ಕರುಣಾಕರ ರೆಡ್ಡಿ ಗೆಲುವಿಗೆ ಮತದಾರರಿಂದ ಪ್ರಮಾಣ ಮಾಡಿಸಿದ ಬಿಜೆಪಿ ಮುಖಂಡ!
ಬಳ್ಳಾರಿ, ಅ. 3: ‘2018ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಹರಪ್ಪನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿರುವ ಮಾಜಿ ಸಚಿವ ಕರುಣಾಕರ ರೆಡ್ಡಿ ಅವರಿಗೆ ತಮ್ಮ ಮತ ನೀಡುವ ಮೂಲಕ ಆಯ್ಕೆ ಮಾಡುತ್ತೇವೆ’ ಎಂದು ಕರುಣಾಕರ ರೆಡ್ಡಿ ಸಮ್ಮುಖದಲ್ಲೆ ಉಪ್ಪಾರ ಸಮುದಾಯದಿಂದ ಆಣೆ-ಪ್ರಮಾಣ ಮಾಡಿಸಿದ ಘಟನೆ ವರದಿಯಾಗಿದೆ.
ಮಂಗಳವಾರ ಇಲ್ಲಿನ ಸಿರುಗುಪ್ಪ ರಸ್ತೆಯಲ್ಲಿನ ಕರುಣಾಕರ ರೆಡ್ಡಿ ನಿವಾಸದಲ್ಲಿ ಕ್ಷೇತ್ರದ ಉಪ್ಪಾರ ಸಮುದಾಯದ ಮುಖಂಡರ ಸಭೆ ನಡೆಸಿದರು. ಈ ವೇಳೆ ರೆಡ್ಡಿ ಸಮ್ಮುಖದಲ್ಲಿ ಬಿಜೆಪಿ ಮುಖಂಡರೊಬ್ಬರು, ಉಪ್ಪಾರ ಸಮುದಾಯದವರಿಂದ ಮುಂಬರುವ ಚುನಾವಣೆಯಲ್ಲಿ ಕರುಣಾಕರ ರೆಡ್ಡಿ ಅವರನ್ನು ಗೆಲ್ಲಿಸುತ್ತೇವೆ ಎಂದು ಆಣೆ ಮಾಡಿಸಿರುವುದನ್ನು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಕರುಣಾಕರ ರೆಡ್ಡಿ ಕ್ಷೇತ್ರದ ಎಲ್ಲ ಸಮುದಾಯದ ಮುಖಂಡರನ್ನು ತನ್ನ ನಿವಾಸಕ್ಕೆ ಕರೆಸಿಕೊಂಡು ಸಭೆ-ಸಮಾರಂಭಗಳನ್ನು ನಡೆಸುವುದು ಸಹಜ. ಆದರೆ, ಇದೀಗ ಆಣೆ ಮಾಡಿಸಿರುವುದು ತೀವ್ರ ವಿವಾದಕ್ಕೆ ಗ್ರಾಸವಾಗಿದೆ.
ಜೀವ ಇರುವವರೆಗೂ ಜನಸೇವೆ: ನಾನು ಶಾಸಕನಾಗಿ, ಸಚಿವನಾಗಿ ನನ್ನ ಕ್ಷೇತ್ರಕ್ಕೆ ಮಾಡಿದ ಸೇವೆ ಪರಿಗಣಿಸಿ ಸ್ವ ಇಚ್ಛೆಯಿಂದ ನನ್ನ ಮನೆಗೆ ಆಗಮಿಸಿ ಬೆಂಬಲ ಸೂಚಿಸುತ್ತಿರುವ ಹರಪನಹಳ್ಳಿ ಕ್ಷೇತ್ರದ ಜನತೆಗೆ ನನ್ನ ಜೀವ ಇರುವವರೆಗೂ ಸೇವೆ ಸಲ್ಲಿಸುತ್ತೇನೆ ಎಂದು ಕರುಣಾಕರರೆಡ್ಡಿ ಇದೇ ವೇಳೆ ಘೋಷಿಸಿದರು.
ಈ ವೇಳೆ ಮಾತನಾಡಿದ ಅವರು, ಭಗೀರಥನನ್ನು ನೆನೆಸಿಕೊಂಡು ನೀವೆಲ್ಲಾ ಬಂದಿದ್ದೀರಿ. ಯಾವುದೇ ಸುದೀರ್ಘ ಪ್ರಯತ್ನ ನಡೆಸಿದರೆ ಅದನ್ನು ಭಗೀರಥ ಪ್ರಯತ್ನ ಎಂದೇ ಕರೆಯುವ ರೂಢಿ ಇದೆ. ಗಂಗಾನದಿ ಭಗೀರಥನಿಂದಾಗಿಯೇ ಇಂದಿಗೂ ಪಾವಿತ್ರ್ಯತೆ ಪಡೆದಿದೆ. ಅದೇರೀತಿ, ನೀವೆಲ್ಲರೂ ಆಗಮಿಸಿ ನನ್ನನ್ನು ಬೆಂಬಲಸಿದ್ದೀರಿ. ನಿಮ್ಮೆಲ್ಲರ ಪ್ರೀತಿ ಗಮನಿಸಿದರೆ ನಾನು ಕಳೆದ ಜನ್ಮದಲ್ಲಿ ಬಹುಶಃ ಹರಪನಹಳ್ಳಿ ಕ್ಷೇತ್ರದ ಜನರ ವಿಶ್ವಾಸಕ್ಕೆ ಪಾತ್ರನಾಗಿರಬೇಕೆನಿಸುತ್ತದೆ ಎಂದು ಸ್ಮರಿಸಿದರು.
ಕ್ಷೇತ್ರದ ಎಲ್ಲ ಸಮುದಾಯದ ಜನರ ಪ್ರೀತಿ ಪಡೆದಿರುವುದು ನಿಜಕ್ಕೂ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಕಳೆದ ಬಾರಿ ಶಾಸಕನಾಗಿದ್ದಾಗ 60 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಆದ್ಯತೆ ನೀಡಿದ್ದೆ. ಎಸ್ಸಿ-ಎಸ್ಟಿ ಕಾಲನಿಗಳಲ್ಲಿ ರಸ್ತೆ, ಸಮುದಾಯ ಭವನಗಳ ನಿರ್ಮಾಣಕ್ಕೆ ಮಾಡಲಾಗಿತ್ತು ಎಂದು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿದರು.
ಹರಪನಹಳ್ಳಿ ಕ್ಷೇತ್ರದ ಶಾಸಕ ಎಂ.ಪಿ.ರವೀಂದ್ರ ಹೆಸರಿಗೆ ಮಾತ್ರ ಶಾಸಕರಾಗಿದ್ದು, ಅವರು ಕ್ಷೇತ್ರದ ಯಾವುದೇ ಹಳ್ಳಿಗಳಿಗೆ ಸಂಚರಿಸಿಲ್ಲ. ಸುಳ್ಳು ಹೇಳುವ ಮೂಲಕ ಕಾಲಹರಣ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲು ಅವರಿಂದ ಆಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಸರಕಾರವನ್ನು ನಂಬಬೇಡಿ ಎಂದು ಕರುಣಾಕರ ರೆಡ್ಡಿ ಕೋರಿದರು.