ಕತರ್: ಇಂಡಿಯನ್ ಕಲ್ಚರಲ್ ಸೆಂಟರ್ ನಲ್ಲಿ 71ನೆ ಸ್ವಾತಂತ್ರ್ಯೋತ್ಸವ ಆಚರಣೆ

Update: 2017-08-16 12:24 GMT

ಕತರ್, ಆ.16: ಇಲ್ಲಿನ ಇಂಡಿಯನ್ ಕಲ್ಚರಲ್ ಸೆಂಟರ್ (ಐಸಿಸಿ)ನಲ್ಲಿ ಭಾರತದ 71ನೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕತರ್ ನ ಭಾರತದ ರಾಯಭಾರಿ ಪಿ.ಕುಮಾರನ್ ಧ್ವಜಾರೋಹಣ ಮಾಡಿದರು.

ಈ ಸಂದರ್ಭ ಮಾತನಾಡಿದ ಅವರು, "ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ವ್ಯಕ್ತಿಗಳಿಗೆ ಗೌರವ ಸೂಚಿಸುವ ಕಾರ್ಯಕ್ರಮ ಇದಾಗಿದೆ” ಎಂದರು.

ವಿವಿಧ ಭಾರತೀಯ ಶಾಲೆಗಳ ವಿದ್ಯಾರ್ಥಿಗಳ ಪಥಸಂಚಲನದ ನಂತರ ಧ್ವಜಾರೋಹಣ ನಡೆಯಿತು. ರಾಷ್ಟ್ರಗೀತೆಯನ್ನು ಹಾಡಲಾಯಿತು.

ಕತರ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಅಧಿಕಾರಿಗಳು, ಸಂಯೋಜಿತ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಐಸಿಸಿ ಅಧ್ಯಕ್ಷ ಮಿಲನ್ ಅರುಣ್ ಸ್ವಾಗತಿಸಿದರು. ಐಸಿಸಿ ಪ್ರಧಾನ ಕಾರ್ಯದರ್ಶಿ ಜುಟ್ಟಾಸ್ ಪೌಲ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಐಸಿಸಿಯ ಕಾನ್ಸುಲರ್ ಸೇವೆಗಳ ಮುಖ್ಯಸ್ಥ ಕೆ.ಎಸ್. ಪ್ರಸಾದ್ ವಂದಿಸಿದರು.

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಐಸಿಸಿ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಸ್ಟ್ 18ರಂದು ಅಲ್ ವಕ್ರಾಹ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News