×
Ad

ನಾಳೆ ರಾಷ್ಟ್ರಪತಿ ಚುನಾವಣೆ

Update: 2017-07-16 20:50 IST

ಬೆಂಗಳೂರು, ಜು.17: ರಾಷ್ಟ್ರಪತಿ ಚುನಾವಣೆಗೆ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಮೊದಲ ಮಹಡಿಯಲ್ಲಿನ ಕೊಠಡಿ ಸಂಖ್ಯೆ-106ರಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ಬೆಳಗ್ಗೆ 10ರಿಂದ ಸಂಜೆ 5ಗಂಟೆಯ ವರೆಗೆ ಮತದಾನ ನಡೆಯಲಿದೆ.

ವಿಧಾನಸಭೆಗೆ ಆಯ್ಕೆಯಾಗಿದ 224 ಮಂದಿ ಶಾಸಕರು ಹಾಗೂ ಲೋಕಸಭೆ ಕಾರ್ಯದರ್ಶಿಯಿಂದ ಅನುಮತಿ ಪಡೆದುಕೊಂಡ ರಾಜ್ಯದಿಂದ ಆಯ್ಕೆಯಾದ ಚಿಕ್ಕೋಡಿ-ಸದಲಗ ಲೋಕಸಭಾ ಕ್ಷೇತ್ರದ ಸಂಸದ ಪ್ರಕಾಶ್ ಹುಕ್ಕೇರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

 ಅಲ್ಲದೆ, ಅನ್ಯ ರಾಜ್ಯಗಳ ಶಾಸಕರು, ಸಂಸದರು ತಮ್ಮ ಮತ ಪತ್ರವನ್ನು ರಾಜ್ಯಕ್ಕೆ ವರ್ಗಾವಣೆ ಮಾಡಿಕೊಂಡು ಮತ ಚಲಾಯಿಸುವ ಅವಕಾಶವೂ ಇದೆ. ಮತದಾರರಾದವರು ತಮ್ಮ ಮತಪತ್ರದ ಮೂಲಕ ರಹಸ್ಯವಾಗಿ ಚಲಾಯಿಸಬಹುದು ಎಂದು ಸೂಚಿಸಲಾಗಿದೆ.

ಪೆನ್ ಬಳಕೆ: ಮತಪತ್ರದ ಮೂಲಕ ರಹಸ್ಯ ಮತದಾನಕ್ಕೆ ನೀಲಿ ಶಾಯಿಯ ಪೆನ್ ಬಳಕೆ ಮಾಡಬೇಕು. ಅದನ್ನು ಮತ ಕೇಂದ್ರದಲ್ಲೇ ಒದಗಿಸಲಾಗುವುದು. ಮತದಾರರಾದವರು ಮತಪತ್ರದಲ್ಲಿ ಮೊದಲ ಪ್ರಾಶಸ್ತ್ಯ ಮತಕ್ಕೆ-1, ಎರಡನೆ ಪ್ರಾಶಸ್ತ್ಯದ ಮತಕ್ಕೆ-2 ಎಂದು ನಮೂದಿಸಬೇಕು ಎಂದು ನಿರ್ದೇಶಿಸಲಾಗಿದೆ.

 ಒಂದು ವೇಳೆ ಕೇವಲ ‘2’ ಎಂದು ಬರೆದಲ್ಲಿ ಆ ಮತ ಅಸಿಂಧುವಾಗಲಿದೆ. ಈ ಬಗ್ಗೆ ಎಲ್ಲ ಮತದಾರರ ಗಮನಕ್ಕೆ ತರಲಾಗಿದೆ. ಮತಪೆಟ್ಟಿಗೆಯನ್ನು ಈಗಾಗಲೇ ವಿಧಾನಸೌಧದ ಕೊಠಡಿ-107ರಲ್ಲಿ ಭದ್ರವಾಗಿರಿಸಲಾಗಿದ್ದು, ಮತಪತ್ರಗಳನ್ನು ಪೊಲೀಸ್ ಭದ್ರತೆಯಲಿ ಇರಿಸಲಾಗಿದೆ ಎಂದು ತಿಳಿಸಲಾಗಿದೆ.

ರಾಷ್ಟ್ರಪತಿ ಚುನಾವಣೆ ಮತದಾನ ಪೂರ್ಣಗೊಂಡ ಬಳಿಕ ಮತಪೆಟ್ಟಿಗೆಯನ್ನು ವಿಮಾನದ ಮೂಲಕ ದಿಲ್ಲಿಗೆ ರವಾನಿಸಲಾಗುತ್ತದೆ. ಮತಪೆಟ್ಟಿಗೆ ಕೊಂಡೊಯ್ಯಲು ವಿಮಾನದಲ್ಲಿ ಮತಪೆಟ್ಟಿಗೆಗೆ ಒಂದು ಆಸನ ಕಾಯ್ದಿರಿಸಲಾಗಿದೆ ಎಂದು ವಿಧಾನಸಭೆ ಕಾರ್ಯದರ್ಶಿಯೂ ಆಗಿರುವ ಸಹಾಯಕ ಚುನಾವಣಾಧಿಕಾರಿ ಎಸ್.ಮೂರ್ತಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News