ಖಾಸಗಿ ಪ್ರತಿಷ್ಠಾನಗಳಿಂದ ಲೇಖಕರಿಗೆ ನ್ಯಾಯ: ಹಿರಿಯ ಕವಿ ವೆಂಕಟೇಶಮೂರ್ತಿ
ಬೆಂಗಳೂರು, ಸೆ. 24: ಲೇಖಕರಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನ್ಯಾಯಗಳೆರಡು ಸಿಗಬೇಕಾದರೆ ಖಾಸಗಿ ಪ್ರತಿಷ್ಠಾನಗಳಿಂದ ಮಾತ್ರ ಸಾಧ್ಯ ಎಂದು ಹಿರಿಯ ಕವಿ ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಕಸಾಪದಲ್ಲಿ ಕನ್ನಡ ಜನ ಶಕ್ತಿ ಕೇಂದ್ರ ಮತ್ತು ಡಾ.ನರಹಳ್ಳಿ ಪ್ರತಿಷ್ಠಾನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಅವರಿಗೆ ನರಹಳ್ಳಿ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.
ಸರಕಾರದ ಸಾಂಸ್ಥಿಕ ಪ್ರತಿಷ್ಠಾನಗಳಿಗೆ ತಮ್ಮದೆ ಆದ ಜವಾಬ್ದಾರಿ, ಹೊಣೆಗಾರಿಗೆಗಳು ಇರುತ್ತವೆ. ಈ ಪ್ರತಿಷ್ಠಾನಗಳು ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ವಿಚಾರದಲ್ಲಿ ಜಾತಿ, ಧರ್ಮ, ವರ್ಗ, ಪ್ರಾಂತವನ್ನು ಗಣನಿಯಕ್ಕೆ ತೆಗೆದುಕೊಳ್ಳಲಿದೆ. ಒಂದೇ ವರ್ಗದಲ್ಲಿ ಇಬ್ಬರು ಪ್ರತಿಭಾವಂತ ಲೇಖಕರಿದ್ದರೆ ಅವರಲ್ಲಿ ಒಬ್ಬರಿಗೆ ಅನ್ಯಾಯವಾಗುವುದು ಖಚಿತ ಎಂದರು.
ಸಾಮಾಜಿಕ ನ್ಯಾಯವನ್ನು ಬಗೆಯುವದರಿಂದ ಸಾಂಸ್ಕೃತಿಕ ಅನ್ಯಾಯಗಳಾಗುತ್ತಿವೆ. ಇದರಿಂದ ಲೇಖಕ ಎಂ.ಆರ್.ದತ್ತಾತ್ರಿ ಅವರಂತಹ ಪ್ರತಿಭಾವಂತ ಲೇಖಕರು ಸಮಾಜದಲ್ಲಿ ಗುರುತಿಸಿಕೊಳ್ಳಲು ಆಗುವುದಿಲ್ಲ. ಈ ದೃಷ್ಟಾಂತವನ್ನು ತಪ್ಪಿಸಲು ಖಾಸಗಿ ಪ್ರತಿಷ್ಠಾನಗಳು ಪ್ರಮುಖ್ಯತೆ ಪಡೆದುಕೊಳ್ಳುತ್ತವೆ ಎಂದು ತಿಳಿಸಿದರು.
ನರಹಳ್ಳಿ ಪ್ರತಿಷ್ಠಾನ ತನ್ನ ಜವಾಬ್ದಾರಿಯುತ ಕೆಲಸಗಳಿಂದ ವರ್ಷದಿಂದ ವರ್ಷಕ್ಕೆ ತನ್ನ ಗೌರವವನ್ನು ಹೆಚ್ಚಿಸಕೊಳ್ಳುತ್ತಿದೆ. ಇಂತಹ ಸಮಾಜಿಕ ಹೊಣೆಗಾರಿಕೆಯ ಪ್ರತಿಷ್ಠಾನಗಳು ಸಾಹಿತ್ಯ ಕ್ಷೇತ್ರಕ್ಕೆ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ಲೇಖಕ ಡಾ.ಸಿ.ಎನ್.ರಾಮಚಂದ್ರನ್ ಮಾತನಾಡಿ, ಲೇಖಕರು ಮನ್ನೆಲೆಗೆ ಬರುತ್ತಿದಂತ್ತೆ ಸಾಮಾಜಿಕ ಕ್ಷೇತ್ರವನ್ನು ಕಡೆಗಣಿಸುವುದು ಸಹಜ.ಆದರೆ ನರಹಳ್ಳಿ ಬಾಲಸುಬ್ರಹ್ಮಣ್ಯ ಈ ಸಾಲಿಗೆ ಸೇರುವ ಲೇಖಕರಲ್ಲ. ಸಾಹಿತ್ಯಾ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದರೂ ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದರು.
