ಅಧಿಕಾರದಲ್ಲಿದ್ದಾಗ ಕೆಲಸ ಮಾಡದೆ ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ: ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

Update: 2017-09-10 11:56 GMT

ಮೈಸೂರು, ಸೆ.10: ಅಧಿಕಾರದಲ್ಲಿದ್ದಾಗ‌ ಕೆಲಸ ಮಾಡಲಿಲ್ಲ. ಆದರೆ ಈಗ ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಮಳೆ ಅನಾಹುತದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಮಾಡಿರುವ ಆರೋಪಕ್ಕೆ ಮುಖ್ಯಮಂತ್ರಿ ಈ ರೀತಿ ಪ್ರತಿಕ್ರಿಯೆ ನೀಡಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿಎಂ, ಬಿಜೆಪಿಯವರು ಐದು ವರ್ಷ ಆಡಳಿತ ನಡೆಸಿರಲಿಲ್ಲವೇ? ಮಳೆ ನೀರು ಹರಿಯುವ ಚರಂಡಿಗಳ ದುರಸ್ತಿಗೆ ಏನೂ ಮಾಡದೆ ಈಗ ಆರೋಪ ಮಾಡುತ್ತಿದ್ದಾರೆ. ಈಗ ನಾವು ಮಳೆ ನೀರು ಹರಿಯುವ ಚರಂಡಿ ಮತ್ತು ರಾಜ ಕಾಲುವೆಗಳ ದುರಸ್ತಿಗೆ ಮುಂದಾಗಿದ್ದೇವೆ. 800 ಕಿ.ಮೀ. ಪೈಕಿ 400 ಕಿ.ಮೀ. ಮಾರ್ಗದ ಕಾಲುವೆ ಅಭಿವೃದ್ಧಿ ಕಾಮಗಾರಿ ನಡೆದಿದೆ ಎಂದು ತಿಳಿಸಿದರು.  

ಬೆಂಗಳೂರಿನಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗುತ್ತಿದೆ. ಹೀಗಾಗಿ ಕಟ್ಟೆಚ್ವರ ವಹಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಬಿಬಿಎಂಪಿ ಮೇಯರ್, ಆಯುಕ್ತರಿಗೆ ಸೂಚಿಸಿದ್ದೇನೆ. ಮಳೆಯಿಂದಾಗಿ ಮರಗಳು ಬಿದ್ದರೆ ಕೂಡಲೇ ತೆರವುಗೊಳಿಸಿ ಎಂದು ಹೇಳಿದ್ದೇನೆ. ಮಳೆ ಅನಾಹುತಕ್ಕೆ ಬಲಿಯಾದವರ ಕುಟುಂಬದವರಿಗೆ ಪರಿಹಾರ ವಿತರಿಸಲು ತಿಳಿಸಿದ್ದೇನೆ.

ರಾಜ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ಮೊದಲು ಆಡಳಿತ ನಡೆಸಿದವರು  ಈ ಕೆಲಸ  ಮಾಡಿದ್ದರೆ ಈಗ ಸಮಸ್ಯೆ ಆಗುತ್ತಿರಲಿಲ್ಲ ಎಂದರು.                        

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News