ಮುರಿದು ಬಿದ್ದ ಕಾಂಕ್ರಿಟ್ ಸೇತುವೆ: 6 ಮಂದಿಗೆ ಗಾಯ
Update: 2017-10-20 09:11 GMT
ಹೊಸದಿಲ್ಲಿ, ಅ.20: ಹಿಮಾಚಲ ಪ್ರದೇಶದ ಚಂಬಾ ಹಾಗು ಪಂಜಾಬ್ ನ ಪಠಾಣ್ ಕೋಟ್ ಸಂಪರ್ಕಿಸುವ ಕಾಂಕ್ರಿಟ್ ಸೇತುವೆಯೊಂದು ಮುರಿದು ಬಿದ್ದ ಪರಿಣಾಮ 6 ಮಂದಿ ಗಾಯಗೊಂಡ ಘಟನೆ ನಡೆದಿದೆ.
ಗಾಯಾಳುಗಳನ್ನು ಪಂಡಿತ್ ಜವಹರಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದ್ದು. ತಕ್ಷಣವೇ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾಧಿಕಾರಿ ಸುದೇಶ್ ಕುಮಾರ್ ಅವರು ಇತರ ಅಧಿಕಾರಿಗಳೊಂದಿಗೆ ಸ್ಥಳಕ್ಕಾಗಮಿಸಿದ್ದಾರೆ.
“ನಿರ್ಮಾಣ ನಕ್ಷೆಯಲ್ಲಿನ ಸಮಸ್ಯೆ ಅಥವಾ ಕಳಪೆ ಗುಣಮಟ್ಟದ ವಸ್ತುಗಳ ಬಳಕೆಯಿಂದಾಗಿ ಸೇತುವೆ ಕುಸಿದಿದೆ. ಈ ಬಗ್ಗೆ ತನಿಖೆಗೆ ಈಗಾಗಲೇ ಆದೇಶಿಸಲಾಗಿದೆ” ಎಂದವರು ಹೇಳಿದ್ದಾರೆ.
ಘಟನೆ ನಡೆದಾಗ ಸೇತುವೆಯಲ್ಲಿ ಕಾರು, ಒಂದು ಮಿನಿ ಟ್ರಕ್ ಹಾಗು ಬೈಕೊಂದು ಸಾಗುತ್ತಿತ್ತು. ಸೇತುವೆ ಮುರಿದಾಗ ಬೈಕ್ ನದಿಗೆ ಬಿದ್ದಿದ್ದರೆ, ಕಾರು ಹಾಗು ಟ್ರಕ್ ಸೇತುವೆಯಲ್ಲೇ ಬಾಕಿಯಾಗಿತ್ತು.