ಫ್ಯಾಶಿಸ್ಟ್ ಮೋದಿ ಸರಕಾರದಡಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಕುತ್ತು

Update: 2017-06-19 18:05 GMT

ಭಾಗ-1
ಲುಬಿಲ್ಲದ ನಾಲಿಗೆ ಎತ್ತ ಬೇಕಾದರೂ ಹೊರಳುತ್ತದೆ ಎಂಬ ಗಾದೆ ಮಾತಿದೆ. ಮೋದಿ ಒಮ್ಮೆ ಪ್ರಜಾಸತ್ತೆಯನ್ನು ಗಟ್ಟಿಗೊಳಿಸಬೇಕು ಎನ್ನುತ್ತಾರೆ. ಆರೋಗ್ಯಕರ ಟೀಕೆಗಳು ಬೇಕು ಎನ್ನುತ್ತಾರೆ. ಆದರೆ ಅವರ ಸರಕಾರ ಮಾಡುವ ಕೆಲಸಗಳೆಲ್ಲವೂ ಇದಕ್ಕೆ ತೀರ ವಿರುದ್ಧವಾಗಿದ್ದು ಪ್ರಜಾಸತ್ತೆಯನ್ನು ದುರ್ಬಲಗೊಳಿಸುತ್ತಾ ದೇಶವನ್ನು ಸರ್ವಾಧಿಕಾರಿ ಪ್ರಭುತ್ವದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ. ಮೋದಿ ಸರಕಾರದ ಮೂರು ವರ್ಷಗಳ ದುರಾಡಳಿತದಲ್ಲಿ ಭಾರತದ ಮಾಧ್ಯಮ ವಲಯದಲ್ಲಂತೂ ಹಿಂದೆಂದೂ ಆಗಿರದಷ್ಟು ಬದಲಾವಣೆಗಳಾಗಿವೆ. ಹಿಂದಾದರೆ - ತುರ್ತು ಪರಿಸ್ಥಿತಿ ಮತ್ತು ರಾಜೀವ್ ಗಾಂಧಿ ಆಡಳಿತದ ಅಲ್ಪಾವಧಿಯನ್ನು ಹೊರತುಪಡಿಸಿ - ಬಹುತೇಕ ಮಾಧ್ಯಮಗಳು ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡು ಬರುತ್ತಿದ್ದವು. ಆಳುವವರ ತಪ್ಪುನಡೆಗಳನ್ನು ಟೀಕಿಸುವ ಧನಾತ್ಮಕ ಕೆಲಸ ಮಾಡುತ್ತಿದ್ದವು. ಅಂದು ತುತ್ತೂರಿಗಳ ಸಂಖ್ಯೆ ತೀರ ಕಡಿಮೆ ಇತ್ತು. ಆದರೆ ಇಂದು ಫ್ಯಾಶಿಸ್ಟ್ ಮೋದಿ ಸರಕಾರದಡಿ ಹೊಗಳುಭಟ ಮಾಧ್ಯಮಗಳ ಸಂಖ್ಯೆ ಉತ್ತುಂಗಕ್ಕೇರಿದೆ.

