ಐರಾವತ ಬಸ್ಗೆ ಬೆಂಕಿ: ಪ್ರಯಾಣಿಕರು ಪಾರು
ಬೆಂಗಳೂರು, ಆ.12: ತಮಿಳುನಾಡಿನ ಚೆನ್ನೈ ಸಮೀಪ ಕೆಎಸ್ಸಾರ್ಟಿಸಿ ಸಂಸ್ಥೆಯ ವೋಲ್ವೋ ಬಸ್ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅನಾಹುತದಿಂದ ಪಾರಾಗಿದ್ದಾರೆ.
ಬೆಂಗಳೂರು ಹಾಗೂ ಚೆನ್ನೈ ನಡುವೆ ಸಂಚರಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಶನಿವಾರ ಬೆಳಗ್ಗೆ 8.15ರ ಸಮಯದಲ್ಲಿ ಬೆಂಕಿಗಾಹುತಿಯಾಗಿದೆ. ಚೆನ್ನೈನಿಂದ ಐದು ಕಿಲೋಮೀಟರ್ ದೂರದ ಪೂನಾಮಲೈ ಬೈಪಾಸ್ ಬಳಿ ಕೆಎಸ್ಸಾರ್ಟಿಸಿ ವೋಲ್ವೋ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಬಸ್ನಲ್ಲಿ ಈ ವೇಳೆ 43 ಪ್ರಯಾಣಿಕರಿದ್ದು, ಎಲ್ಲರೂ ಕೆಳಗಿಳಿದಿದ್ದಾರೆ. ಹಾಗಾಗಿ ಸಂಭವಿಸಬೇಕಿದ್ದ ದುರಂತ ಸ್ವಲ್ಪದರಲ್ಲಿಯೇ ತಪ್ಪಿದೆ.
ಬೆಂಕಿಯ ಕೆನ್ನಾಲಿಗೆಗೆ ಬಸ್ನ ಸೀಟುಗಳು ಹಾಗೂ ಮೇಲ್ಛಾವಣಿ ಸಂಪೂರ್ಣ ಸುಟ್ಟುಹೋಗಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕೆಎಸ್ಸಾರ್ಟಿಸಿ ಅಧಿಕಾರಿಗಳು ತಾಂತ್ರಿಕ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.