‘ಪಟಾಕಿ ತಾಜ್ಯ ರಸ್ತೆ ಮೇಲೆ ಹಾಕಿದರೆ ಕ್ರಮ’ : ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್
ಬೆಂಗಳೂರು, ಅ. 16: ಸಾರ್ವಜನಿಕರು ಹಬ್ಬದ ದಿನಗಳಲ್ಲಿ ಪಾದಚಾರಿ ಮಾರ್ಗಗಳ ಮೇಲೆ ಪೂಜೆ ಮತ್ತು ಇತರೆ ಸಾಮಾಗ್ರಿಗಳ ಮಾರಾಟ, ಪಟಾಕಿಗಳ ಮಾರಾಟ ಮಳಿಗೆಗಳನ್ನು ಇಡುವುದು, ಮಾರಾಟ ಮಾಡಿ ಉಳಿದ ತ್ಯಾಜ್ಯ ವಸ್ತುಗಳನ್ನು ರಸ್ತೆಯ ಮೇಲೆ ಹಾಕುವುದನ್ನು ನಿಷೇಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಎಚ್ಚರಿಸಿದ್ದಾರೆ.
ನಗರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿಗಳ ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗುತ್ತದೆ. ಈ ತ್ಯಾಜ್ಯವು ರಸ್ತೆ, ಚರಂಡಿಗಳಲ್ಲಿ ತುಂಬಿಕೊಂಡು ಮಳೆ ನೀರು ಸರಾಗವಾಗಿ ಹರಿಯಲು ಅಡಚಣೆಯುಂಟಾಗುತ್ತದೆ. ಇದರಿಂದ ಪರಿಸರ ಮಾಲಿನ್ಯ ಮತ್ತು ಹಲವು ವಿಪತ್ತುಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಎಂಜಿನಿಯರಿಂಗ್ ಮತ್ತು ಆರೋಗ್ಯ ಇಲಾಖೆಗಳ ಸಿಬ್ಬಂದಿ ವರ್ಗದವರಿಗೆ ಮುಂಜಾಗ್ರತೆ ವಹಿಸುವಂತೆ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿ, ನಗರದ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಲು ಈ ಕೆಳಕಂಡ ಅಂಶಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಸಾರ್ವಜನಿಕರು ಪಟಾಕಿ ತ್ಯಾಜ್ಯಗಳನ್ನು ಯಾವುದೇ ಕಾರಣಕ್ಕೂ ರಸ್ತೆ ಬದಿ ಮೋರಿಗಳಿಗೆ ಹಾಕದಂತೆ ಎಚ್ಚರವಹಿಸಲು ಮತ್ತು ತ್ಯಾಜ್ಯಗಳನ್ನು ಒಂದೆಡೆ ಗುಡ್ಡೆ ಹಾಕಿ, ಪಾಲಿಕೆಯ ತಳ್ಳುವ ಗಾಡಿಗಳಿಗೆ ನೀಡಬೇಕು. ಪಾಲಿಕೆಯ ಎಂಜಿನಿಯರಿಂಗ್ ಮತ್ತು ಆರೋಗ್ಯ ಇಲಾಖೆಗಳ ಸಿಬ್ಬಂದಿ ವರ್ಗದವರು ರಸ್ತೆಗಳನ್ನು ಸ್ವಚ್ಛಗೊಳಿಸುವಾಗ ಮೋರಿಯ ಮುಂಭಾಗದಲ್ಲಿ ನೀರು ಸರಾಗವಾಗಿ ಹರಿಯದಂತೆ ಕಟ್ಟಿಕೊಂಡಿರುವ ಕಸ, ಕಾಗದದ ಚೂರುಗಳು, ಪ್ಲಾಸ್ಟಿಕ್ ಚೂರುಗಳನ್ನು ತೆಗೆದು, ಸಮರ್ಪಕವಾದ ರೀತಿಯಲ್ಲಿ ಸ್ವಚ್ಛತಾ ಕೆಲಸವನ್ನು ನಿರ್ವಹಿಸುವುದು.
