ಅ.1 ರಿಂದ ಡಿವೈಎಫ್ಐ ರಾಜ್ಯ ಸಮ್ಮೇಳನ
ಬೆಂಗಳೂರು, ಸೆ.30: ‘ಉದ್ಯೋಗ, ಅಭಿವೃದ್ಧಿ ಹಾಗೂ ಸಾಮರಸ್ಯಕ್ಕಾಗಿ’ ಎಂಬ ಘೋಷಣೆಯಡಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ನ 11 ನೆ ರಾಜ್ಯ ಸಮ್ಮೇಳನವನ್ನು ಅ.1 ರಿಂದ ಮೂರು ದಿನಗಳ ಕಾಲ ನಗರದ ಕೊಂಡಜ್ಜಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಮ್ಮೇಳನದ ಅಂಗವಾಗಿ ಅ.1 ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಸ್ವಾತಂತ್ರ ಹೋರಾಟಗಾರರ ಹುತಾತ್ಮ ಸ್ತಂಭದಿಂದ ಸಮ್ಮೇಳನ ಸಭಾಂಗಣದವರೆಗೂ ಹುತಾತ್ಮ ಜ್ಯೋತಿ ಯಾತ್ರೆ ಹಮ್ಮಿಕೊಂಡಿದ್ದು, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಕಾರ್ಮಿಕ ಮುಖಂಡ ಶ್ರೀನಿವಾಸ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಅನಂತರ ನಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಖ್ಯಾತ ಚಿತ್ರನಟ ಪ್ರಕಾಶ್ ರೈ ಉದ್ಘಾಟಿಸಲಿದ್ದು, ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ, ಡಿವೈಎಫ್ಐನ ಅಖಿಲ ಭಾರತ ಅಧ್ಯಕ್ಷರಾದ ಮಹಮದ್ ರಿಯಾಸ್, ಸಿಐಟಿಯು ಮುಖಂಡರಾದ ಮೀನಾಕ್ಷಿ ಸುಂದರಂ, ಡಿವೈಎಫ್ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಯದರ್ಶಿ ರಾಜಶೇಖರ ಮೂರ್ತಿ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಸಮ್ಮೇಳನದ ಭಾಗವಾಗಿ ಅ.2 ರಂದು ಮಧ್ಯಾಹ್ನ 12 ಗಂಟೆಗೆ ‘ಸಂವಿಧಾನದ ಕನಸುಗಳು’ ಉಪನ್ಯಾಸ ಕಾರ್ಯಕ್ರಮದಲ್ಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ವಿಷಯ ಮಂಡಿಸುವರು. ಅ.3 ರಂದು ಸಂಜೆ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು, ಡಿವೈಎಫ್ಐನ ಅಖಿಲ ಭಾರತ ಉಪಾಧ್ಯಕ್ಷೆ ಪ್ರೀತಿ ಶೇಖರ್, ಚಿಂತಕಿ ಡಾ.ಮೀನಾಕ್ಷಿ ಬಾಳಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.