ಕೇರಳ: ನಟಿ ಅಪಹರಣ,ಕಿರುಕುಳ ಪ್ರಕರಣ ನಿರ್ಣಾಯಕ ಹಂತದಲ್ಲಿ

Update: 2017-07-03 06:23 GMT

ಕೊಚ್ಚಿ,ಜು.3:  ನಟಿಯನ್ನು ಅಪಹರಿಸಿ ಕಿರುಕುಳ ನೀಡಿದ ಪ್ರಕಣದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದೆ ಎನ್ನಲಾಗುತ್ತಿದೆ. ನಟಿಗೆ ಕಿರುಕುಳ ನೀಡಿದ  ದೃಶ್ಯಗಳ ಮೆಮೊರಿ ಅನ್ನು ನಟ ದಿಲೀಪ್ ಪತ್ನಿ ನಟಿ ಕಾವ್ಯಮಾಧವನ್‍ರ ಮಾಲಕತ್ವದ ಸಂಸ್ಥೆಗೆ ಒಪ್ಪಿಸಿದ್ದೇನೆ ಎಂದು ಜೈಲಿನಲ್ಲಿರುವ ಮುಖ್ಯ ಆರೋಪಿ ಪಲ್ಸರ್ ಸುನಿ ಹೇಳಿದ್ದಾನೆ. ಇದರ ಆಧಾರದಲ್ಲಿ ಕಾಕ್ಕನಾಡ್ ಮಾವೇಲಿಪುರಂನ ಕಾವ್ಯ ಮಾಧವನ್‍ರ  ಬಟ್ಟೆ ಅಂಗಡಿಯ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ವೈಜ್ಞಾನಿಕ ಪರೀಕ್ಷೆ ನಡೆಸಲು ಕಳುಹಿಸಿದ್ದಾರೆ. ಪಲ್ಸರ್ ಸುನಿ ಅಥವಾ ಸಹ ಆರೋಪಿ ವಿಜೀಶ್ ಅಲ್ಲಿಗೆ ಬಂದಿದ್ದಾರೆಯೇ ಎಂದು ತಿಳಿಯಲು ಪೊಲೀಸ್ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.

ನಟಿಗೆ ಕಿರುಕುಳ ನೀಡುವ ದೃಶ್ಯಗಳ ಸಹಿತ ಮೆಮೊರಿ ಕಾರ್ಡ್ ಪೊಲೀಸರಿಗೆ ಲಭಿಸಿದೆ ಎನ್ನುವ ಸೂಚನೆಯೂ ಲಭಿಸಿದೆ. ದೃಶ್ಯಗಳಿರುವ ಮೆಮೊರಿ ಕಾರ್ಡ್‍ನ್ನು ಬಿಸಾಡಿದ್ದೇನೆ ಎಂದು ಸುನಿ ಮೊದಲು ಹೇಳಿದ್ದನು. ನಂತರ ವಕೀಲರಿಗೆ ನೀಡಿದ್ದೇನೆ ಎಂದು ಸುನಿ ಹೇಳಿಕೆ ಬದಲಿಸಿದ್ದನು.ನಂತರ ಕಾವ್ಯಾರ ಬಟ್ಟೆ ಅಂಗಡಿಯಲ್ಲಿ ಕೊಟ್ಟಿದ್ದೇನೆ ಎಂದು ಆತ ಹೇಳಿದ್ದ.

ಈ ನಡುವೆ, ಪ್ರಕರಣಕ್ಕೆ ಸಂಬಂದಿಸಿ ಮತ್ತಷ್ಟು ಬಂಧನಗಳು ನಡೆಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಪ್ರಕರಣದಲ್ಲಿ ಸಂಚು ನಡೆಸಿದ ಕುರಿತು ತನಿಖೆ ನಡೆಸುವುದಕ್ಕಾಗಿ ದಿಲೀಪ್ ಮತ್ತು ನಿರ್ಮಾಪಕ ನಾದಿರ್‍ಶಾರನ್ನು ಇನ್ನೊಮ್ಮೆ ಸಾಕ್ಷ್ಯಪಡೆಯಲು ಪೊಲೀಸರು ಕರೆಸಿಕೊಳ್ಳುವ ಸಾಧ್ಯತೆ ಇದೆ. ಮುಖ್ಯ ಆರೋಪಿ ಪಲ್ಸರ್‍ಸುನಿ ನಟ ದಿಲೀಪ್‍ರ ಚಿತ್ರ ‘ಜೋರ್ಜೇಟ್ಟನ್ಸ್ ಪುರ’ದ ಲೊಕೇಶನ್‍ಗೆ ಭೇಟಿ ನೀಡಿದ ಪೋಟೊ ನಿನ್ನೆ ಬಹಿರಂಗಗೊಂಡಿತ್ತು. ಟೆನಿಸ್ ಕ್ಲಬ್‍ವೊಂದರಲ್ಲಿ ದಿಲೀಪ್ ತೆಗೆದ ಸೆಲ್ಫಿಯಲ್ಲಿ ಪಲ್ಸರ್ ಸುನಿ ಇರುವುದು ಗೊತ್ತಾಗಿದೆ. ಫೋಟೊ ತೆಗೆದ ಕ್ಲಬ್‍ನ ನೌಕರರನ್ನು ಆಲುವ ಪೊಲೀಸ್  ಕರೆಯಿಸಿಕೊಂಡು ಸಾಕ್ಷ್ಯ ಪಡೆದಿದ್ದಾರೆ.ಶೂಟಿಂಗ್ ಸಮಯದಲ್ಲಿ ಯಾರು ದಿಲೀಪ್‍ರ ಭೇಟಿಗೆ ಬಂದಿದ್ದಾರೆ ಎನ್ನುವ ವಿವರಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ದಿಲೀಪ್ ಮತ್ತು ಸುನಿ ಯಾವತ್ತಾದರೂ ಕ್ಲಬ್‍ಗೆ ಬಂದಿದ್ದಾರೆಯೇ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದೆ. ಪಲ್ಸರ್ ಸುನಿ ನನಗೆ ಪರಿಚಯವಿಲ್ಲ ಎಂದು ಈಗಾಗಲೇ ದಿಲೀಪ್ ಹೇಳಿದ್ದಾರೆ. ಇಂತಹವರೊಂದಿಗೆ ತಾನೆಂದೂ ಸಂಬಂಧ ಇರಿಸಿಕೊಂಡಿಲ್ಲ ಎಂದು ದಿಲೀಪ್ ಸ್ಪಷ್ಟಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News