ಸ್ತುತಿಪಾಠದಲ್ಲೆ ತಲ್ಲೀನವಾಗಿರುವ ಇವು ಸರಕಾರದ ತಪ್ಪುನಡೆಗಳನ್ನು ಟೀಕಿಸುತ್ತಿಲ್ಲ, ವರದಿ ಮಾಡುತ್ತಿಲ್ಲ ಅಥವಾ ನಯವಾಗಿ ತೇಲಿಸಿ ಬಿಡುತ್ತಿವೆ. ಅದೇ ವೇಳೆ ಯಾವ ಪಕ್ಷಕ್ಕೂ ಸೇರದೆ ಸ್ವತಂತ್ರವಾಗಿ ಕಾರ್ಯಾಚರಿಸುವ ಮತ್ತು ಸರಕಾರದ ತಪ್ಪುನಡೆಗಳನ್ನು ಟೀಕಿಸುವ ಕೆಲವೇ ಕೆಲವು ಮಾಧ್ಯಮಗಳ ಬಾಯಿ ಮುಚ್ಚಿಸಲು ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. ಆರೆಸ್ಸೆಸ್ ಮಕ್ಕಳ ಕಳ್ಳಸಾಗಾಟದಲ್ಲಿ ತೊಡಗಿರುವ ಕುರಿತು ತನಿಖಾ ವರದಿಯೊಂದನ್ನು ಪ್ರಕಟಿಸಿದ ‘ಔಟ್‌ಲುಕ್’ ನಿಯತಕಾಲಿಕದ ಸಂಪಾದಕ ತನ್ನ ಕೆಲಸ ಕಳೆದುಕೊಳ್ಳಬೇಕಾಯಿತು. ಕಳೆದ ವರ್ಷ ‘ರಾಜಸ್ಥಾನ್ ಪತ್ರಿಕಾ’ ಎಂಬ ಮಾಧ್ಯಮಕ್ಕೆ ಕಿರುಕುಳ ನೀಡಿದ ಪರಿಣಾಮವಾಗಿ ಅದು ಆರ್ಥಿಕ ನಷ್ಟಕ್ಕೆ ಗುರಿಯಾಗಿದೆ. ಇನ್ನು ಬೆಳಕಿಗೆ ಬಾರದ ಪ್ರಕರಣಗಳ ಸಂಖ್ಯೆ ಎಷ್ಟಿದೆಯೊ ಗೊತ್ತಿಲ್ಲ. ಸರಕಾರಕ್ಕೆ ನಿರ್ದಿಷ್ಟ ಮಾಧ್ಯಮವೊಂದು ಇಷ್ಟವಾಗದಾಗ ಸಂಬಂಧಪಟ್ಟ ಪತ್ರಕರ್ತರೊಂದಿಗೆ ಮಾತನಾಡಬಾರದೆಂದು ಅಧಿಕಾರಿಗಳಿಗೆ ಗುಪ್ತ ಮಾಹಿತಿ ರವಾನೆಯಾಗುತ್ತದೆ. ಸರಕಾರವನ್ನು ಅಥವಾ ಮೋದಿಯ ನಿಕಟವರ್ತಿ ಕಾರ್ಪೊರೇಟು ಕುಳಗಳನ್ನು ಟೀಕಿಸುವ ಅಥವಾ ಅವ್ಯವಹಾರಗಳನ್ನು ಬಯಲಿಗೆಳೆಯುವ ಪತ್ರಕರ್ತರು ಕೆಲಸ ಅಥವಾ ಜೀವವನ್ನೆ ಕಳೆದುಕೊಳ್ಳಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇವತ್ತು ಹೆಚ್ಚಿನ ಮಾಧ್ಯಮಗಳಲ್ಲಿ ವರದಿಗಳ ಬದಲು ಅಭಿಪ್ರಾಯಗಳು, ಸರಕಾರವನ್ನು ನೇರವಾಗಿ ಹೊಗಳುವ ಬರಹಗಳು ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿರುವುದಕ್ಕೆ ಜಾಹೀರಾತುಗಳ ಲಂಚದೊಂದಿಗೆ ಇದೂ ಒಂದು ಮುಖ್ಯ ಕಾರಣ. ಇತ್ತೀಚಿನ ಎನ್‌ಡಿಟಿವಿ ಪ್ರಕರಣ ಮೋದಿ ಸರಕಾರದ ಅಪ್ಪಟ ಫ್ಯಾಶಿಸ್ಟ್ ನೀತಿಗಳಿಗೆ ಅತ್ಯುತ್ತಮ ಉದಾಹರಣೆ.

ಎನ್‌ಡಿಟಿವಿ ಮತ್ತು ಮೋದಿ ಸರಕಾರ

ಎನ್‌ಡಿಟಿವಿ ಮೇಲೆ ಆರಂಭದಿಂದಲೂ ಕೆಂಗಣ್ಣು ಬೀರಿರುವ ಮೋದಿ ಸರಕಾರ ಜನವರಿ 2016ರ ಪಠಾಣ್‌ಕೋಟ್ ದಾಳಿಗಳ ಬಳಿಕ ಒಂದು ದಿನದ ಮಟ್ಟಿಗೆ ಎನ್‌ಡಿಟಿವಿ ಹಿಂದಿ ವಾಹಿನಿಯ ಪ್ರಸಾರವನ್ನು ನಿಲ್ಲಿಸುವಂತೆ ಆದೇಶ ಹೊರಡಿಸಿತ್ತು. ಆದರೆ ಸರ್ವೋಚ್ಚ ನ್ಯಾಯಾಲಯ ಇದನ್ನು ತಳ್ಳಿಹಾಕಿತು. ನವಂಬರ್ 2016ರಲ್ಲಿ ಪುನಃ ಎನ್‌ಡಿಟಿವಿಯನ್ನು ಗುರಿಯಾಗಿಸಿ 24 ಗಂಟೆಗಳ ನಿಷೇಧಾಜ್ಞೆ ಹೇರಲು ಮುಂದಾದಾಗ ಮಾಧ್ಯಮ ವಲಯದಿಂದ ಬಂದ ತೀವ್ರ ಪ್ರತಿಭಟನೆಗಳಿಗೆ ಮಣಿದು ನಿಷೇಧಾಜ್ಞೆಯನ್ನು ಹಿಂದೆಗೆದುಕೊಳ್ಳಲಾಯಿತು. ಇತ್ತೀಚಿನ ಘಟನೆಯಲ್ಲಿ ಎನ್‌ಡಿಟಿವಿಯ ಚರ್ಚಾ ಕಾರ್ಯಕ್ರಮವೊಂದರ ವೇಳೆ ಸಂಘ ಪರಿವಾರಿಗ ಸಂಬಿತ್ ಪಾತ್ರಾ ತನ್ನ ಉದ್ಧಟತನದ ಮಾತು ಗಳಿಗಾಗಿ ಹೊರನಡೆಯಬೇಕಾಗಿ ಬಂದ ಕೆಲವೇ ದಿನಗಳೊಳಗಾಗಿ ಎನ್‌ಡಿಟಿವಿ ಮೇಲೆ ಸಿಬಿಐ ದಾಳಿಗಳು ನಡೆದಿವೆ.

