪುಟವು ಅಂತಿಮ ಎಚ್ಚರಿಕೆ ನೀಡಿ, ಮರು ನೇಮಕ ಮಾಡಿ ಅವರ ಸೇವೆಯನ್ನು ಮುಂದುವರೆಸಲು ತೀರ್ಮಾನಿಸಿದೆ ಎಂದರು.

ಜಿಎಸ್‌ಟಿಗೆ ಅಧಿವೇಶನ: ಜುಲೈ ತಿಂಗಳಿನಿಂದ ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ಕಾಯಿದೆ (ಜಿಎಸ್‌ಟಿ) ಜಾರಿಗೊಳಿಸಬೇಕೆಂಬ ಹಿನ್ನೆಲೆಯಲ್ಲಿ ಲೇಖಾನುದಾನ ಪಡೆಯಲಾಗಿದ್ದ 2017-18ನೆ ಸಾಲಿನ ಆಯವ್ಯಯದ ಅನುಮೋದನೆ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ಕಲ್ಪಿಸಲು ಜೂನ್ ಮೊದಲ ವಾರದಲ್ಲಿ ವಿಧಾನ ಮಂಡಲದ ಅಧಿವೇಶನವನ್ನು ನಡೆಸಲು ಸಂಪುಟ ನಿರ್ಧರಿಸಿದೆ ಎಂದರು.

ಅನುಮೋದನೆ: ನಗರದ ಕ್ರೆಸೆಂಟ್ ರಸ್ತೆಯಲ್ಲಿ ನ್ಯಾಯಾಂಗ ಅಕಾಡಮಿ ನೂತನ ಕಟ್ಟಡ ನಿರ್ಮಾಣಕ್ಕೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅಭಿಯೋಜಕರು, ನ್ಯಾಯಾಂಗ ಅಧಿಕಾರಿಗಳು, ನ್ಯಾಯಾಧೀಶರಿಗೆ ತರಬೇತಿ ನೀಡಿ ಅವರ ವೃತ್ತಿ ಕೌಶಲ್ಯ ವೃದ್ಧಿಸುವ ಕಾಯಕದಲ್ಲಿ ತೊಡಗಿರುವ ನ್ಯಾಯಾಂಗ ಅಕಾಡಮಿ ಕಟ್ಟಡದ ಮೊದಲ ಹಂತದ ಕಾಮಗಾರಿ 12 ಕೋಟಿ ರೂ.ವೆಚ್ಚದಲ್ಲಿ ಪ್ರಾರಂಭವಾಗಿದ್ದು, ಮುಂದುವರೆದ ಕಾಮಗಾರಿಗಳಿಗೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 84.02 ಕೋಟಿ ರೂ.ಮಂಜೂರಾತಿಗೆ ಸಂಪುಟವು ಸಮ್ಮತಿಸಿದೆ ಎಂದರು.

ಯೋಜನೆಗಳಿಗೆ ಒಪ್ಪಿಗೆ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ 57 ಕೋಟಿ ರೂ., ಚಿತ್ರದುರ್ಗದ ಹೊಸದುರ್ಗದಲ್ಲಿ 25.6 ಕೋಟಿ ರೂ. ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 200 ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ಯೋಜನೆಗಳನ್ನು ಅನುಷ್ಠಾನಕ್ಕೆ ಒಪ್ಪಿಗೆ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

ಸಶಸ್ತ್ರ ಮೀಸಲು ಪಡೆ ಸ್ಥಾಪನೆ: ಕೆಂಗೇರಿ ಸಮೀಪದ ಉಲ್ಲಾಳದಲ್ಲಿ 21.14 ಎಕರೆ ಪ್ರದೇಶದಲ್ಲಿ 19.7 ಕೋಟಿ ರೂ.ವೆಚ್ಚದಲ್ಲಿ ನಗರ ಸಶಸ್ತ್ರ ಮೀಸಲು ಪಡೆ ಸ್ಥಾಪಿಸಲು ಸಮ್ಮತಿಸಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾ.ಪಂ.ಅನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಲು ಸಂಪುಟ ನಿರ್ಧರಿಸಿದೆ ಎಂದವರು ಮಾಹಿತಿ ನೀಡಿದರು.

‘2016-17ನೆ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಉಡುಪಿ, ಮೈಸೂರು, ಬಳ್ಳಾರಿ, ವಿಜಯಪುರ, ಕಲಬುರಗಿ ಹಾಗೂ ಬೆಳಗಾವಿ ನಗರಗಳಲ್ಲಿ ಆಯ್ದ ಕೀಡೆಗಳಿಗೆ ಮೀಸಲಿರುವ ಕ್ರೀಡಾ ವಸತಿ ನಿಲಯಗಳನ್ನು 15.6 ಕೋಟಿ ರೂ ವೆಚ್ಚದಲ್ಲಿ ಕ್ರೀಡಾ ಅಕಾಡಮಿಗಳನ್ನಾಗಿ ಪರಿವರ್ತಿಸಲು ಸಂಪುಟವು ನಿರ್ಣಯಿಸಿದೆ’

-ಸಚಿವ ಜಯಚಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News