ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: 6 ಮಂದಿ ಬಂಧನ, 5 ಟ್ರ್ಯಾಕ್ಟರ್, ಜೆಸಿಬಿ ವಶ
Update: 2017-08-21 16:55 GMT
ಮದ್ದೂರು, ಆ.21: ತಾಲೂಕಿನ ಕೂಳಗೆರೆ ಗ್ರಾಮದ ಶಿಂಷಾ ನದಿಪಾತ್ರದ ಅಕ್ರಮ ಮರಳು ಅಡ್ಡೆ ಮೇಲೆ ರವಿವಾರ ತಡರಾತ್ರಿ ಪೊಲೀಸರು ದಾಳಿ ನಡೆಸಿ 6 ಮಂದಿಯನ್ನು ಬಂಧಿಸಿ, 5 ಟ್ರ್ಯಾಕ್ಟರ್, ಜೆಸಿಬಿ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ತಹಸೀಲ್ದಾರ್ ಹರ್ಷ, ಸಿಪಿಐ ಪ್ರಭಾಕರ್, ಪಟ್ಟಣ ಠಾಣೆ ಪಿಎಸ್ಐ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಕಂದಾಯ ನಿರೀಕ್ಷಕ ರಾಮಣ್ಣ, ಗ್ರಾಮ ಲೆಕ್ಕಿಗ ದೇವಪ್ಪ, ಗ್ರಾಪಂ ಪಿಡಿಓ ಅನಿಲ್ಕುಮಾರ್, ಜಮೀನು ಮಾಲಕ ಹಾಗೂ ಮರಳು ಸಂಗ್ರಹಿಸಿದ ಸುನೀಲ್ ಅವರು ಪರಾರಿಯಾದರು ಎನ್ನಲಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಶಿಂಷಾನದಿ ಪಾತ್ರದಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿದ್ದರೂ ಅಕ್ರಮವಾಗಿ ಮರಳು ದಂಧೆ ಮುಂದುವರಿದಿದೆ. ಇದಕ್ಕೆ ಕೆಲವು ಅಧಿಕಾರಿಗಳೂ ಶಾಮೀಲಾಗಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.