ರಾಜ್‌ರ ಸಹಪಂಕ್ತಿ ಭೋಜನ ಮಠಗಳಿಗೆ ಮಾದರಿಯಾಗಲಿ: ಬರಗೂರು ರಾಮಚಂದ್ರಪ್ಪ

Update: 2017-04-24 12:52 GMT

ಬೆಂಗಳೂರು, ಎ.24: ಮಠಮಾನ್ಯಗಳು ಸಹ ಪಂಕ್ತಿಭೋಜನಕ್ಕೆ ಅವಕಾಶ ಕಲ್ಪಿಸಲು ಇಂದಿಗೂ ಸಾಧ್ಯವಾಗದಿರುವಾಗ ಡಾ.ರಾಜ್‌ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಸಹಪಂಕ್ತಿ ಭೋಜನ ಏರ್ಪಡಿಸುವ ಮೂಲಕ ಸಹಜ ಮನುಷ್ಯತ್ವವನ್ನು ಮೆರೆದಿದ್ದರು ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಸ್ಮರಿಸಿದರು.

ಸೋಮವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡಮಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವರನಟ ಡಾ.ರಾಜ್‌ಕುಮಾರ್‌ರವರ 89ನೆ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ ಬಹುತೇಕ ಮಠಗಳಲ್ಲಿ ಅಸ್ಪ್ರಶ್ಯತಾ ಆಚರಣೆ ನಡೆಯುತ್ತಿದೆ. ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಊಟದ ವ್ಯವಸ್ಥೆಯಿದೆ. ಇದನ್ನು ವಿರೋಧಿಸಿ ಸಹಪಂಕ್ತಿ ಭೋಜನ ಪದ್ಧತಿಯನ್ನು ಜಾರಿಗೆ ತರುವಂತೆ ಒತ್ತಾಯಿಸಲಾಗುತ್ತಿದೆ. ಆದರೆ, ಡಾ.ರಾಜ್‌ಕುಮಾರ್ ತಮ್ಮ ಮನೆಯಲ್ಲಿ, ಸಿನಿಮಾ ಕ್ಷೇತ್ರದಲ್ಲಿ ಸಹಪಂಕ್ತಿ ಭೋಜನ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು ಎಂದು ಅವರು ಹೇಳಿದರು.

ಸರ್ವಜನರ ಪ್ರತಿನಿಧಿ: ಡಾ.ರಾಜ್‌ಕುಮಾರ್‌ರವರ ವ್ಯಕ್ತಿತ್ವ ಹಾಗೂ ಅವರು ನಟಿಸಿರುವ ಸಿನಿಮಾಗಳನ್ನು ನೋಡುತ್ತಾ ಹೋದರೆ ಒಂದು ಜಾತಿಗೆ, ಧರ್ಮಕ್ಕೆ, ವರ್ಗ ಹಾಗೂ ವೃತ್ತಿಗೆ ಸೇರಿದವರಲ್ಲ ಎಂಬುದು ಸ್ಪಷ್ಟವಾಗುತ್ತದೆ. ಚಮ್ಮಾರನ ಪಾತ್ರದಿಂದ ಹಿಡಿದು ಚಕ್ರವರ್ತಿಯ ಪಾತ್ರದವರೆಗೂ ಅಭಿನಯಿಸುವ ಮೂಲಕ ಒಬ್ಬ ಸಾಮಾನ್ಯ ಮನುಷ್ಯ ಶ್ರಮ, ಶ್ರದ್ಧೆಯಿಂದ ಏನು ಬೇಕಾದರು ಸಾಧಿಸಬಲ್ಲನು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ ಎಂದು ಅವರು ಪ್ರಶಂಸಿದರು.

ಇಂದಿಗೂ ಸಾಮಾಜದಲ್ಲಿ ಜಾತಿ ಹಾಗೂ ಆರ್ಥಿಕ ಬಲವಿಲ್ಲದಿದ್ದರೆ ಅಭಿವೃದ್ಧಿಯಾಗುವುದು ತೀರ ಕಷ್ಟಕರವಾದ ಪರಿಸ್ಥಿತಿಯಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಡಾ.ರಾಜ್‌ಕುಮಾರ್ ನಿರಂತರ ಶ್ರಮ, ಶ್ರದ್ಧೆ, ತಾಳ್ಮೆಯ ಮೂಲಕ ದೊಡ್ಡ ಸ್ಥಾನಕ್ಕೆ ಏರಿದ್ದಾರೆ. ಅವರ ಈ ಸಾಧನೆಯನ್ನು ಜನಸಾಮಾನ್ಯರು ಮಾದರಿಯಾಗಿಸಿಕೊಳ್ಳಬೇಕು ಎಂದು ಅವರು ಆಶಿಸಿದರು.

ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಮಾತನಾಡಿ, ಡಾ.ರಾಜ್‌ಕುಮಾರ್ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಹೊತ್ತೊಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ಡಾ.ರಾಜ್‌ಕುಮಾರ್ ಅಭಿನಯಿಸಿದ ಸಿನಿಮಾಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಜಗತ್ತಿಗೆ ತಲುಪಿಸಬೇಕೆಂದು ತಿಳಿಸಿದರು.

ದಿಲ್ಲಿಯಲ್ಲಿ ಕರ್ನಾಟಕ ಕನ್ನಡ ಸಂಘದ ಭವನದ ಮುಂದೆ ಡಾ.ರಾಜ್‌ಕುಮಾರ್ ಪ್ರತಿಮೆಯನ್ನು ಮುಂದಿನ ವರ್ಷದೊಳಗೆ ಸ್ಥಾಪಿಸುವ ನಿಟ್ಟಿನಲ್ಲಿ ರಾಜ್‌ಕುಮಾರ್ ಕುಟುಂಬ, ರಾಜ್ಯ ಹಾಗೂ ಕೇಂದ್ರ ಸರಕಾರ ಜೊತೆಗೂಡಿ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್, ಹಿರಿಯ ನಟಿ ಜಯಂತಿ, ಡಾ.ರಾಜ್‌ಕುಮಾರ್ ಪತ್ರರಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಹಾಗೂ ವಾರ್ತಾಇಲಾಖೆಯ ನಿರ್ದೇಶಕ ವಿಶುಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News