ಸಂಕುಚಿತ ಆಲೋಚನೆಯಿಂದ ಗಂಡಾಂತರ: ಮೌಲಾನ ಮಹ್ಮೂದ್ ಮದನಿ
ಬೆಂಗಳೂರು, ಆ.11: ದೇಶದಲ್ಲಿನ ಒಂದು ನಿಗದಿತ ವರ್ಗದ ಸಂಕುಚಿತ ಆಲೋಚನೆಯಿಂದಾಗಿ ಬಹುಪಾಲು ಜನರನ್ನು ಮೂಲಭೂತ ಸಮಸ್ಯೆಗಳ ಬಗ್ಗೆ ಗಮನಹರಿಸದಂತೆ ಹಾದಿ ತಪ್ಪಿಸಲಾಗುತ್ತಿದೆ ಎಂದು ಜಮೀಯತ್ ಉಲೇಮಾ ಹಿಂದ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ಮಹ್ಮೂದ್ ಮದನಿ ಆತಂಕ ವ್ಯಕ್ತಪಡಿಸಿದ್ದಾರೆ.
ನಗರದ ಟ್ಯಾನರಿ ರಸ್ತೆಯಲ್ಲಿರುವ ಶಾವಲಿವಲ್ಲಾ ಮದ್ರಸಾದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ನಮ್ಮ ಆಲೋಚನೆಗೆ ಸಹಮತ ವ್ಯಕ್ತಪಡಿಸುವವರಿಗೆ ಮಾತ್ರ ಅವಕಾಶಗಳು ಸಿಗುತ್ತವೆ. ಯಾರು ನಮ್ಮಾಂದಿಗಿಲ್ಲ ಅಂತಹವರನ್ನು ಅವಕಾಶ ವಂಚಿತರನ್ನಾಗಿಸುತ್ತೇವೆ ಎಂಬ ಅಘೋಷಿತ ವಾತಾವರಣ ನಿರ್ಮಿಸಲಾಗುತ್ತಿದೆ ಎಂದರು.
ಜಾತಿ, ಧರ್ಮದ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸುವ ವ್ಯವಸ್ಥಿತ ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಮುಸ್ಲಿಮರು ಸಮಾನ ಮನಸ್ಕ ಇತರ ವರ್ಗಗಳೊಂದಿಗೆ ಕೈ ಜೋಡಿಸಿ ಹೋರಾಟ ಮಾಡಬೇಕಾದ ಅನಿವಾರ್ಯತೆಯಿದೆ ಎಂದು ಅವರು ಕರೆ ನೀಡಿದರು.
ದೇಶದ ಅಭಿವೃದ್ಧಿಗೆ ಮುಸ್ಲಿಮರ ಕೊಡುಗೆ ಅಪಾರವಾದದ್ದು. ಈ ದೇಶವನ್ನು ಅಭಿವೃದ್ಧಿ ಹೊಂದಿದ ಸಶಕ್ತ ರಾಷ್ಟ್ರವನ್ನಾಗಿ ರೂಪಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಸಂವಿಧಾನಬದ್ಧವಾಗಿ ನಮಗೆ ಸಿಕ್ಕಿರುವ ಧಾರ್ಮಿಕ ಸ್ವಾತಂತ್ರದ ಹಕ್ಕನ್ನು ಯಾವುದೆ ಆಡಳಿತ ಕಸಿದುಕೊಳ್ಳಲು ಮುಂದಾಗಬಾರದು ಎಂದು ಮಹ್ಮೂದ್ ಮಅದನಿ ಹೇಳಿದರು.
ಶಾಂತಿಗಾಗಿ ನಡಿಗೆ: ದೇಶದಲ್ಲಿ ಕೋಮುಸೌದಾರ್ಹತೆ ನೆಲೆಸಬೇಕು, ಎಲ್ಲ ವರ್ಗಗಳ ಜನರಿಗೆ ಅವರ ಧಾರ್ಮಿಕ ಆಚರಣೆಗಳಿಗೆ ಮುಕ್ತ ಅವಕಾಶಗಳು ಸಿಗಬೇಕೆಂದು ಆಗ್ರಹಿಸಿ ಆ.13ರಂದು ಬೆಳಗ್ಗೆ 10 ಗಂಟೆಗೆ ನಗರದ ಪುರಭವನದಿಂದ ಸ್ವಾತಂತ್ರ ಉದ್ಯಾನದವರಿಗೆ ‘ಶಾಂತಿಗಾಗಿ ನಡಿಗೆ’ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ನ್ಯಾಯವಾದಿ ಎ.ಕೆ.ಸುಬ್ಬಯ್ಯ, ಬೇಲಿಮಠದ ಶಿವರುದ್ರಮಹಾಸ್ವಾಮಿ, ಅಹಿಂದ ಮುಖಂಡ ಪ್ರೊ.ಎನ್.ವಿ.ನರಸಿಂಹಯ್ಯ, ಮುಸ್ಲಿಮ್ ಮುತ್ತಹಿದ ಮಹಝ್ನ ಪ್ರಮುಖರು ಸೇರಿದಂತೆ ಸಮಾಜದ ಇತರ ವರ್ಗಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಮಹ್ಮೂದ್ ಮದನಿ ಹೇಳಿದರು.
ಇದೇ ಸಂದರ್ಭದಲ್ಲಿ ಗುಜರಾತ್ನಲ್ಲಿನ ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ಥರಾಗಿರುವವರ ನೆರವಿಗೆ ಜಮೀಯತ್ ಉಲೇಮಾ ರಾಜ್ಯ ಘಟಕದ ವತಿಯಿಂದ 11 ಲಕ್ಷ ರೂ.ಗಳ ಪರಿಹಾರದ ಚೆಕ್ನ್ನು ಮಹ್ಮೂದ್ ಮಅದನಿಗೆ ಮೌಲಾನ ಇಫ್ತಿಖಾರ್ಅಹ್ಮದ್ಖಾಸ್ಮಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾವಲಿವಲ್ಲಾ ಮದ್ರಸಾದ ಮುಖ್ಯಸ್ಥ ವೌಲಾನ ಝೈನುಲ್ ಆಬಿದೀನ್, ಜುಮ್ಮಾ ಮಸ್ಜಿದ್ಟ್ರರ್ಸ್ಟ್ ಬೋರ್ಡ್ ಅಧ್ಯಕ್ಷ ಡಾ.ಅನ್ವರ್ ಶರೀಫ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.