ಉಳ್ಳವರ ಮರ್ಜಿಗೆ ಸಂವಿಧಾನ ತಿರುಚಲು ಮುಂದಾದರೆ ದೇಶದಲ್ಲಿ ಕ್ರಾಂತಿ: ಗೃಹಸಚಿವ ಡಾ.ಜಿ.ಪರಮೇಶ್ವರ್

Update: 2017-04-25 13:53 GMT

ಬೆಂಗಳೂರು, ಎ. 25: ದೇಶದಲ್ಲಿ ಸಮಾನತೆಗಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನವನ್ನು ‘ಉಳ್ಳವರ ಮರ್ಜಿಗೆ’ ತಿರುಚಿದರೆ ಅಥವಾ ಪರಿಷ್ಕರಣೆಗೆ ಮುಂದಾದರೆ ದೇಶದಲ್ಲಿ ಕ್ರಾಂತಿ ಸಂಭವಿಸಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಸಿದ್ದಾರೆ.

ವಿಕಾಸಸೌಧದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳ ಬಳಗದಿಂದ ಏರ್ಪಡಿಸಿದ್ದ 126ನೆ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ಒಳಿತಿನ ಹೊರತು ಅನ್ಯ ಕಾರಣಕ್ಕೆ ಸಂವಿಧಾನ ಪರಿಷ್ಕರಣೆ ಸರಿಯಲ್ಲ ಎಂದರು.

ಶೋಷಣೆಯ ಜಿಲೇಬಿ ತಿಂದವರಿಗೆ ಸಮಾನತೆಯ ಸಿಹಿ ಎಂದಿಗೂ ರುಚಿಸುವುದಿಲ್ಲ. ಹೀಗಾಗಿ ಶೋಷಿತರನ್ನು ಒಪ್ಪಿಕೊಳ್ಳುವ ಮನಸ್ಥಿತಿಯ ಸಮಾಜ ನಿರ್ಮಾಣ ಆಗುವವರೆಗೂ ದಲಿತರಿಗೆ ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.

ಅರ್ಹರು: ಪರಿಶಿಷ್ಟರಿಗೆ ಭಡ್ತಿ ಮೀಸಲಾತಿ ಕಲ್ಪಿಸುವ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ(ಎಸ್‌ಎಲ್‌ಪಿ) ಸಲ್ಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ಸರಕಾರಿ ಅಧಿಕಾರಿಗಳಾಗುವ ಎಲ್ಲ ಅರ್ಹತೆಗಳನ್ನು ಎಸ್ಸಿ-ಎಸ್ಟಿಗಳು ಹೊಂದಿದ್ದು, ಎಲ್ಲ ಜವಾಬ್ದಾರಿಯನ್ನು ನಿರ್ವಹಿಸುವ ಶಕ್ತಿ ಅವರಿಗಿದೆ ಎಂದು ಹೇಳಿದರು.

ರಾಜ್ಯದಲ್ಲಿನ ಪರಿಶಿಷ್ಟರ ಜನಸಂಖ್ಯೆಯನ್ನು ಆಧರಿಸಿ ಬಜೆಟ್‌ನಲ್ಲಿ ಆ ವರ್ಗಗಳ ಕಲ್ಯಾಣಕ್ಕೆ ಅನುದಾನ ಮೀಸಲಿಡಬೇಕು. ಮಾತ್ರವಲ್ಲ, ಜನಸಂಖ್ಯೆಯನ್ನು ಆಧರಿಸಿಯೇ ಶಿಕ್ಷಣ, ಉದ್ಯೋಗದಲ್ಲಿಯೂ ಮೀಸಲಾತಿ ಕಲ್ಪಿಸಬೇಕು. ರಾಜ್ಯದಲ್ಲಿ ಇನ್ನೂ ವಿಳಾಸವೇ ಇಲ್ಲದ ಲಕ್ಷಾಂತರ ಮಂದಿ ದಲಿತರು ಗ್ರಾಮೀಣ ಪ್ರದೇಶದಲ್ಲಿದ್ದು, ಅಸ್ಪಶ್ಯತೆ, ಜಾತಿ ಅಸಮಾನತೆ, ಹೊಟೇಲ್‌ಗಳಲ್ಲಿ ಪ್ರತ್ಯೇಕ ಲೋಟ, ದೇವಸ್ಥಾನ ಪ್ರವೇಶ ಮತ್ತು ಕ್ಷೌರ ನಿರಾಕರಿಸಲಾಗುತ್ತಿದೆ. ಇಂತಹ ಅನಿಷ್ಟ ಪದ್ಧತಿಗಳು ತೊಲಗಬೇಕು ಎಂದರು.

