×
Ad

ಪೇದೆ ಹತ್ಯೆ ಸೇರಿ 11 ಪ್ರಕರಣ: ದರೋಡೆ ಕೋರರ ಕಾಲಿಗೆ ಗುಂಡಿಕ್ಕಿ ಬಂಧನ

Update: 2017-09-10 20:05 IST

ಬೆಂಗಳೂರು, ಸೆ.10: ಮುಖ್ಯ ಪೊಲೀಸ್ ಪೇದೆಯ ಕೊಲೆ ಸೇರಿ ಹನ್ನೊಂದು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ಹಾರಿಸಿ ಸಿನೆಮಿಯ ರೀತಿಯಲ್ಲಿ ಬಂಧಿಸುವಲ್ಲಿ ಬೆಳ್ಳಂದೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಆನೇಕಲ್ ನಿವಾಸಿ ಮುಝಾಮ್ಮಿಲ್ ಹಾಗೂ ಚಂದಾಪುರದ ನಿವಾಸಿ ಅಮರ್ ಬಂಧಿತ ಆರೋಪಿಗಳೆಂದು ಪೊಲೀಸರು ಗುರುತಿಸಿದ್ದು, ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿರುವ ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಾಚರಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರದ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್, ಶನಿವಾರ ರಾತ್ರಿ 10:30ರ ಸುಮಾರಿಗೆ ಬೆಳ್ಳಂದೂರು ಠಾಣೆ ವ್ಯಾಪ್ತಿಯ ಸರ್ಜಾಪುರ ಮುಖ್ಯರಸ್ತೆಯಲ್ಲಿ ಸಾಪ್ಟ್ ವೇರ್ ಇಂಜನಿಯರ್ ಆನಂದ್ ಎಂಬವರು ನಡೆದು ಹೋಗುತ್ತಿದ್ದಾಗ ಎರಡು ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನ ಮೇಲೆ ಹಲ್ಲೆ ನಡೆಸಿ ಮೊಬೈಲ್ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಆನಂದ್ ನೀಡಿದ ದೂರು ದಾಖಲಿಸಿಕೊಂಡ ಬೆಳ್ಳಂದೂರು ಇನ್ ಸ್ಪೆಕ್ಟರ್ ವಿಕ್ಟರ್‌ಸೈಮನ್, ವರ್ತೂರು ಇನ್ ಸ್ಪೆಕ್ಟರ್ ಸುಧಾಕರ್ ಸಹಕಾರದೊಂದಿಗೆ ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡ ರಚಿಸಿ ಇಡೀ ಪ್ರದೇಶದಲ್ಲಿ ನಾಕಾಬಂದಿ ಹಾಕಿದ್ದರು ಎಂದು ಮಾಹಿತಿ ನೀಡಿದರು.

ರವಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಇನ್ ಸ್ಪೆಕ್ಟರ್‌ಗಳಾದ ಸೈಮನ್ ಮತ್ತು ಸುಧಾಕರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ನಗರದ ಪ್ರೈಮಸ್ ಪಬ್ಲಿಕ್ ಶಾಲೆ ಬಳಿ ಗಸ್ತು ತಿರುಗುತ್ತಿದ್ದಾಗ ಅನಾಮಧೇಯವಾಗಿ ನಿಂತಿದ್ದ ಬೈಕ್‌ಗಳು ಕಣ್ಣಿಗೆ ಬಿತ್ತು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಸಮೀಪದ ನೀಲಗಿರಿ ತೋಟ ಪ್ರವೇಶಿಸಿದಾಗ ಅಲ್ಲಿ ತಲೆ ಮರೆಸಿಕೊಂಡಿದ್ದ ಮುಝಾಮಿಲ್ ಹಾಗೂ ಅಮರ್ ಕಾಣಿಸಿಕೊಂಡರು. ಶರಣಾಗುವಂತೆ ಸೂಚಿಸಿದಾಗ ಆರೋಪಿಗಳು ಮುಖ್ಯಪೇದೆ ಆಂಟೋನಿ ಮತ್ತು ಪೇದೆ ವಿಜಯ್ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಇನ್ ಸ್ಪೆಕ್ಟರ್ ಸೈಮನ್, ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದರು. ಅದನ್ನೂ ಲೆಕ್ಕಿಸದೆ ದಾಳಿಗೆ ಆರೋಪಿಗಳು ಮುಂದಾದಾಗ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ಡಿಸಿಪಿ ಅಬ್ದುಲ್ ಅಹದ್ ವಿವರಿಸಿದರು.

ಮುಖ್ಯಪೇದೆ ಕೊಲೆ: 2015ನೆ ಸಾಲಿನಲ್ಲಿ ಹೊಸೂರು ಪೊಲೀಸ್ ಠಾಣೆಯ ಮುಖ್ಯಪೇದೆ ಮುನಿಸ್ವಾಮಿ ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದ ಆರೋಪದ ಇಬ್ಬರು ಆರೋಪಿಗಳ ಮೇಲಿದೆ. ಅಷ್ಟೇ ಅಲ್ಲದೆ, ಠಾಣಾಧಿಕಾರಿ ನಾಗರಾಜ್ ಎಂಬುವರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದರು ಎಂದು ಅವರು ಮಾಹಿತಿ ನೀಡಿದರು.

ಶ್ಲಾಘನೆ: ಮುಖ್ಯ ಪೊಲೀಸ್ ಪೇದೆಯ ಕೊಲೆ ಸೇರಿ ಹನ್ನೊಂದು ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳಾಗಿದ್ದ ಇಬ್ಬರನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿರುವ ಇನ್ ಸ್ಪೆಕ್ಟರ್‌ಗಳಾದ ಸೈಮನ್ ವಿಕ್ಟರ್, ಸುಧಾಕರ್ ಮತ್ತು ಸಿಬ್ಬಂದಿ ವರ್ಗದವರನ್ನು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್, ಡಿಸಿಪಿ ಅಬ್ದುಲ್ ಅಹದ್ ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News