ದಾಳಿಗೆ ಮುನ್ನ
ಇದೇ ಜೂನ್ 1ರಂದು ಎನ್‌ಡಿಟಿವಿಯಲ್ಲಿ ಒಂದು ಸಂವಾದ ಕಾರ್ಯಕ್ರಮ ನಡೆದಿದೆ. ಅದರಲ್ಲಿ ಸಂಜೊಯ್ ಹಝಾರಿಕ ಎಂಬವರು ಮಾತನಾಡುತ್ತಿದ್ದಾಗ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಮಧ್ಯದಲ್ಲಿ ಬಾಯಿ ಹಾಕಿದರು. ‘‘ಈ ರೀತಿ ಅಡ್ಡಿಪಡಿಸುವ ಹಕ್ಕು ನಿಮಗಿದೆಯೇ?’’ ಎಂದು ಸಂಜೊಯ್ ಪ್ರಶ್ನಿಸಿದಾಗ ಸಂಬಿತ್ ‘‘ನಾನು ಅಡ್ಡಿ ಪಡಿಸುವುದು ಕೇವಲ ಎನ್‌ಡಿಟಿವಿಯಲ್ಲಿ ಮಾತ್ರ. ಯಾಕಂದ್ರೆ ಆ ಚಾನೆಲ್ ಒಂದು ಅಜೆಂಡಾ ಇಟ್ಟುಕೊಂಡಿದೆ. ಹಾಗಾಗಿ ನಾನು ಅಡ್ಡಿಪಡಿಸುವ ಅಗತ್ಯ ಇದೆ’’ ಎಂದು ಉತ್ತರಿಸಿದ್ದರು.

ಆಗ ವಾಹಿನಿಯ ಆ್ಯಂಕರ್ ಮತ್ತು ಸಂಬಿತ್ ಮಧ್ಯೆ ಬಿಸಿಬಿಸಿ ಮಾತುಕತೆ ನಡೆಯಿತು:
ಆ್ಯಂಕರ್: ಸಂಬಿತ್ ಒಂದೋ ಇಲ್ಲಿಂದ ಹೊರಟುಹೋಗಬೇಕು ಇಲ್ಲಾ ಕ್ಷಮೆ ಯಾಚಿಸಬೇಕು.
ಸಂಬಿತ್: ನಾನ್ಯಾಕೆ ಹೋಗಬೇಕು? ನಾನು ಎನ್‌ಡಿಟಿವಿಯ ಅಜೆಂಡಾ ಬಯಲಿಗೆಳೆಯುವೆ. ನಿಮ್ಮನ್ನು ಮತ್ತು ನಿಮ್ಮ ವಾಹಿನಿಯ ಅಜೆಂಡಾವನ್ನು ಬಯಲಿಗೆಳೆಯಬೇಕು.

ಆ್ಯಂಕರ್: ಇಂಥಾ ಭಾಷೆ ಮತ್ತು ಇಂಥಾ ಆರೋಪ ಸ್ವೀಕಾರಾರ್ಹವಲ್ಲ.
ಸಂಬಿತ್: ಈ ಚರ್ಚೆ ಮುಗಿಯುವ ತನಕವೂ ಅದನ್ನು ಬಯಲಿಗೆಳೆಯುವೆ.

ಆ್ಯಂಕರ್: ನೀವಿದ್ದರೆ ನಾನು ಈ ಚರ್ಚೆಯನ್ನು ಮುಂದುವರಿಸುವುದಿಲ್ಲ.
ಇದಾದ ನಾಲ್ಕು ದಿನಗಳಲ್ಲಿ ಅಂದರೆ ಜೂನ್ 5ರಂದು ಎನ್‌ಡಿಟಿವಿ ವಾಹಿನಿಯ ಸಂಸ್ಥಾಪಕರಾದ ಪ್ರಣೊಯ್ ರಾಯ್ ಮತ್ತು ರಾಧಿಕಾ ರಾಯ್ ಮನೆ ಹಾಗೂ ಸಂಬಂಧಪಟ್ಟ ಕೆಲವೊಂದು ಕಟ್ಟಡಗಳ ಮೇಲೆ ಹಠಾತ್ತಾಗಿ ಸಿಬಿಐ ದಾಳಿ ನಡೆದಿದೆ. ಇದು ಖಂಡಿತಾ ಕಾಕತಾಳೀಯವಲ್ಲ ಎಂದು ನಂಬಲು ಬಲವತ್ತರ ಕಾರಣಗಳಿವೆ.

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News