×
Ad

ರೈತರ ಸುಸ್ಥಿರ ಜೀವನಾಧಾರಕ್ಕೆ ‘ಸಮಗ್ರ ಕೃಷಿ ಪದ್ಧತಿ’ ಅಗತ್ಯ: ಡಾ.ಎಚ್.ಶಿವಣ್ಣ

Update: 2017-08-30 21:10 IST

ಬೆಂಗಳೂರು, ಆ.30: ರೈತರ ಆಹಾರ ಭದ್ರತೆ, ಪೌಷ್ಟಿಕ ಆಹಾರದ ಲಭ್ಯತೆಯನ್ನು ನೀಗಿಸುವಲ್ಲಿ ಮತ್ತು ಹೆಚ್ಚಿನ ಉತ್ಪಾದಕತೆ ಹಾಗೂ ಲಾಭವನ್ನು ಹೊಂದಲು ‘ಸಮಗ್ರ ಕೃಷಿ ಪದ್ಧತಿ’ ಅತ್ಯುತ್ತಮ ಮಾರ್ಗ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಚ್.ಶಿವಣ್ಣ ಅಭಿಪ್ರಾಯಪಟ್ಟಿದ್ದಾರೆ.

ಬುಧವಾರ ನಗರದಲ್ಲಿ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಕೃಷಿ ವಿವಿಯ ಕುವೆಂಪು ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಸಮಗ್ರ ಕೃಷಿಯಲ್ಲಿ ಯಶಸ್ವಿ ರೈತರ ಅನುಭವ-ಕಾರ್ಯಾಗಾರ’ವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರೈತರು ಲಭ್ಯವಿರುವ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಅತಿ ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಆದಾಯ ಪಡೆಯಬಹುದಾಗಿದೆ. ಸತತ ಬರ ಪರಿಸ್ಥಿತಿಯಿಂದ ರೈತರು ಇಂದು ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ತೊಡಗಿಸಿರುವ ಬಂಡವಾಳವನ್ನು ಮರಳಿಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಇಂತಹ ಪರಿಸ್ಥಿತಿಯಲ್ಲಿ ಬೇಸಾಯದ ಜೊತೆಯಲ್ಲಿ ಇತರೆ ಉಪಕಸುಬುಗಳಾದ ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಜೇನುಸಾಕಾಣಿಕೆ, ಅಣಬೆ ಬೇಸಾಯ, ರೇಷ್ಮೆ ಕೃಷಿ ಮುಂತಾದ ಉಪಕಸುಬುಗಳಿಂದ ನಿರಂತರವಾಗಿ ಆದಾಯವನ್ನು ಗಳಿಸಬಹುದಾಗಿದೆ ಎಂದು ಸಲಹೆ ನೀಡಿದರು.

ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವುದರಿಂದ ಕೃಷಿ ತ್ಯಾಜ್ಯ ವಸ್ತುಗಳ ಸಮರ್ಪಕ ಮರುಬಳಕೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವಿಕೆ, ಪರಿಸರ ಸಮತೋಲನ ಕಾಪಾಡಿಕೊಳ್ಳುವುದು, ನೈಸರ್ಗಿಕ ಸಂಪನ್ಮೂಲಗಳ ಸಮರ್ಪಕ ಬಳಕೆ, ಹೆಚ್ಚಿನ ಉತ್ಪಾದಕತೆ, ಉದ್ಯೋಗ ಸೃಷ್ಟಿಯಾಗಲಿದ್ದು ರೈತರಲ್ಲಿ ನಂಬಿಕೆ, ವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚುತ್ತದೆ ಎಂದರು.

ಕೃಷಿ ವಿವಿ ತಜ್ಞ ಡಾ.ಸಂಜಯ್ ‘ಅಧಿಕ ಉತ್ಪಾದನೆ ಮತ್ತು ಆದಾಯಗಳಿಸಲು ಇರುವ ತೊಡರು’ಗಳ ವಿಷಯ ಕುರಿತು ಮಾತನಾಡಿ, ರಾಸಾಯನಿಕ ಗೊಬ್ಬರವನ್ನು ಇಂದು ನಾವು ಹೆಚ್ಚಿಗೆ ಬಳಸುತ್ತಿರುವ ಕಾರಣ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ, ಸಾವಯವ ಗೊಬ್ಬರ ಬಳಕೆಯು ಇಂದು ಕಡಿಮೆಯಾಗಿದ್ದು, ಉತ್ಪಾದನೆಗೆ ತೊಡಕಾಗಿದೆ ಎಂದರು.

ಸೂಕ್ತವಾದ ಹಾಗೂ ಅಧಿಕ ಆದಾಯ ನೀಡಬಲ್ಲ ಸಮಗ್ರ ಕೃಷಿ ಪದ್ಧತಿ ಅಳವಡಿಕೆಯು ಆಯಾ ಪ್ರದೇಶದ ಹವಾಗುಣ, ದೊರಕುವ ಸಂಪನ್ಮೂಲ ಮತ್ತು ಇತರೆ ಪರಿಕರಗಳ ಮೇಲೆ ಅವಲಂಬಿತವಾಗಿದ್ದು, ಸಮಗ್ರ ಕೃಷಿ ಪದ್ಧತಿಯನ್ನು ಹಿಡುವಳಿ ಗಾತ್ರದ ಅನುಸಾರ ಅಳವಡಿಕೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಆಯುಕ್ತ ಜಿ.ಸತೀಶ್, ರೈತರು, ಕೃಷಿ ತಜ್ಞರು ಸೇರಿದಂತೆ ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News