ಬಾಲ ಸುಬ್ರಹ್ಮಣ್ಯ ನಗರದಲ್ಲಿದುಕೊಂಡೆ ತಮ್ಮ ಹುಟ್ಟೂರು ನರಹಳ್ಳಿ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಗ್ರಾಮದಲ್ಲಿ ನರಹಳ್ಳಿ ಯುವ ಸಂಘವನ್ನು ಕಟ್ಟಿ ಯುವಕರನ್ನು ಸಾಮಾಜಿಕ ಕ್ಷೇತ್ರದಲ್ಲಿ ಕ್ರೀಯಾಶೀಲರನ್ನಾಗಿ ಮಾಡಿದ್ದಾರೆ. ಈ ಸಂಘದ ವತಿಯಿಂದ ಗ್ರಾಮದಲ್ಲಿ ಗ್ರಂಥಾಲಯ ತೆರೆಯಲಾಗಿದೆ. ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನರಹಳ್ಳಿಯನ್ನು ಆದರ್ಶ ಗ್ರಾಮವಾಗಿ ಬದಲಾಯಿಸಿದ್ದಾರೆ ಎಂದು ಹೇಳಿದರು.
ನಗರದ ಜನರಿಗೆ ಸಿಗುತ್ತಿರುವ ಸಾಹಿತ್ಯಾ ಪರಿಕರಗಳು, ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೂ ಸಿಗುವಂತಾಗಲಿ ಎಂದು ಅವರು, ಯೋಗ್ಯ ವ್ಯಕ್ತಿಯನ್ನು ಯೋಗ್ಯ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಅಭಿನಂದನೀಯ ಎಂದು ಶ್ಲಾಘಿಸಿದರು.
ಕತೆಗಾರ ವಸುಧೇಂದ್ರ ಮಾತನಾಡಿ, ಇಂಜಿನಿಯರ್ ಓದಿ ಐಟಿ ಬಿಟಿ ಕ್ಷೇತ್ರದಲ್ಲಿ ನೌಕರಿ ಮಾಡಿದರೇ ಕೇವಲ ಹಣ ಬಿಟ್ಟರೆ ಬೇರೇನೂ ಗಳಿಸಲು ಆಗಲ್ಲ ಎಂಬ ಏಕಾನ್ಮಾತೆ ನನ್ನನ್ನು ಕಾಡತೋಡಗಿತ್ತು. ಕನ್ನಡ ಸಾಹಿತ್ಯದಲ್ಲಿ ಏನಾದರೂ ಮಾಡಬೇಕು ಎಂಬ ಆಶಾಭಾವದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇಂಗ್ಲೆಂಡ್ ನಿಂದ ವಾಪಸ್ ಬಂದೆ. ಇದೇ ಕೆಲಸವನ್ನು ಸ್ನೇಹಿತ ದತ್ತಾತ್ರಿ ಮಾಡಿದರು ಎಂದು ಸ್ಮರಿಸಿಕೊಂಡರು.
ದತ್ತಾತ್ರಿ ಅವರ ಬರವಣಿಗೆಯಲ್ಲಿ ಗಾಢವಾದ ಅಧ್ಯಯನದ ಹೂರಣ, ಸೃಜನಶೀಲತೆ ಇದೆ. ಈ ಕಾರಣದಿಂದಲೇ ಅವರ ಬರವಣಿಗೆ ನನಗೆ ಇಷ್ಟ ಆಗುತ್ತೇ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ನರಹಳ್ಳಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಆನಂದರಾಮ ಉಪಾಧ್ಯ,ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಸೇರಿದಂತೆ ಇತರರು ಇದ್ದರು.
ಭಾಷೆಗೆ ಉದ್ಯೋಗವಿದೆ. ಆದರೆ, ಸಾಹಿತ್ಯಕ್ಕೆ ಉದ್ಯೋಗವಿಲ್ಲ. ಸಾಹಿತ್ಯ ಕ್ಷೇತ್ರಕ್ಕೂ ಉದ್ಯೋಗ ಪರಿಕಲ್ಪನೆ ಕೊಟ್ಟರೆ ಸಾಹಿತ್ಯ ತನ್ನಿಂದ ತಾನೇ ಬೆಳವಣಿಗೆ ಆಗುತ್ತದೆ.
-ಎಂ.ಆರ್.ದತ್ತಾತ್ರಿ ,ನರಹಳ್ಳಿ ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