×
Ad

ನನಗೆ 65 ವರ್ಷ ಆಗಿದೆ, ನೀವೇ ಬನ್ನಿ: ತನಿಖಾಧಿಕಾರಿಗೆ ಬಿಎಸ್‌ವೈ ಪತ್ರ

Update: 2017-09-28 21:39 IST

ಬೆಂಗಳೂರು, ಸೆ.28: ವಿನಯ್ ಅಪಹರಣ ಪ್ರಕರಣ ಸಂಬಂಧ ವಿಚಾರಣೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗೈರಾಗಿದ್ದು, 65 ವರ್ಷ ವಯಸ್ಸು ದಾಟಿದ ನನ್ನನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆದರೆ, ಸಿಆರ್‌ಪಿಸಿ 160 ಕಲಂ ಅನ್ವಯ ತನಿಖಾಧಿಕಾರಿಯೇ ಬಂದು ಮಾಹಿತಿ ಪಡೆಯಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ, ಹಲ್ಲೆ ಪ್ರಕರಣ ಸಂಬಂಧ ವಿಚಾರಣೆಗೆ ಖುದ್ದು ಗುರುವಾರ(ಸೆ.28) ಬೆಳಗ್ಗೆ 10:30 ಸುಮಾರಿಗೆ ನಗರದ ಮಲ್ಲೇಶ್ವರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ 1ನೆ ಮಹಡಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಸಿಪಿ ಎ.ಆರ್.ಬಡಿಗೇರ್ ನೋಟಿಸ್ ಕಳುಹಿಸಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗೈರಾಗಿದ್ದು, ಈ ಸಂಬಂಧ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದು ಉಲ್ಲೇಖಿಸಿ ಎಸಿಪಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ: ಪೊಲೀಸ್ ಠಾಣೆಗೆ ಬಂದು ತನಿಖಾಧಿಕಾರಿ ಎದುರು ಹಾಜರಾಗಲು ನನಗೆ ಮಹಾಲಕ್ಷ್ಮೀ ಲೇಔಟ್ ಠಾಣೆಯಿಂದ ನೋಟಿಸ್ ನೀಡಲಾಗಿದೆ. ಆದರೆ, ನನ್ನ ಬಳಿ ಇರುವ ಯಾವ ದಾಖಲೆ ಬೇಕು ಎಂದು ತಿಳಿಸಿಲ್ಲ. ಅಲ್ಲದೆ, 65 ವರ್ಷ ವಯಸ್ಸು ದಾಟಿದ ನನ್ನನ್ನು ಠಾಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಆದರೆ, ಸಿಆರ್‌ಪಿಸಿ 160 ಕಲಂ ಅನ್ವಯ ತನಿಖಾಧಿಕಾರಿಯೇ ಬಂದು ಮಾಹಿತಿ ಪಡೆಯಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪೊಲೀಸರು ನನಗೆ ನೋಟಿಸ್ ನೀಡಿದ್ದ ವಿಳಾಸಕ್ಕೆ ಬಂದು ಮಾಹಿತಿ ಪಡೆಯಬೇಕಿತ್ತು. ಆದರೆ, ನೋಟಿಸ್‌ನಲ್ಲಿ ಠಾಣೆಗೆ ಬರುವಂತೆ ಸೂಚಿಸಲಾಗಿದೆ. ಪ್ರಕರಣ ಸಂಬಂಧ ತನಿಖೆಗೆ ನಾನು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧನಿದ್ದೇನೆ. ಪ್ರಕರಣದ ಸತ್ಯ ಹೊರಬರಬೇಕಿದೆ. ಹಾಗಾಗಿ ನನ್ನ ಬಳಿ ಬಂದರೆ ಸಹಕಾರ ನೀಡುತ್ತೇನೆ ಎಂದು ಪೊಲೀಸ್ ನೋಟಿಸ್‌ಗೆ ಉತ್ತರ ರವಾನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News