ಜನರ ಜೊತೆ ‘ಕಾಮ್ ಕೀ ಬಾತ್’ ಸಿಎಂ ಸಂವಾದ
ಬೆಂಗಳೂರು, ಅ. 2: ನಮ್ಮದು ಕೇವಲ ಮನದ ಮಾತಲ್ಲ. ಕಾರ್ಯಾನುಷ್ಠಾನಕ್ಕೆ ನಮ್ಮ ಆದ್ಯತೆ. ಪ್ರಧಾನಿ ಮೋದಿಯವರ ಮನ್ ಕೀ ಬಾತ್ಗೆ ಪರ್ಯಾಯವಾಗಿ ನಾವು ಕಾಮ್ ಕೀ ಬಾತ್ ಯೋಜನೆ ರೂಪಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಗಾಂಧಿ ಜಯಂತಿ ಅಂಗವಾಗಿ ವಿಧಾನಸೌಧದಲ್ಲಿನ ಗಾಂಧಿ ಪ್ರತಿಮೆ ಹಾಗೂ ಲಾಲ್ಬಹದ್ದೂರ್ ಶಾಸ್ತ್ರಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಕೆಲಸವನ್ನು ಜನರಿಗೆ ಮನದಟ್ಟು ಮಾಡಲು ಹೊರಟಿದ್ದೇವೆ ಎಂದರು.
ಗಾಂಧಿ ಕೇವಲ ನಮ್ಮ ದೇಶಕ್ಕೆ ನಾಯಕರಲ್ಲ. ಅವರು ವಿಶ್ವ ನಾಯಕರು. ಗಾಂಧಿ ಮರೆತರೆ ನಮಗೆ ಭವಿಷ್ಯವಿಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ನಾವೆಲ್ಲ ಸಂಭ್ರಮದಲ್ಲಿದ್ದೆವು. ಆದರೆ, ಗಾಂಧೀಜಿಯವರು ನೋವಿನಲ್ಲಿದ್ದವರಿಗೆ ಸಾಂತ್ವನ ಹೇಳುತ್ತಿದ್ದರು.
ಯುದ್ಧವಿಲ್ಲದೆ ಯಾವುದೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಆದರೆ, ಸತ್ಯ, ಅಹಿಂಸೆ ಮಾರ್ಗದ ಮೂಲಕ ಸ್ವಾತಂತ್ರ್ಯ ತಂದುಕೊಟ್ಟ ಏಕೈಕ ವ್ಯಕ್ತಿ ಗಾಂಧೀಜಿ. ಅವರ ಮಾರ್ಗದರ್ಶನ, ಆದರ್ಶಗಳು ನಮಗೆಲ್ಲ ಪ್ರೇರಣೆಯಾಗಿರಬೇಕು. ಒಬ್ಬ ಮತಾಂಧನಿಂದ ಅವರು ಬಲಿಯಾಗಿದ್ದು ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮೌಲ್ಯಯುತ ವ್ಯಕ್ತಿತ್ವ ಹೊಂದಿದ್ದವರು. ಜೈ ಜವಾನ್-ಜೈ ಕಿಸಾನ್ ಮೂಲಕ ಕೃಷಿಕ ರೈತರನ್ನು ಹುರಿದುಂಬಿಸಿದರು. ಪ್ರಾಮಾಣಿಕ ರಾಜಕಾರಣಿಗಳಲ್ಲಿ ಮುಂಚೂಣಿ ಸಾಲಿನಲ್ಲಿ ನಿಲ್ಲುವವರು ಎಂದ ಅವರು, ಗಾಂಧಿ ಮತ್ತು ಶಾಸ್ತ್ರಿ ಆದರ್ಶ ಮಾದರಿ ಎಂದರು.
‘ನನ್ನ ಯೋಗಕ್ಷೇಮ ವಿಚಾರಿಸಲು ಬರುವ ಬದಲು ಜನರ ಆರೋಗ್ಯ ವಿಚಾರಣೆಗೆ ತೆರಳಬೇಕಿತ್ತು’ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಎಚ್ಡಿಕೆ ಶಸ್ತ್ರ ಚಿಕಿತ್ಸೆ ಹಿನ್ನೆಲೆಯಲ್ಲಿ ಸೌರ್ಜನ್ಯಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.
‘ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಬದಲಿಗೆ ‘ಕಾಮ್ ಕೀ ಬಾತ್’ ಹೆಸರಿನಲ್ಲಿ ನೂತನ ಯೋಜನೆ ಪ್ರಾರಂಭಿಸಲಿದ್ದು, ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಜನರೊಂದಿಗೆ ವಿಡಿಯೋ ಸಂವಾದ ಮೂಲಕ ನಡೆಸಲಾಗುವುದು. ನೂತನ ಯೋಜನೆಗೆ ‘ಕಾಮ್ ಕೀ ಬಾತ್’ ಎಂಬ ಹಿಂದಿ ಪದ ಬಳಕೆ ತಪ್ಪೇನು? ಬಸ್- ಕಾರ್ಗೆ ಕನ್ನಡದ ಪರ್ಯಾಯ ಪದಗಳೇನು?’
-ಸಿದ್ದರಾಮಯ್ಯ ಮುಖ್ಯಮಂತ್ರಿ