ಕುವೈಟ್: ಐಎಸ್ಎಫ್ ವತಿಯಿಂದ ಉಚಿತ ಆರೋಗ್ಯ ಶಿಬಿರ

Update: 2017-08-30 09:01 GMT

ಕುವೈಟ್, ಆ. 30: ಅನಿವಾಸಿ ಭಾರತೀಯರ ಸಾಮಾಜಿಕ ಸಾಂಸ್ಕೃತಿಕ ಸಂಘಟನೆ, ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್, ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚೆಗೆ  ಫರ್ವಾನಿಯಾ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ನಲ್ಲಿ ನಡೆಯಿತು.

ಅನಿವಾಸಿ ಭಾರತೀಯರಲ್ಲಿ ವಿಶೇಷತಃ ಅಸಂಘಟಿತ, ದುರ್ಬಲ, ಕಾರ್ಮಿಕ ವರ್ಗಗಳ ಮಧ್ಯೆ ಆರೋಗ್ಯದ ಕುರಿತಾದ ಜಾಗೃತಿ ಮೂಡಿಸಲು ಹಾಗೂ ಭಾರತೀಯ ಮೂಲದ ತಜ್ಞ ವೈದ್ಯರಿಂದ ಸೂಕ್ತ ಸಲಹೆ ನೀಡುವ ಗುರಿಯಾದರಿಸಿ ಹಮ್ಮಿಕೊಂಡಿದ್ದ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ನೂರಾರು ಸಂಖ್ಯೆಯ ಅನಿವಾಸಿಗಳು ಪಡೆದುಕೊಂಡರು. ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹಾಗೂ ನುರಿತ ವೈದ್ಯರು ಗಳನ್ನೊಳಗೊಂಡ, ಮಧ್ಯಪ್ರಾಚ್ಯದ ಖಾಸಗಿ ವಲಯದ ಪ್ರಮುಖ ಆರೋಗ್ಯ ಕೇಂದ್ರಗಳಲ್ಲೊಂದಾದ ಬದ್ರ್ ಅಲ್ ಸಮಾ ಸಹಭಾಗಿತ್ವದಲ್ಲಿ ನಡೆದ ಶಿಬಿರದ ಪ್ರಯೋಜನ ಪಡೆಯುವುದಕ್ಕಾಗಿ ಮುಂಜಾನೆಯಿಂದಲೇ ಅಪಾರ ಸಂಖ್ಯೆಯಲ್ಲಿ ಅನಿವಾಸಿಗಳು ಸರತಿ ಸಾಲಿನಲ್ಲಿ ನಿಂತಿದ್ದರು.  

ಮಧುಮೇಹ, ರಕ್ತದೊತ್ತಡ, ಕೊಲೆಸ್ಟ್ರಾಲ್, ಎಸ್ ಜಿ ಪಿ ಟಿ  (ಲಿವರ್ ಸ್ಕ್ರೀನಿಂಗ್), ಕ್ರಿಯೇಟಿನೈನ್ (ಮೂತ್ರಪಿಂಡಗಳ ಪರೀಕ್ಷೆ) ಮುಂತಾದ ಪರೀಕ್ಷೆಗಳು ಶಿಬಿರಾರ್ಥಿಗಳಿಗೆ ಉಚಿತವಾಗಿ ಲಭ್ಯವಿದ್ದವು. ಅಲ್ಲದೆ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಸ್ತ್ರೀ ರೋಗ ವಿಭಾಗ, ದಂತ ಚಿಕಿತ್ಸಾ ವಿಭಾಗ, ಜನರಲ್ ಸರ್ಜರಿ ಒಳಗೊಂಡಂತೆ ವಿವಿಧ ಕ್ಷೇತ್ರಗಳ ತಜ್ಞ ವೈದ್ಯರಿಂದ ಸಂದರ್ಶನ ಪಡೆದು ಅನಿವಾಸಿಗಳು ಉತ್ತಮ ಆರೋಗ್ಯಕ್ಕೆ ಸಂಬಂದಪಟ್ಟ ಸೂಕ್ತ ಸಲಹೆಗಳನ್ನು ಪಡೆದು ಕೊಂಡರು.

ಮುಂಜಾನೆ 7.30ಕ್ಕೆ ಆರಂಭವಾದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನಾಯಕರೂ, ಸಮಾಜ ಸೇವಕರೂ ಆದ ಜನಾಬ್ ಹಸನ್ ಯೂಸುಫ್ ರವರು ಆರೋಗ್ಯ ತಪಾಸನ ಶಿಬಿರ  ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ವ್ಯವಸ್ಥಾಪಕರಾದ ಅಬ್ದುಲ್ ರಝಾಕ್ ಅವರು ಆರೋಗ್ಯದ ಪ್ರಾಮುಖ್ಯತೆಯ ಕುರಿತು ವಿವರಿಸುತ್ತಾ ಅನಿವಾಸಿಗಳು ಕೆಲಸದ ಒತ್ತಡದಿಂದಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದಲ್ಲದೆ, ಹೃದಯ ಸಂಬಂಧಿ ಯಂತಹ ಗಂಭೀರ ಖಾಯಿಲೆಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಲು ವಿಫಲವಾಗುತ್ತಿರುವುದು ಕಳವಳಕಾರಿ ಎಂದು ವಿಷಾದಿಸಿದರು. ಈ ನಿಟ್ಟಿನಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಆಯೋಜಿಸುತ್ತಿರುವ ಆರೋಗ್ಯ ತಪಾಸಣಾ ಶಿಬಿರವು ಶ್ಲಾಘನೀಯ  ಎಂದರು. ಐಎಸ್ಎಫ್ ಕರ್ನಾಟಕ ವಿಭಾಗದ ಅಧ್ಯಕ್ಷ ಇಮ್ತಿಯಾಝ್ ಅಹ್ಮದ್ ಅರ್ಕುಳರವರು ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಾ ಇಂಡಿಯನ್ ಸೋಶಿಯಲ್ ಫೋರಮ್’ನ ಕಾರ್ಯವೈಖರಿಯ ಬಗ್ಗೆ ವಿವರಣೆ ನೀಡಿದರು.

ಐ ಎಸ್ ಎಫ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಮಂಚಿ ಸ್ವಾಗತಿಸಿದರು. ಆಸೀಫ್ ಕಾಪು ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಬದ್ರ್ ಸಮಾದ ವಿಶಿಷ್ಟ ಕೊಡುಗೆಗಾಗಿ ಈ ಸಂದರ್ಭದಲ್ಲಿ ಫಲಕ ನೀಡಿ ಗೌರವಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News