ನಾಲಗೆ ಕಚ್ಚಿಕೊಂಡ ರಾವಲ್ : ಜೀಪಿಗೆ ಕಟ್ಟುವ ಟ್ವೀಟ್ ಡಿಲೀಟ್

Update: 2017-05-24 06:29 GMT

ಹೊಸದಿಲ್ಲಿ,ಮೇ 24 : ಕಲ್ಲು ತೂರಾಟಗಾರನೊಬ್ಬನ ಬದಲು ಲೇಖಕಿ ಅರುಂಧತಿ ರಾಯ್ ಅವರನ್ನು ಸೇನಾ ಜೀಪಿಗೆ ಕಟ್ಟಿ ಹಾಕಬೇಕೆಂದು ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದ ನಟ-ರಾಜಕಾರಣಿ ಪರೇಶ್ ರಾವಲ್ ತಮ್ಮ ಟ್ವೀಟನ್ನು ಡಿಲೀಟ್ ಮಾಡಿದ್ದಾರೆ.

ಅರುಂಧತಿ ಶ್ರೀನಗರಕ್ಕೆ ಭೇಟಿ ನೀಡಿದ್ದ ವೇಳೆ ಭಾರತೀಯ ಸೇನೆಯ ವಿರುದ್ಧ ಹೇಳಿಕೆ ನೀಡಿದ್ದರೆಂದು ಪಾಕಿಸ್ತಾನದ ಕೆಲ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯೆಯಾಗಿ ಪರೇಶ್ ರಾವಲ್ ಟ್ವೀಟ್ ಮಾಡಿದ್ದರು.

ನಂತರ ಪತ್ರಿಕೆಯೊಂದರೊಂದಿಗೆ ಮಾತನಾಡಿದ ರಾವಲ್ ‘‘ಅದು ಕಠೋರವಾಗಿದೆ ಎಂದು ನನಗೆ ಗೊತ್ತು. ಅದು ಕಠೋರವಾಗಿರಬೇಕೆಂದೇ ನಾನು ಬಯಸಿದ್ದೆ. ಆದುದರಿಂದಲೇ ಅದು ನಿರೀಕ್ಷಿತ ಪರಿಣಾಮ ಬೀರಿದೆ. ಅರುಂಧತಿ ರಾಯ್ ಹೇಳುತ್ತಿರುವುದರ ಬಗ್ಗೆ ಅದು ದೇಶದ ಗಮನ ಸೆಳೆದಿದೆ. ಈಗ ಒಂದು ಚರ್ಚೆ ಆರಂಭಗೊಳ್ಳಲಿದೆ,’’ ಎಂದಿದ್ದರು.

ಸೇನೆಯ ಮೇಜರ್ ನಿತಿನ್ ಲೀತುಲ್ ಗೊಗೊಯಿ ಎಪ್ರಿಲ್ 9ರಂದು ಕಾಶ್ಮೀರಿ ವ್ಯಕ್ತಿಯೊಬ್ಬನನ್ನು ಸೇನಾ ಜೀಪಿಗೆ ಕಟ್ಟಿ ಕಲ್ಲು ತೂರಾಟಗಾರರಿಂದ ಸೇನೆಯ ಹಾಗೂ ಚುನಾವಣಾ ಅಧಿಕಾರಿಗಳನ್ನು ರಕ್ಷಿಸಲು ಯತ್ನಿಸಿದ್ದರೆಂದು ವರದಿಗಳು ತಿಳಿಸಿದ್ದವು. ಈ ಘಟನೆಯ ಬಗ್ಗೆ ಸೇನೆ ತನಿಖೆ ನಡೆಸಿ ಅಂದಿನ ಸನ್ನಿವೇಶದಲ್ಲಿ ಅವರ ಕೃತ್ಯ ಸಮರ್ಥನೀಯ ಎಂದು ಹೇಳಿತ್ತಲ್ಲದೆ ಇತ್ತೀಚೆಗೆ ಸೇನೆ ಅವರಿಗೆ ಪ್ರಶಂಸಾ ಪತ್ರವನ್ನೂ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News