ಪಾಲಿಕೆ ಸಿಬ್ಬಂದಿ ರಸ್ತೆ ಸ್ವಚ್ಛಗೊಳಿಸುವಾಗ ಸಾರ್ವಜನಿಕರು ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿರುವುದರಿಂದ ಸ್ವಚ್ಛತಾ ಕೆಲಸಕ್ಕೆ ಅಡ್ಡಿಯುಂಟಾಗುತ್ತದೆ. ಆದುದರಿಂದ ಸಾರ್ವಜನಿಕರು ಪಾಲಿಕೆ ಸಿಬ್ಬಂದಿ ವರ್ಗದವರೊಡನೆ ಸಹಕರಿಸಿ, ಸ್ವಚ್ಛತೆಗೆ ಅನುವು ಮಾಡಿಕೊಡುವುದು.
ಸಾರ್ವಜನಿಕರು ಪಟಾಕಿಗಳನ್ನು ಹಾರಿಸುವಾಗ ಆಕಸ್ಮಿಕ ಅವಘಡಕ್ಕೆ ಒಳಗಾದಲ್ಲಿ ಅಂತಹವರಿಗೆ ಪಾಲಿಕೆ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಮಾತ್ರ ಹಾಗೂ ಪಾಲಿಕೆಯ ಎಲ್ಲ ಆಸ್ಪತ್ರೆಗಳಲ್ಲಿ ಪ್ರಾಥಮಿಕ ತುರ್ತು ಚಿಕಿತ್ಸೆ ನೀಡಲು ವೈದ್ಯರ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕಾರ್ಯಪಾಲಕ ಅಭಿಯಂತರರು ತಮ್ಮ ತಮ್ಮ ವಾರ್ಡ್ಗಳಲ್ಲಿ ಪಾಲಿಕೆಯಿಂದ ಕೈಗೊಳ್ಳಲಾದ ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆಯನ್ನು ನಡೆಸುವುದು. ಮತ್ತು ಯಾವುದೇ ಸಮಸ್ಯೆಗಳಿಗೆ ಎಡೆಮಾಡಿಕೊಡದೇ ಸಮರ್ಪಕವಾಗಿ ನಿಭಾಯಿಸಿ, ಪರಿಹಾರ ಕ್ರಮ ಕೈಗೊಳ್ಳುವುದು.
ದೂರುಗಳಿದ್ದಲ್ಲಿ ನಿಯಂತ್ರಣ ಕೊಠಡಿ ದೂ.ಸಂಖ್ಯೆ: 2266 0000, 2222 1188 ಅನ್ನು ಸಂಪರ್ಕಿಸಬಹುದು. ಸಾರ್ವಜನಿಕರು ನಗರ ಸ್ವಚ್ಛತೆ ಮತ್ತು ನೈರ್ಮಲ್ಯ ಕಡೆಗೆ ವಿಶೇಷ ಗಮನ ಹರಿಸಿ, ಮನೆ ಮುಂದೆ ಮತ್ತು ರಸ್ತೆ ಮೇಲೆ ಹರಡಿರುವ ಕಸವನ್ನು ಸಂಗ್ರಹಿಸಿ, ಪಾಲಿಕೆ ಆಟೋ/ತಳ್ಳುವ ಗಾಡಿಗಳಿಗೆ ನೀಡಲು ಪಾಲಿಕೆ ಕೋರಿದೆ. ಹಬ್ಬವನ್ನು ಆಚರಿಸುವುದರ ಜೊತೆಗೆ ನಗರ ನೈರ್ಮಲ್ಯ ಕಾಪಾಡಲು ಪಾಲಿಕೆಯೊಂದಿಗೆ ಸಹಕರಿಸಲು ಕೋರಿದೆ.
ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಆಚರಿಸುವುದರೊಂದಿಗೆ ಪರಿಸರ ಮಾಲಿನ್ಯಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ಪಟಾಕಿಗಳನ್ನು ಸಿಡಿಸಿದಾಗ ಅದರಿಂದ ಅಪಾಯಕಾರಿ ಅನಿಲ ಉತ್ಪತ್ತಿಯಾಗಿ ಮಕ್ಕಳ ಆರೋಗ್ಯದ ಮೇಲೆ ಮತ್ತು ವಾತಾವರಣದಲ್ಲಿ ಸೇರಿಕೊಂಡು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ. ಆದುದರಿಂದ ಸಾರ್ವಜನಿಕರು ಆದಷ್ಟು ಕಡಿಮೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಿ, ಪರಿಸರ ರಕ್ಷಣೆಗಾಗಿ ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.