ಬಿಎಸ್ವೈ ವಿರುದ್ಧ ಬಸವರಾಜರಾಯರಡ್ಡಿ ಆಕ್ರೋಶ
ಬೆಂಗಳೂರು, ಆ.24: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಂದು ಕಡೆ ಲಿಂಗಾಯತ ಧರ್ಮಕ್ಕೆ ಸಹಿ ಮಾಡುತ್ತಾರೆ. ಮತ್ತೊಂದೆಡೆ ಲಿಂಗಾಯತರು ಬೇರೆ ಅಲ್ಲ, ಅವರು ಹಿಂದೂಗಳೆ ಎನ್ನುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪಗೆ ಲಿಂಗಾಯತ ಧರ್ಮದ ಬಗ್ಗೆ ಗೊತ್ತಿಲ್ಲ. ಅವರೆಲ್ಲ ಆರೆಸ್ಸೆಸ್ ಸಿದ್ಧಾಂತದ ಮನುವಾದಿಗಳಾಗಿದ್ದಾರೆ ಎಂದು ಕಿಡಿಗಾರಿದರು.
ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮಠಾಧೀಶರು ಬೀದಿ ಬೀದಿಗಳಲ್ಲಿ ಬಡಿದಾಡುವುದನ್ನು ಮೊದಲು ನಿಲ್ಲಿಸಲಿ. ಎಲ್ಲರೂ ಕುಳಿತು ಒಟ್ಟಾಗಿ ಚರ್ಚೆ ಮಾಡಬೇಕಾದ ವಿಚಾರ ಇದಾಗಿದೆ. ಇದರಲ್ಲಿ ರಾಜಕಾರಣಿಗಳ ಕೆಲಸ ಏನು ಇಲ್ಲ ಎಂದು ಅವರು ಪ್ರಶ್ನಿಸಿದರು.
ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿ ಮುಖಂಡರು ಬಾಯಿ ಬಿಡುತ್ತಿಲ್ಲ. ಅದಕ್ಕಾಗಿಯೇ ಅವರನ್ನು ನಾನು ಮನುವಾದಿಗಳು ಎಂದು ಕರೆದದ್ದು. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಲಿಂಗಾಯತರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಲಿಂಗಾಯತ ಧರ್ಮಕ್ಕಾಗಿ ಅವರು ಒಂದಾಗಿ ಬರಲಿ. ಮುಖ್ಯಮಂತ್ರಿಯೂ ಒಟ್ಟಾಗಿ ಬನ್ನಿ ಎಂದಿದ್ದಾರೆ ಎಂದರು.