ನೀಟ್ ಆಧರಿಸಿ ಸ್ನಾತಕೋತ್ತರ ವೈದ್ಯ ಸೀಟುಗಳನ್ನು ನೀಡಲು ಹೈಕೋರ್ಟ್ ಆದೇಶ
ಬೆಂಗಳೂರು, ಎ.16: ಸ್ನಾತಕೋತ್ತರ ವೈದ್ಯ ಸೀಟುಗಳ ಪ್ರವೇಶ ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಅನುದಾನರಹಿತ ಅಲ್ಪ ಸಂಖ್ಯಾತ ಕಾಲೇಜಿಗೆ ಹಿನ್ನಡೆಯಾಗಿದೆ.
ಬೆಂಗಳೂರಿನ ಸೈಂಟ್ ಜಾನ್ ರಾಷ್ಟ್ರೀಯ ಆರೋಗ್ಯ ವಿಜ್ಞಾನಗಳ ಅಕಾಡಮಿ ಸಲ್ಲಿಸಿದ್ದ ಮಧ್ಯಾಂತರ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಅಲ್ಲದೆ, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ನೀಟ್ ಆಧರಿಸಿ ಎಲ್ಲ ವೈದ್ಯ ಶಿಕ್ಷಣ ಸಂಸ್ಥೆಗಳು ಸ್ನಾತಕೋತ್ತರ ವೈದ್ಯ ಸೀಟುಗಳನ್ನು ಕೋಟಾದಡಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ನೀಡಲೇಬೇಕು. ಅದರಲ್ಲಿ ಅಲ್ಪಸಂಖ್ಯಾತ ಸಂಸ್ಥೆಗಳು ಅಥವಾ ಅಲ್ಪಸಂಖ್ಯಾತರೇತರ ಸಂಸ್ಥೆಗಳು ಎಂದು ವರ್ಗೀಕರಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ಸೈಂಟ್ ಜಾನ್ ರಾಷ್ಟ್ರೀಯ ಆರೋಗ್ಯ ವಿಜ್ಞಾನಗಳ ಅಕಾಡಮಿ, ನೀಟ್ ಆಧರಿಸಿ ಪ್ರವೇಶ ನಡೆಸದೆ ತಾನೇ ಪ್ರತ್ಯೇಕ ಪ್ರವೇಶ ಪ್ರಕ್ರಿಯೆ ನಡೆಸುತ್ತಿದೆ ಎಂದು ಮಂಗಳೂರಿನ ಎಂಬಿಬಿಎಸ್ ಪದವಿಧರರಾದ ರಾಚಪ್ಪ ಕಿಶೋರ್ ಉಬರಂಗಲ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಪೀಠ ಈ ಆದೇಶ ನೀಡಿದೆ. ಭಾರತೀಯ ವೈದ್ಯ ಮಂಡಳಿ(ಎಂಸಿಐ) ನಿಯಮದಂತೆ ಸಾಮಾನ್ಯ ಕೌನ್ಸೆಲಿಂಗ್ ಪ್ರಾಧಿಕಾರ ಮೂಲಕ ಆಯ್ಕೆಯಾಗುವ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕು ಎಂದು ಆದೇಶಿಸಿರುವ ನ್ಯಾಯಪೀಠ, ಸ್ನಾತಕೋತ್ತರ ವೈದ್ಯ ಪ್ರವೇಶಕ್ಕೆ ನೀಡಿದ್ದ ಮಧ್ಯಾಂತರ ತಡೆ ಆದೇಶವನ್ನು ತೆರವುಗೊಳಿಸಿದೆ.
ಎಂಸಿಐ ನಿಯಮ 9ಎ ಪ್ರಕಾರ, ಸ್ನಾತಕೋತ್ತರ ವೈದ್ಯ ಪ್ರವೇಶಕ್ಕೆ ಯಾವುದೇ ಕೋಟಾದಲ್ಲಾದರೂ ಅಂದರೆ, ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ವರ್ಗ, ಅನಿವಾಸಿ ಭಾರತೀಯರು ಮತ್ತು ಮ್ಯಾನೇಜ್ಮೆಂಟ್ ಕೋಟಾದ ಸೀಟುಗಳನ್ನು ನೀಟ್ ಆಧರಿಸಿ ಸಾಮಾನ್ಯ ಕೌನ್ಸೆಲಿಂಗ್ ಪ್ರಾಧಿಕಾರ ನಡೆಸುವ ಕೌನ್ಸೆಲಿಂಗ್ನ ಮೂಲಕವೇ ಭರ್ತಿ ಮಾಡಿಕೊಳ್ಳಬೇಕು. ನೇರವಾಗಿ ಭರ್ತಿ ಮಾಡಿಕೊಳ್ಳಬಾರದು ಎಂದು ಕೋರ್ಟ್ ಹೇಳಿದೆ.
ಸುಪ್ರಿಂಕೋರ್ಟ್ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಸಂವಿಧಾನದ 30(1)ನೆ ವಿಧಿಯನ್ನು ಎಲ್ಲದಕ್ಕೂ ಅನ್ವಯಿಸಲಾಗದು. ಶಿಕ್ಷಣದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಾಗೂ ರಾಷ್ಟ್ರದ ಹಿತಾಸಕ್ತಿ ಕಾಪಾಡಲು ಕೈಗೊಳ್ಳುವ ಕೆಲವು ನಿಯಂತ್ರಣ ಕ್ರಮಗಳನ್ನು ಎಲ್ಲ ಶಿಕ್ಷಣ ಸಂಸ್ಥೆಗಳೂ ಪಾಲಿಸಲೇಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ತಮ್ಮದು ಅಲ್ಪಸಂಖ್ಯಾತ ವೈದ್ಯ ಶಿಕ್ಷಣ ಸಂಸ್ಥೆ ತಮಗೆ ನೀಟ್ ಅನ್ವಯವಾಗುವುದಿಲ್ಲ. ಭಾರತೀಯ ಸಂವಿಧಾನದ 30(1) ವಿಧಿಯಡಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ನಡೆಸುವ ಕಾಲೇಜುಗಳಲ್ಲಿ ಪ್ರವೇಶಕ್ಕೆ ವಿನಾಯಿತಿ ಇದೆ. ಹೀಗಾಗಿ, ತಮಗೆ ಪ್ರತ್ಯೇಕ ಪ್ರವೇಶ ಪ್ರಕ್ರಿಯೆಗೆ ಅನುಮತಿ ನೀಡಬೇಕು ಎಂದು ಆಕಾಡಮಿ ವಾದಿಸಿತ್ತು.