ದುಬೈ: ಮಳೆ ಸಂಕಷ್ಟದಲ್ಲಿ ಸಿಲುಕಿದವರ ನೆರವಿಗೆ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ

Update: 2024-04-21 04:16 GMT

ದುಬೈ, ಎ.21: ಯುಎಇ ಇತಿಹಾಸದಲ್ಲೇ ಎ.16ರಂದು ಅತೀ ಹೆಚ್ಚಿನ ಮಳೆ ಸುರಿದು ಸೃಷ್ಟಿಯಾದ ನೆರೆಯಿಂದ ಶಾರ್ಜಾ ಮತ್ತು ದುಬೈನ ಹಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ವೇಳೆ ಜನರಿಗೆ ಊಟ, ನೀರು ಔಷಧಿಯ ಸಮಸ್ಯೆ ಎದುರಾಗಿರುವುದು ಮನಗಂಡು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ನೆರವಿನ ಕಾರ್ಯಾಚರಣೆ ನಡೆಸಿದೆ.

ದುಬೈ ಇಂಡಿಯನ್ ಕಾನ್ಸುಲೇಟ್ ಅನುಮತಿ ಮತ್ತು ಸಹಯೋಗದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ರಕ್ಷಣಾ ಬೋಟ್ ನಲ್ಲಿ ಊಟ, ನೀರು, ರೇಶನ್ ಗಳನ್ನು ಕಳೆದ ಮೂರು ದಿನಗಳಿಂದ ಸಂಕಷ್ಟದಲ್ಲಿರುವ ಅನಿವಾಸಿ ಭಾರತೀಯರಿಗೆ ಮಾತ್ರವಲ್ಲದೆ, ನೂರಾರು ವಿದೇಶಿಯರಿಗೂ ಭೇದವಿಲ್ಲದೇ ನೆರವಿನ ಹಸ್ತ ನೀಡಿದೆ. ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಮುನ್ಸಿಪಾಲಿಟಿ ವಾಹನ ಚಾಲಕರಿಗೂ ಸ್ಥಳದಲ್ಲೇ ಊಟದ ವ್ಯವಸ್ಥೆ ಕಲ್ಪಿಸಿದೆ.

ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ನ ಹಿದಾಯತ್ ಅಡ್ಡೂರು, ಕೆಎನ್ಆರೈ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಒಕ್ಕಲಿಗರ ಸಂಘ ದುಬೈ ಅಧ್ಯಕ್ಷ ಕಿರಣ್ ಗೌಡ, ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯನ್, ದುಬೈ ಅನಿವಾಸಿ ಕನ್ನಡಿಗರು ಸ್ಥಾಪಕ ಇಮ್ರಾನ್ ಖಾನ್ ಎರ್ಮಾಳ್, ಸಮೀರ್ ಉದ್ಯಾವರ, ಫಿರೋಝ್, ಬಿಸಿಸಿಐ ಯುಎಇ ಪ್ರಧಾನ ಕಾರ್ಯದರ್ಶಿ ಅನ್ವರ್ ಹುಸೈನ್, ಓವರ್ ಸೀಸ್ ಮೂವೀಸ್ ನ ದೀಪಕ್ ಸೋಮಶೇಖರ್, ಏಮ್ ಇಂಡಿಯಾ ಫೌಂಡೇಶನ್ ಮುಝಫ್ಫರ್ ಶೇಖ್, ಯೂಸುಫ್ ಶೇಖ್, ಬಾಹರ್ ಅಲ್ ನೂರ್ ನ ಇಸ್ಮಾಯೀಲ್, ಗಲ್ಫ್ ಗೆಳೆಯರು ತಂಡದ ಸಾಗರ್ ಶೆಟ್ಟರ್ ಆಹಾರ ಸಾಮಗ್ರಿಗಳನ್ನು ವ್ಯವಸ್ಥೆ ಮಾಡಿ, ಜನರಿಗೆ ತಲುಪಿಸುವ ಕಾರ್ಯ ನಡೆಸಿದೆ. ಪರಿಸ್ಥಿತಿ ಸಂಪೂರ್ಣವಾಗಿ ಸುಧಾರಿಸುವ ವರೆಗೂ ಈ ನೆರವಿನ ಕಾರ್ಯ ಮುಂದುವರೆಯಲಿದೆ.

ಮಳೆ ಸಂಕಷ್ಟದಲ್ಲಿರುವ ಯಾವುದೇ ಅನಿವಾಸಿ ಕನ್ನಡಿಗರು ಊಟ, ನೀರು, ರೇಶನ್, ಔಷಧಿಯ ಸಹಾಯ ಬೇಕಿದ್ದಲ್ಲಿ +971 55 111 8555, +971529214783, +971 52 466 8185, +971526995413, +97155 597 1414 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News