ವಿಶ್ವಕ್ಕೆ ಸ್ಫೂರ್ತಿಯನ್ನು ನೀಡಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಇನ್ನೂ ಜಾತಿಯ ಕಣ್ಣುಗಳಿಂದ ನೋಡುವುದು ಸರಿಯಲ್ಲ. ಎಲ್ಲ ಜಾತಿಯವರು ಒಗ್ಗಟ್ಟಿನಿಂದ ಅಂಬೇಡ್ಕರ್ ಅವರ ಜಯಂತಿ ಆಚರಿಸಬೇಕೆಂದು ಅಪೇಕ್ಷೆ ಪಟ್ಟ ಪರಮೇಶ್ವರ್, ಅಂಬೇಡ್ಕರ್ ತತ್ವ-ಆದರ್ಶಗಳು ಎಂದಿಗೂ ಜನಜನಿತ ಎಂದು ಪ್ರತಿಪಾದಿಸಿದರು.

ಹಂಪಿ ಕನ್ನಡ ವಿವಿ ಕುಲಪತಿ ಡಾ.ಮಲ್ಲಿಕಾಘಂಟಿ ಮಾತನಾಡಿ, ಅಂಬೇಡ್ಕರ್ ಅಭಿಮಾನಿಗಳ ಬಳಗಕ್ಕಿಂತ ಅಂಬೇಡ್ಕರ್ ಅರಿವಿನ ಬಳಗಗಳು ಅಗತ್ಯ. ಅವರ ವಿಚಾರಧಾರೆಗಳ ಬೆಳಕಿನಲ್ಲಿ ಮನುಧರ್ಮದ ದಬ್ಬಾಳಿಕೆ ವಿರುದ್ಧ ನಮ್ಮಲ್ಲಿನ ನೈತಿಕ ಹೋರಾಟ ಬಲವನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಶೋಷಿತರಲ್ಲಿನ ಜಾಗೃತಿಯಿಂದಾಗಿ ದಲಿತ ಯುವಕರು ದೇವಾಲಯ, ಹೊಟೇಲ್ ಪ್ರವೇಶಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ಜಾತಿ ಸಂಘರ್ಷಗಳಾಗುತ್ತಿವೆ ಎಂದ ಹಿರಿಯ ಸಾಹಿತಿ ಡಾ.ಸಿದ್ದಲಿಂಗಯ್ಯ, ಪುರೋಹಿತಶಾಹಿಗಳನ್ನು ದಲಿತರು ಧಿಕ್ಕರಿಸಬೇಕು ಎಂದು ಹೇಳಿದರು.

ಅಭಿಮಾನಿಗಳ ಬಳಗದ ಅಧ್ಯಕ್ಷ ಎನ್.ಆರ್.ಪ್ರಭು ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಧಾನ ಕಾರ್ಯದರ್ಶಿ ನಾಗಭೂಷಣ್, ರಾಜ್ಯ ಸರಕಾರಿ ಎಸ್ಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಡಿ.ಶಿವಶಂಕರ್, ಮುನಿ ಆಂಜಿನಪ್ಪ, ಮಹದೇವ, ಮನೋಜ್ ಕುಮಾರ್, ಶಶಿಧರ್, ಉಮೇಶ್, ಸಂತೋಷ್ ಕುಮಾರ್, ಅಮರಾವತಿ, ಸುಚರಿತ, ದುಂಡು ಮಾದಯ್ಯ, ರಾಘವೇಂದ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News